ದಾವೂದ್ ನೆಲೆಯ ಬಗ್ಗೆ ಆತನ ಸಹೋದರ ಕೊಟ್ಟ ಮಾಹಿತಿಯಿದು!
ಮುಂಬೈ, ಸೆಪ್ಟೆಂಬರ್ 22: ಜಾಗತಿಕ ಭಯೋತ್ಪಾದಕ ದಾವೂದ್ ಇಬ್ರಾಹಿಂ, ಈಗ ಪಾಕಿಸ್ತಾನದಲ್ಲೇ ನೆಲೆಸಿದ್ದಾನೆ. ಕರಾಚಿಯ ಹೊರವಲಯದಲ್ಲಿರುವ ಪ್ರತಿಷ್ಠಿತ ಪ್ರಾಂತ್ಯವೊಂದರ ಬಂಗಲೆಯಲ್ಲಿ ಆತ ವಾಸವಾಗಿದ್ದಾನೆಂದು ಇತ್ತೀಚೆಗೆ, ಆತನ ಮುಂಬೈ ಪೊಲೀಸರಿಂದ ಬಂಧಿತನಾಗಿರುವ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ತಿಳಿಸಿದ್ದಾನೆಂದು ಕೆಲ ಮಾಧ್ಯಮಗಳು ವರದಿ ಮಾಡಿವೆ.
ಕೇಂದ್ರ ಸರ್ಕಾರದ ಜತೆಗೆ ದಾವೂದ್ ಸಂಧಾನ ಮಾತುಕತೆ: ಠಾಕ್ರೆ
ಕರಾಚಿಯಲ್ಲಿ ದೊಡ್ಡ ಬಂಗಲೆಯಲ್ಲೇ ದಾವೂದ್ ಜೀವನ ನಡೆಸುತ್ತಿದ್ದಾನೆ ಎಂದಿರುವ ಕಸ್ಕರ್, 2003ರಲ್ಲಿ ತಾನು ದುಬೈನಲ್ಲಿ ದಾವೂದ್ ನನ್ನು ಭೇಟಿಯಾಗಿದ್ದು, ಆನಂತರ ಭೇಟಿಯಾಗಿಲ್ಲ ಎಂದು ತಿಳಿಸಿದ್ದಾನೆ. 2003ರ ನಂತರ, ಈವರೆಗೆ ಸುಮಾರು 3-4 ಬಾರಿ ತಾನು ದಾವೂದ್ ಜತೆ ದೂರವಾಣಿಯಲ್ಲಿ ಮಾತನಾಡಿರುವುದಾಗಿ ತಿಳಿಸಿದ್ದಾನೆ.
ಅಂದಹಾಗೆ, ದಾವೂದ್ ಪಾಕಿಸ್ತಾನದ ಕರಾಚಿಯಲ್ಲೇ ಇದ್ದಾನೆಂಬುದು ಹೊಸ ವಿಚಾರವೇನಲ್ಲ. ಭಾರತದ ಗುಪ್ತಚರ ಇಲಾಖೆಯು ಇದನ್ನು ಹಲವಾರು ದಿನಗಳ ಹಿಂದೆಯೇ ಪತ್ತೆ ಹಚ್ಚಿತ್ತು. ಹಲವಾರು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಭಾರತವೂ ಈ ಬಗ್ಗೆ ಪ್ರಸ್ತಾಪ ಮಾಡಿತ್ತು.
ರಾಜಕಾರಣಿಗಳ ರಕ್ಷೆಯಿಂದ 100 ಕೋಟಿ ರು. ಬಾಚಿದ್ದ ದಾವೂದ್ ತಮ್ಮ!
ಆದರೆ, ಪಾಕಿಸ್ತಾನ ಮಾತ್ರ ಇದನ್ನು ನಿರಂತರವಾಗಿ ತಿರಸ್ಕರಿಸುತ್ತಲೇ ಬಂದಿದೆ. ಆದರೀಗ, ದಾವೂದ್ ನ ಖಾಸಾ ಸಹೋದರನೇ ಈ ಬಗ್ಗೆ ನಿಖರವಾದ ಮಾಹಿತಿ ನೀಡಿರುವುದು ಭಾರತವು ದಾವೂದ್ ನೆಲೆಯ ಬಗ್ಗೆ ಈವರೆಗೆ ಮಾಡುತ್ತಿದ್ದ ಆರೋಪಕ್ಕೆ ಶಕ್ತಿ ತುಂಬಿದಂತಾಗಿದೆ.
ಪೊಲೀಸರ ವಿಚಾರಣೆ ವೇಳೆ, ಇಕ್ಬಾಲ್ ಹೀಗೆ ಕೆಲವಾರು ಮಹತ್ವದ ವಿಚಾರಗಳನ್ನು ಹೊರಹಾಕುತ್ತಿರುವ ಹಿನ್ನೆಲೆಯಲ್ಲಿ, ಇದೀಗ ಮುಂಬೈ ಪೊಲೀಸರು ಕೇಂದ್ರ ಮಟ್ಟದ ತನಿಖಾ ಸಂಸ್ಥೆಗಳ ಸಹಾಯ ಪಡೆದುಕೊಳ್ಳಲು ಮುಂದಾಗಿದ್ದಾರೆಂದು ವರದಿಗಳು ಹೇಳಿವೆ.