ಸೋನು ಸೂದ್ ನಿವಾಸಕ್ಕೆ ಐಟಿ ದಾಳಿ: ಬಿಜೆಪಿಯ ತಾಲಿಬಾನ್ ಮನಸ್ಥಿತಿ ವಿರುದ್ದ ಶಿವಸೇನೆ ಆಕ್ರೋಶ
ನವದೆಹಲಿ, ಸೆಪ್ಟೆಂಬರ್ 16: ಗುರುವಾರ ಬೆಳಿಗ್ಗೆಯೂ ಕೂಡಾ ಮುಂಬೈನಲ್ಲಿರುವ ನಟ ಸೋನು ಸೂದ್ ನಿವಾಸಕ್ಕೆ ಆದಾಯ ಇಲಾಖೆಯು ದಾಳಿ ನಡೆಸಿದೆ. ಬುಧವಾರ ಮುಂಬೈನಲ್ಲಿ ನಟ ಸೋನುಸೂದ್ ನಿವಾಸಗಳು ಹಾಗೂ ಲಕ್ನೋದ ಕಂಪನಿಯು ಸೇರಿದಂತೆ ಸೋನುಸೂಗೆ ಸಂಪರ್ಕವಿರುವ ಒಟ್ಟು 6 ಕಡೆಗಳಲ್ಲಿ ಆದಾಯ ತೆರಿಗೆ ಇಲಾಖೆ ಸಮೀಕ್ಷೆ ನಡೆಸಿತ್ತು. ಈ ವಿಚಾರದಲ್ಲಿ ಶಿವ ಸೇನೆ ಪಕ್ಷ ಬಿಜೆಪಿ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದು, ಇದು ತಾಲಿಬಾನ್ ಸಿದ್ದಾಂತ ಎಂದು ಆರೋಪ ಮಾಡಿದೆ.
ಈ ಬಗ್ಗೆ ಮಾಹಿತಿ ತಿಳಿದಿರುವ ಮೂಲಗಳು, ಸೋನು ಸೂದ್ರ ಸಂಸ್ಥೆಗಳಿಗೆ ಹಾಗೂ ಲಕ್ನೋ ಮೂಲದ ರಿಯಲ್ ಎಸ್ಟೇಟ್ ಸಂಸ್ಥೆಗೆ ಡೀಲ್ ಒಂದರ ಹಿನ್ನೆಲೆ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ಒಪ್ಪಂದದ ಮೇಲೆ ತೆರಿಗೆ ವಂಚನೆ ಆರೋಪದಲ್ಲಿ ಸಮೀಕ್ಷೆಯನ್ನು ಆರಂಭಿಸಲಾಗಿದೆ ಎಂದು ಮೂಲಗಳು ಹೇಳಿದೆ. ಆದರೆ ಈ ದಾಳಿಯನ್ನು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧ ಮಾಡಿದೆ.
ನಟ ಸೋನು ಸೂದ್ಗೆ ಸೇರಿದ 6 ಸ್ಥಳಗಳಲ್ಲಿ ಐಟಿ ಇಲಾಖೆ ಸಮೀಕ್ಷೆ
ಸೋನುಸೂದ್ ಲಾಕ್ಡೌನ್ ಸಂದರ್ಭದಲ್ಲಿ ಹಲವಾರು ವಲಸೆ ಕಾರ್ಮಿಕರು ತಮ್ಮ ಊರನ್ನು ಸೇರಲು ಸಹಾಯ ಮಾಡಿದ್ದರು. ಸೋನು ಸೂದ್ ಬಸ್, ರೈಲು ಹಾಗೂ ವಿಮಾನಗಳನ್ನು ಕೂಡಾ ವಲಸಿಗರಿಗೆ ವ್ಯವಸ್ಥೆ ಮಾಡಿದ್ದರು. ಹಾಗೆಯೇ ಈ ವರ್ಷ ಕೊರೊನಾ ಎರಡನೇ ಅಲೆಯ ಸಂದರ್ಭದಲ್ಲಿ ಸೋನು ಸೂದ್ ಆಕ್ಸಿಜನ್ ಕೊರತೆ ಉಂಟಾದಾಗ ಆಕ್ಸಿಜನ್ ವ್ಯವಸ್ಥೆಯನ್ನು ಕೂಡಾ ಮಾಡಿಸಿದ್ದರು.
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಜತೆ ಸೋನುಸೂದ್ ನಡೆಸಿದ ಮಾತುಕತೆ ಹಾಗೂ ಕಾರ್ಯಕ್ರಮವೊಂದಕ್ಕೆ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಈ ದಾಳಿಯು ನಡೆದಿದೆ. ಆದರೆ ಈ ದಾಳಿಯನ್ನು ಸಮೀಕ್ಷೆ ಎಂದು ಹೇಳಿಕೊಳ್ಳಲಾಗಿತ್ತು. ಆದ್ದರಿಂದ ಸೋನು ಸೂದ್ಗೆ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಹೆಚ್ಚಿನ ಗೌರವವನ್ನು ನೀಡುತ್ತಿದ್ದಾರೆ. ಆದರೆ ಸೋನುಸೂದ್ ಮಾತ್ರ ತನ್ನ ಯಾವುದೇ ಸಹಾಯ ಕಾರ್ಯಕ್ಕೂ ರಾಜಕಾರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಇನ್ನು ಸೋನು ಸೂದ್ ಅರವಿಂದ್ ಕೇಜ್ರಿವಾಲ್ ಜೊತೆ ಮಾತನಾಡಿದ್ದ ಕಾರಣ, ಮುಂದಿನ ವರ್ಷ ಪಂಜಾಬ್ನಲ್ಲಿ ಸೋನು ಸೂದ್ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಆಗಲಿದ್ದಾರೆಯೇ ಎಂಬ ಊಹಾಪೋಹಗಳನ್ನು ಕೂಡಾ ಸೃಷ್ಟಿ ಮಾಡಿತ್ತು.
ಆದರೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ನಟ ಸೋನು ಸೂದ್, "ಯಾವುದೇ ರಾಜಕೀಯ ವಿಚಾರವನ್ನು ನಾವು ಚರ್ಚೆ ಮಾಡಿಲ್ಲ. ಈವರೆಗೂ ನಾವು ಯಾವುದೇ ರಾಜಕೀಯದ ಬಗ್ಗೆ ಮಾತನಾಡುವ ಅವಶ್ಯಕತೆ ಬಂದಿಲ್ಲ," ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಅರವಿಂದ್ ಕೇಜ್ರಿವಾಲ್ ಜೊತೆಗೆ ಸುದ್ದಿ ಗೋಷ್ಠಿಯಲ್ಲಿ ಮಾತನಾಡುತ್ತಾ ಸೋನು ಸೂದ್ ಇದನ್ನು ಹೇಳಿದ್ದಾರೆ.
'ಬಂಗಲೆಯನ್ನು ನಿರ್ವಹಣೆ ಮಾಡಲಾಗದ ಜಮೀನುದಾರ': ಕಾಂಗ್ರೆಸ್ ಕಾಳೆಲೆದ ಶರದ್
ಇನ್ನು ಬಿಜೆಪಿಯು ಈ ಐಟಿ ದಾಳಿಯು ರಾಜಕೀಯ ಪ್ರೇರಿತವಲ್ಲ ಎಂದು ಹೇಳಿದೆ. "ಕೇಂದ್ರದ ಯಾವುದೇ ಏಜೆನ್ಸಿಗಳು ಯಾವುದೇ ಕ್ರಮವನ್ನು ಕೈಗೊಂಡರೂ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳು ಇದು ರಾಜಕೀಯ ಎಂದು ಹೇಳುತ್ತದೆ. ಈ ಆರೋಪ ಕೇಳಿ ಬರುತ್ತದೆ ಎಂದು ಈ ಏಜೆನ್ಸಿಗಳು ತಮ್ಮ ಕರ್ತವ್ಯವನ್ನು ನಿಲ್ಲಿಸಲು ಸಾಧ್ಯವಾಗುತ್ತದೆಯೇ?, ಈ ಎಲ್ಲಾ ದಾಳಿಗಳು ಬಹಳ ಪಾರದರ್ಶಕವಾಗಿ ನಡೆದಿದೆ," ಎಂದು ಬಿಜೆಪಿ ಮಹಾರಾಷ್ಟ್ರ ಶಾಸಕ ರಾಮ್ ಕದಮ್ ಹೇಳಿದ್ದಾರೆ.
ಆದರೆ ಶಿವಸೇನೆ ಮಾತ್ರ ಬಿಜೆಪಿಯನ್ನು ತಾಲಿಬಾನ್ಗೆ ಹೋಲಿಕೆ ಮಾಡಿದೆ. ಮಹಾರಾಷ್ಟ್ರ ಆಡಳಿತ ಪಕ್ಷ ಶಿವಸೇನ ವಕ್ತಾರೆ ಮನೀಷಾ ಖಂಡೆ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. "ಬಿಜೆಪಿಯ ಕೇಂದ್ರ ಸರ್ಕಾರವು ಗುರಿಯಾಗಿಸಿಕೊಂಡು ತನ್ನ ಕೇಂದ್ರದ ಏಜೆನ್ಸಿಗಳಿಂದ ದಾಳಿಯನ್ನು ನಡೆಸುತ್ತಿದೆ," ಎಂದು ಆರೋಪ ಮಾಡಿದ ಶಿವಸೇನೆ ವಕ್ತಾರೆ, "ಬಿಜೆಪಿಯು ತಾಲಿಬಾನ್ ನಂತಹ ಸಿದ್ದಾಂತವನ್ನು ಹೊಂದಿದೆ," ಎಂದು ಆರೋಪ ಮಾಡಿದ್ದಾರೆ.
(ಒನ್ ಇಂಡಿಯಾ ಸುದ್ದಿ)