ವಿಶ್ವಾಸಮತ ಯಾಚನೆಗೂ ಮುನ್ನ ಶಸ್ತ್ರತ್ಯಾಗ ಮಾಡಿದ ದೇವೇಂದ್ರ
Recommended Video
ಮುಂಬೈ, ನವೆಂಬರ್ 26: ಮಹಾರಾಷ್ಟ್ರ ರಾಜಕೀಯದಲ್ಲಿ ಶನಿವಾರದಂದು ಉಂಟಾದ ಕ್ಷಿಪ್ರ ಬೆಳವಣಿಗೆಯಲ್ಲಿ ಬಿಜೆಪಿಯ ದೇವೇಂದ್ರ ಫಡ್ನವೀಸ್ ಹಾಗೂ ಎನ್ಸಿಪಿಯ ಅಜಿತ್ ಪವಾರ್ ಕ್ರಮವಾಗಿ ಸಿಎಂ, ಡಿಸಿಎಂ ಆಗಿದ್ದರು. ಈಗ ದಿಢೀರ್ ಬೆಳವಣಿಗೆಯಲ್ಲಿ ಬುಧವಾರದಂದು ವಿಶ್ವಾಸಮತ ಯಾಚನೆ ಮಾಡುವುದಕ್ಕೂ ಮುನ್ನವೇ ಶಸ್ತ್ರತ್ಯಾಗ ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನ ಸುದ್ದಿಗೋಷ್ಠಿಯಲ್ಲಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿಗೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಣೆ ಮಾಡಿದ ದೇವೇಂದ್ರ, ಬಿಜೆಪಿಗೆ ಜನಾದೇಶ ಸಿಕ್ಕಿದ್ದರೂ ಶಿವಸೇನಾ ಕುತಂತ್ರದಿಂದ ಅಧಿಕಾರ ಸಿಕ್ಕಿಲ್ಲ ಎಂದರು.
LIVE: ಸಿಎಂ ರಾಜೀನಾಮೆ, ಮೂರೇ ದಿನಕ್ಕೆ ಉರುಳಿದ ಮಹಾರಾಷ್ಟ್ರ ಸರ್ಕಾರ
ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಭವಿಷ್ಯ ನಿರ್ಧರಿಸುವ ಮುಹೂರ್ತವನ್ನು ಸುಪ್ರೀಂಕೋರ್ಟ್ ಇಂದು ನಿಗದಿಪಡಿಸಿತ್ತು. ದೇವೇಂದ್ರ ಫಡ್ನವೀಸ್ ಅವರು ನವೆಂಬರ್ 27ರಂದು ಬಹುಮತ ಸಾಬೀತುಪಡಿಸಬೇಕಾಗಿತ್ತು. ಸುಪ್ರೀಂಕೋರ್ಟ್ ನಿರ್ದೇಶನದಂತೆ ವಿಶ್ವಾಸಮತ ಯಾಚನೆ ಪ್ರಕ್ರಿಯೆಯನ್ನು ನಡೆಸಲು ಹಂಗಾಮಿ ಸ್ಪೀಕರ್ ನೇಮಕವಾಗಬೇಕಾಗಿತ್ತು. ಆದರೆ ಇದಕ್ಕೂ ಮುನ್ನವೇ ರಾಜೀನಾಮೆ ನೀಡಿದ್ದಾರೆ.
ನ್ಯಾ. ಎನ್ ವಿ ರಮಣ, ಜಸ್ಟೀಸ್ ಅಶೋಕ್ ಭೂಷಣ್ ಹಾಗೂ ಜಸ್ಟೀಸ್ ಸಂಜೀವ್ ಖನ್ನಾ ಅವರು ಭಾನುವಾರದಂದು ಶಿವಸೇನಾ-ಕಾಂಗ್ರೆಸ್- ಎನ್ಸಿಪಿ ಸದಸ್ಯರು ಸಲ್ಲಿಸಿದ ರಿಟ್ ಅರ್ಜಿಯ ವಿಚಾರಣೆ ನಡೆಸಿ ತೀರ್ಪು ನೀಡಿದ್ದರು.
ನಮ್ಮ ಬಳಿ ಬಹುಮತ ಸಂಖ್ಯೆಯಿಲ್ಲ: ದೇವೇಂದ್ರ
ಎನ್ಸಿಪಿ ಅಜಿತ್ ಪವಾರ್ ಅವರು ರಾಜೀನಾಮೆ ನೀಡಿ, ಎನ್ಸಿಪಿಗೆ ಮರಳಿದ ಬಳಿಕ ಸಿಎಂ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ ದೇವೇಂದ್ರ, ಬಿಜೆಪಿ ಬಳಿ ಬಹಮತಕ್ಕೆ ಬೇಕಾದ 145 ಸಂಖ್ಯೆಯಿಲ್ಲ. ಕುದುರೆ ವ್ಯಾಪಾರ ಮಾಡಿ ಸರ್ಕಾರ ಉಳಿಸಿಕೊಳ್ಳುವುದಿಲ್ಲ. ಜನಾದೇಶ ಪಡೆದಿದ್ದ ಬಿಜೆಪಿ ವಿಪಕ್ಷವಾಗಿ ಕಾರ್ಯ ನಿರ್ವಹಿಸಲು ಸಿದ್ಧವಾಗಿದ್ದು, ಸಮರ್ಥವಾಗಿ ಜನರ ದನಿಯಾಗಿ ಹೊರಹೊಮ್ಮಲಿದೆ ಎಂದರು.
ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ರಾಜೀನಾಮೆ
ಮೂರು ಚಕ್ರದ ಗಾಲಿಯ ಮೇಲಿನ ಸರ್ಕಾರ ಯಾವಾಗ ಸಮತೋಲನ ತಪ್ಪುವುದೋ ಗೊತ್ತಿಲ್ಲ. ನಾವು ಸರ್ಕಾರ ಉರುಳಿಸುವ ಕಾರ್ಯಕ್ಕೂ ಕೈ ಹಾಕಿಲ್ಲ. ಶಿವಸೇನಾದಂತೆ ಅಧಿಕಾರ ದಾಹ ನಮಗಿಲ್ಲ.
105 ಸ್ಥಾನ ಗಳಿಸಿದ ಬಳಿಕ ಮಾತುಕತೆ ಬದಲಿಗೆ ಬೆದರಿಕೆ ತಂತ್ರಕ್ಕೆ ಶಿವಸೇನೆ ಶರಣಾಗಿತ್ತು. ಎರಡೂವರೆ ವರ್ಷಗಳ ಅವಧಿಗೆ ಸಿಎಂ ಬದಲಿ ಮಾಡುವುದು, ಶಿವಸೇನಾಕ್ಕೆ ಸಿಎಂ ಸ್ಥಾನ ನೀಡುವ ಬಗ್ಗೆ ಯಾವುದೇ ಒಪ್ಪಂದವಾಗಿರಲಿಲ್ಲ. ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ಬದಲು ಸಮಸ್ಯೆಯನ್ನು ಹೊತ್ತುಕೊಂಡು ಹೊಸ ಗೆಳೆಯರನ್ನು ಕೂಡಿ ಸರ್ಕಾರ ರಚನೆಗೆ ಮುಂದಾಗಿದ್ದು ದುರಂತ ಎಂದರು.