'ಸಂಗಾತಿಯ ಆಯ್ಕೆ ವೈಯಕ್ತಿಕ ನಿರ್ಧಾರ, ರಾಜ್ಯ-ಸಮಾಜ ಮೂಗು ತೂರಿಸುವಂತಿಲ್ಲ' - ಬಾಂಬೆ ಹೈಕೋರ್ಟ್
ಮುಂಬೈ, ಜೂ.19: ಒಬ್ಬ ವ್ಯಕ್ತಿಯು ಅವನ / ಅವಳ ವೈವಾಹಿಕ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕನ್ನು ಹೊಂದಿದ್ದಾರೆ. ಇದಕ್ಕೆ ರಾಜ್ಯ ಅಥವಾ ಸಮಾಜವು ಮೂಗು ತೂರಿಸಬಾರದು. ತನ್ನ ಬಾಳ ಸಂಗಾತಿಯ ಆಯ್ಕೆಯ ನಿರ್ಧಾರ ವ್ಯಕ್ತಿಯ ಬಿಟ್ಟದ್ದು ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಇತ್ತೀಚೆಗೆ ಮಹಿಳೆಯೋರ್ವರ ತಂದೆ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ತಿರಸ್ಕರಿಸಿದೆ.
ತನ್ನ ಮಗಳು ಖಲೀದಾ ಸುಬಿಯಾಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಹಾಗೂ ಆಕೆಯನ್ನು ತನ್ನ ಉಸ್ತುವಾರಿಗೆ ನೀಡುವಂತೆ ನಿರ್ದೇಶನಗಳನ್ನು ಕೋರಿ ಅರ್ಜಿದಾರರಾದ ಜುನೆದ್ ಅಹ್ಮದ್ ಮುಜೀಬ್ ಖಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ವಿ.ಕೆ.ಜಾಧವ್ ಮತ್ತು ಎಸ್.ಡಿ.ಕುಲಕರ್ಣಿರನ್ನು ಒಳಗೊಂಡ ಪೀಠ ನಡೆಸಿದೆ.
ಲಿವ್ ಇನ್ ಸಂಬಂಧದಲ್ಲಿರುವ ಜೋಡಿಗೆ ರಕ್ಷಣೆ ಒದಗಿಸಲು ಸುಪ್ರೀಂ ಆದೇಶ
ಪ್ರಕರಣದ ವಿಚಾರಣೆಯ ವೇಳೆ ನನ್ನ ಮಗಳು ಈಗ ವಯಸ್ಕಳಾಗಿದ್ದರೂ ನಾಪತ್ತೆಯಾದ ಸಮಯದಲ್ಲಿ ಅಪ್ರಾಪ್ತ ವಯಸ್ಸಿನವಳಾಗಿದ್ದಳು. ಕಾಣೆಯಾದ ಹುಡುಗಿ ಈಗ ವಯಸ್ಕಳಾಗಿದ್ದರೂ ದುರ್ಬಲ ವಯಸ್ಕಳು (ಪ್ಯಾರೆನ್ಸ್ ಪೇಟ್ರಿಯಾ) ಎಂಬ ಕಾರಣಕ್ಕೆ ತನ್ನ ಅರ್ಜಿಯನ್ನು ಅಂಗೀಕರಿಸುವಂತೆ ನ್ಯಾಯಾಲಯಕ್ಕೆ ಅರ್ಜಿದಾರರು ಮನವಿ ಮಾಡಿದ್ದಾರೆ. ಆದರೆ ನ್ಯಾಯಾಲಯ ಈ ಅರ್ಜಿ ತಿರಸ್ಕರಿಸಿದೆ.
"ಈ ಪ್ಯಾರೆನ್ಸ್ ಪೇಟ್ರಿಯಾ ನ್ಯಾಯವು ವೈವಾಹಿಕ ಸಂಬಂಧದ ವಿಚಾರಕ್ಕೆ ಅತಿಕ್ರಮಿಸದು. ವೈವಾಹಿಕ ಸಂಬಂಧದ ನಿರ್ಧಾರ ವ್ಯಕ್ತಿಗಳ ಮೇಲೆ ಮಾತ್ರ ಅವಲಂಬಿತ. ರಾಜ್ಯ ಅಥವಾ ಸಮಾಜವು ಅದಕ್ಕೆ ಮೂಗುತೂರಿಸುವಂತಿಲ್ಲ," ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಈ ಯುವತಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿದ್ದು, ಯುವತಿಯು ತನ್ನ ಪತಿಯೊಂದಿಗೆ ಇರಲು ಬಯಸುವುದಾಗಿ ಸ್ಪಷ್ಟವಾಗಿ ಹೇಳಿದ್ದಾಳೆ. ಈ ಹಿನ್ನೆಲೆ ನ್ಯಾಯಲಯವು ಈ ಅರ್ಜಿಯನ್ನು ತಿರಸ್ಕರಿಸಿದೆ. "ನಮ್ಮ ಸಂವಿಧಾನದ ಬಲವು ನಮ್ಮ ಸಂಸ್ಕೃತಿಯ ಬಹುತ್ವ ಮತ್ತು ವೈವಿಧ್ಯತೆಯನ್ನು ಅಂಗೀಕರಿಸುವುದರಲ್ಲಿದೆ" ಎಂದು ಕೂಡಾ ನ್ಯಾಯಾಲಯ ಹೇಳಿದೆ.
ಲಿವ್-ಇನ್ ಸಂಬಂಧ ನಿಷೇಧಿಸಿಲ್ಲ: ಪಂಜಾಬ್-ಹರ್ಯಾಣ ಹೈಕೋರ್ಟ್
"ಮದುವೆಯಾಗಬೇಕೆ ಅಥವಾ ಬೇಡವೇ ಮತ್ತು ಯಾರನ್ನು ಮದುವೆಯಾಗಬೇಕೆಂಬುದರ ಬಗ್ಗೆ ವ್ಯಕ್ತಿಗಳು ಮಾಡುವ ಆಯ್ಕೆಗಳು ರಾಜ್ಯದ ನಿಯಂತ್ರಣದ ಹೊರಗಡೆ ಇರುತ್ತವೆ. ಸಾಂವಿಧಾನಿಕ ಸ್ವಾತಂತ್ರ್ಯಗಳನ್ನು ಎತ್ತಿಹಿಡಿಯುವ ನ್ಯಾಯಾಲಯಗಳು ಈ ಸ್ವಾತಂತ್ರ್ಯಗಳನ್ನು ಕಾಪಾಡಬೇಕು," ಎಂದು ನ್ಯಾಯಾಲಯವು ತಿಳಿಸಿದೆ.
ಅರ್ಜಿದಾರರು ತನ್ನ ಮಗಳನ್ನು 2019 ಔರಂಗಬಾದ್ನಿಂದ ಅಪಹರಿಸಲಾಗಿದೆ ಎಂದು ಅರ್ಜಿದಾರರು ಹೇಳಿಕೊಂಡಿದ್ದಾರೆ. ಹಾಗೆಯೇ ದೂರು ನೀಡಿದ್ದು ಈ ದೂರಿನ ಆಧಾರದಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್ಐಆರ್ ಮಾಡಲಾಗಿತ್ತು. ಕೆಲವು ದಿನಗಳ ನಂತರ, ಅರ್ಜಿದಾರರ ಪತ್ನಿ ಈ ಘಟನೆಗೆ ಫುಕ್ರಾನ್ ಖಾನ್ ಎಂಬಾತ ಕಾರಣ ಎಂದು ಆರೋಪಿಸಿದ್ದರು. ಆತ ತನ್ನ ಹೆತ್ತವರ ಜೊತೆ ಸೇರಿ ನಮ್ಮ ಮಗಳನ್ನು ಅಪಹರಿಸಿದ್ದಾನೆ ಎಂದು ದೂರಿದ್ದರು. ಪೊಲೀಸರು ಅರ್ಜಿದಾರರ ಮಗಳು ಎಲ್ಲಿದ್ದಾನೆಂದು ಪತ್ತೆ ಹಚ್ಚಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ರಿಟ್ ವ್ಯಾಪ್ತಿಯಲ್ಲಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಇನ್ನು ಅರ್ಜಿದಾರರ ಮಗಳ ಪ್ರಕಾರ, ಸೆಪ್ಟೆಂಬರ್ 2020 ರಲ್ಲಿ ವಯಸ್ಕರಾಗಲು ಒಂಬತ್ತು ತಿಂಗಳುಗಳಷ್ಟು ಹಿಂದೆ, ಜೂನ್ 2021 ರಲ್ಲಿ ವಿವಾಹವಾಗಿದ್ದಾರೆ. ಪ್ರಸ್ತುತ ವಯಸ್ಕಳಾದ ಬಳಿಕ ಗಂಡನೊಂದಿಗಿಯೇ ಬದುಕಲು ಬಯಸಿದ್ದಾಳೆ. ಆದರೆ ಆಕೆಯ ಪೋಷಕರು ಇದಕ್ಕೆ ಅನುಮತಿ ನೀಡಲು ನಿರಾಕರಿಸಿದ್ದರು. ಬಳಿಕ ಆಕೆ ಪತಿಯೊಂದಿಗೆ ಇರಲು ನಿರ್ಧಾರ ಕೈಗೊಂಡಾಗ ಆಕೆಯ ಪೋಷಕರು ದೈಹಿಕ ಹಲ್ಲೆ ನಡೆಸಿದ್ದಾರೆ. ಆಕೆಯ ತಾಯಿಯ ಚಿಕ್ಕಪ್ಪನ ಮನೆಗೆ ಕಳುಹಿಸಿದ್ದಾರೆ. ಅಲ್ಲಿಂದ ಆಕೆ ನಾಗ್ಪುರಕ್ಕೆ ಬಂದು ಪತಿಯನ್ನು ಸಂಪರ್ಕಿಸಿರುವುದಾಗಿ ತಿಳಿಸಿದ್ದಾಳೆ. ಹಾಗೆಯೇ ಬಳಿಕ ಈ ಜೋಡಿಯು ತೆಲಂಗಾಣದಲ್ಲಿ ಭೈನ್ಸಾಗೆ ಸ್ಥಳಾಂತರಗೊಂಡು, ಅಲ್ಲಿ ಮಗುವಿಗೆ ಜನ್ಮ ನೀಡಿದ್ದು, ಬಳಿಕ ವಿವಾಹವಾಗಿದ್ದಾರೆ.
(ಒನ್ಇಂಡಿಯಾ ಸುದ್ದಿ)