ಔಷಧ ಕಂಪೆನಿ ಅಧಿಕಾರಿ ವಿಚಾರಣೆ: ಠಾಣೆಗೆ ನುಗ್ಗಿದ ಫಡ್ನವೀಸ್
ಮುಂಬೈ, ಏಪ್ರಿಲ್ 19: ಮಹಾರಾಷ್ಟ್ರದಲ್ಲಿ ಕೋವಿಡ್ ಪಿಡುಗಿನ ಸನ್ನಿವೇಶವು ಆಡಳಿತಾರೂಢ ಮಹಾ ವಿಕಾಸ್ ಅಘಾದಿ ಸರ್ಕಾರ ಮತ್ತು ವಿರೋಧಪಕ್ಷ ಬಿಜೆಪಿ ನಡುವೆ ಮತ್ತೊಂದು ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ. ಕೋವಿಡ್ ಚಿಕಿತ್ಸೆಯಲ್ಲಿ ಪ್ರಮುಖವಾಗಿ ಬಳಕೆಯಾಗುತ್ತಿರುವ ರೆಮ್ಡೆಸಿವಿರ್ ಔಷಧದ ಪೂರೈಕೆ ವಿಚಾರದಲ್ಲಿ ಔಷಧ ಕಂಪೆನಿಯೊಂದರ ನಿರ್ದೇಶಕರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಅವರನ್ನು ರಕ್ಷಿಸಲು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮಧ್ಯಪ್ರವೇಶ ಮಾಡಿದ್ದಾರೆ.
ಬ್ರುಕ್ ಫಾರ್ಮಾ ಕಂಪೆನಿಯ ನಿರ್ದೇಶಕ ರಾಜೇಶ್ ದೊಕಾನಿಯಾ ಅವರನ್ನು ಪೊಲೀಸರು ಶನಿವಾರ ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದರು. ಇದರಿಂದ ಆಕ್ರೋಶಗೊಂಡ ಫಡ್ನವೀಸ್ ಅವರು ಬಿಕೆಸಿ ಪೊಲೀಸ್ ಠಾಣೆಗೆ ತೆರಳಿ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ವಿಧಾನಪರಿಷತ್ತಿನ ವಿರೋಧಪಕ್ಷದ ನಾಯಕ ಪ್ರವೀಣ್ ದಾರೇಕರ್ ಕೂಡ ಪೊಲೀಸರ ಜತೆ ಮಾತಿನ ಚಕಮಕಿ ನಡೆಸಿದರು.
ಮಹಾರಾಷ್ಟ್ರದಲ್ಲಿ ಒಂದೇ ದಿನ 68,000ಕ್ಕೂ ಹೆಚ್ಚು ಕೊರೊನಾ ಕೇಸ್!
ಎಬೋಲಾ ವೈರಸ್ ವಿರುದ್ಧದ ಚಿಕಿತ್ಸೆಗೆ ಅಭಿವೃದ್ಧಿಪಡಿಸಲಾದ ರೆಮ್ಡೆಸಿವಿರ್ ಔಷಧವನ್ನು ಕೋವಿಡ್-19ರ ಚಿಕಿತ್ಸೆಗೂ ಬಳಸುತ್ತಿದ್ದು, ಜಗತ್ತಿನಾದ್ಯಂತ ಅದಕ್ಕೆ ತೀವ್ರ ಬೇಡಿಕೆ ಇದೆ. ಈಗಾಗಲೇ ಅನೇಕ ರಾಜ್ಯಗಳು ರೆಮ್ಡೆಸಿವಿರ್ ಕೊರತೆ ಎದುರಿಸುತ್ತಿವೆ. ರೆಮ್ಡಿಸಿವಿರ್ ವೈರಸ್ ವಿರುದ್ಧ ಪರಿಣಾಮಕಾರಿಯೇ ಎನ್ನುವುದು ಇದುವರೆಗೆ ದೃಢಪಡದೆ ಇದ್ದರೂ ಅದನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಸರ್ಕಾರ ಕೂಡ ಔಷಧದ ರಫ್ತನ್ನು ನಿಷೇಧಿಸಿದೆ.
ಬ್ರುಕ್ ಫಾರ್ಮಾ ಪ್ರೈ ಲಿ ಕಂಪೆನಿಯ ಮುಂಬೈ ಮೂಲದ ನಿರ್ದೇಶಕ ರಾಜೇಶ್ ದೊಕಾನಿಯಾ ಅವರಿಗೆ ಶನಿವಾರ ಸಮನ್ಸ್ ನೀಡಿದ್ದ ಬಾಂದ್ರಾ ಕರ್ಲಾ ಕಾಂಪ್ಲೆಕ್ಸ್ ಪೊಲೀಸರು, ಕಂಪೆನಿಯು ನಗರದಲ್ಲಿ 60,000 ರೆಮ್ಡೆಸಿವಿರ್ ಇಂಜೆಕ್ಷನ್ಗಳನ್ನು ಅಕ್ರಮವಾಗಿ ಸಂಗ್ರಹದಲ್ಲಿ ಇರಿಸಿಕೊಂಡಿದೆ ಎಂಬ ಮುಂಬೈ ಪೊಲೀಸರ ನಿರ್ದಿಷ್ಟ ಮಾಹಿತಿ ಆಧಾರದಲ್ಲಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು.
ರಾಜ್ಯದಲ್ಲಿ ರೆಮ್ಡೆಸಿವಿರ್ ಪೂರೈಕೆ ಮಾಡದಂತೆ ಔಷಧ ಕಂಪೆನಿಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡುತ್ತಿದೆ ಎಂದು ಆರೋಪಿಸಿದ್ದ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್, ಅಂತಹ ಕಂಪೆನಿಗಳ ಸಂಗ್ರಹವನ್ನು ವಶಪಡಿಸಿಕೊಳ್ಳುವುದರ ಹೊರತಾಗಿ ಮಹಾರಾಷ್ಟ್ರ ಸರ್ಕಾರಕ್ಕೆ ಬೇರೆ ದಾರಿ ಇಲ್ಲ ಎಂದು ಹೇಳಿದ್ದರು.
ಮಹಾರಾಷ್ಟ್ರ ಕೊರೊನಾ 3ನೇ ಅಲೆಗೆ ಸಿದ್ಧಗೊಳ್ಳುತ್ತಿದೆ: ಆದಿತ್ಯ ಠಾಕ್ರೆ
ಮರುದಿನವೇ ರಾಜೇಶ್ ದೊಕಾನಿಯಾ ಅವರನ್ನು ವಿಚಾರಣೆಗೆ ಒಳಪಡಿಸಿರುವುದು ವಿವಾದ ಸೃಷ್ಟಿಸಿದೆ. ರಾಜೇಶ್ ದೊಕಾನಿಯಾ ಅವರಿಗೆ ಅನಗತ್ಯವಾಗಿ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ ಫಡ್ನವೀಸ್ ಮತ್ತು ಇತರೆ ಬಿಜೆಪಿ ಮುಖಂಡರು, ಅವರನ್ನು ಏಕೆ ಠಾಣೆಗೆ ಕರೆಸಿಕೊಳ್ಳಲಾಗಿದೆ ಎಂಬುದಕ್ಕೆ ಸೂಕ್ತ ವಿವರಣೆ ನೀಡುವಂತೆ ಪಟ್ಟು ಹಿಡಿದರು.
ಮಹಾರಾಷ್ಟ್ರಕ್ಕೆ ಔಷಧ ಪೂರೈಕೆ ಮಾಡುವ ವಿಚಾರವಾಗಿ ತಾವು ಮತ್ತು ದಾರೇಕರ್ ಅವರು ಕಂಪನಿ ಜತೆ ಸಂಪರ್ಕದಲ್ಲಿದ್ದೆವು. ರೆಮ್ಡೆಸಿವಿರ್ ಖರೀದಿಗಾಗಿ ಬಿಜೆಪಿ ರಾಜ್ಯ ಘಟಕದ 4.75 ಕೋಟಿ ರೂಪಾಯಿ ನೀಡಲು ಸಿದ್ಧವಾಗಿತ್ತು. ದಾಮನ್ನಲ್ಲಿನ ಕಂಪೆನಿಯ ಉತ್ಪಾದನಾ ಘಟಕಕ್ಕೆ ಕಳೆದ ಸೋಮವಾರ ದಾರೇಕರ್ ಭೇಟಿ ನೀಡಿದ್ದರು. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಅಗತ್ಯ ಅನುಮತಿ ದೊರಕಿತ್ತು. ಈ ಲಸಿಕೆಗಳನ್ನು ಖರೀದಿಸಿ ಅದನ್ನು ಸರ್ಕಾರದ ಇಲಾಖೆಗಳ ಮೂಲಕ ವಿತರಿಸಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ನೀಡಲು ಬಿಜೆಪಿ ಉದ್ದೇಶಿಸಿತ್ತು ಎಂದು ಫಡ್ನವೀಸ್ ತಿಳಿಸಿದ್ದಾರೆ.
ಬ್ರುಕ್ ನಿರ್ದೇಶಕರನ್ನು 45 ನಿಮಿಷಗಳ ಬಳಿಕ ಠಾಣೆಯಿಂದ ಹೋಗಲು ಬಿಡಲಾಯಿತು. ಪೊಲೀಸರು ರೆಮ್ಡೆಸಿವಿರ್ ಸಂಗ್ರಹವನ್ನು ವಶಪಡಿಸಿಕೊಂಡಿಲ್ಲ. ಕಂಪೆನಿ ವಿರುದ್ಧ ಯಾವುದೇ ಪ್ರಕರಣ ದಾಖಲಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಹಾರಾಷ್ಟ್ರದಲ್ಲಿ 60,000 ರೆಮ್ಡೆಸಿವಿರ್ ಇಂಜೆಕ್ಷನ್ಗಳನ್ನು ನೇರವಾಗಿ ಮಾರುಕಟ್ಟೆ ಮಾಡಲು ಬ್ರುಕ್ ಕಂಪೆನಿಗೆ ರಾಜ್ಯ ಸರ್ಕಾರ ನೀಡಿರುವ ಅನುಮತಿ ಪ್ರತಿಯನ್ನು ಫಡ್ನವೀಸ್ ತೋರಿಸಿದರು. ಬಿಜೆಪಿಯು ಈ ಲಸಿಕೆಗಳನ್ನು ಖರೀದಿಸಿ ಸರ್ಕಾರಕ್ಕೆ ನೀಡಲು ಮುಂದಾಗಿದ್ದನ್ನು ಸಹಿಸಲಾಗದೆ ಕಂಪೆನಿ ನಿರ್ದೇಶಕರನ್ನು ಬಂಧಿಸುವ ಮಟ್ಟಕ್ಕೆ ಸರ್ಕಾರ ಹೋಗಿದೆ ಎಂದು ಬಿಜೆಪಿ ಆರೋಪಿಸಿದೆ.