ದಾಭೋಲ್ಕರ್ ಹತ್ಯೆ: ಮತ್ತಿಬ್ಬರ ಬಂಧನ, ಜೂನ್ 1 ತನಕ ಸಿಬಿಐ ವಶಕ್ಕೆ
ಮುಂಬೈ, ಮೇ 26: ವಿಚಾರವಾದಿ ನರೇಂದ್ರ ದಾಭೋಲ್ಕರ್ ಹತ್ಯೆಗೆ ಸಂಬಂಧಿಸಿದಂತೆ ಸನಾತನ ಸಂಸ್ಥಾಕ್ಕೆ ಸೇರಿದ ಮತ್ತಿಬ್ಬರು ಆರೋಪಿಗಳನ್ನು ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಬಂಧಿಸಿ, ಕೋರ್ಟಿಗೆ ಹಾಜರು ಪಡಿಸಲಾಗಿದ್ದು, ಜೂನ್ 1ರ ತನಕ ಕಸ್ಟಡಿಗೆ ಪಡೆಯಲಾಗಿದೆ.
ಸನಾತನ ಸಂಸ್ಥಾಗೆ ಕಾನೂನು ಬೆಂಬಲ ನೀಡುತ್ತಿದ್ದ ವಕೀಲ, ಹಿಂದು ವಿದಿಜ್ಞಾ ಪರಿಷತ್ನ ಸಂಜೀವ್ಪುನಲೇಕರ್ ಹಾಗೂ ಸನಾತನ ಸಂಸ್ಥಾದ ಸದಸ್ಯ ವಿಕ್ರಂ ಭಾವೆ ಎಂಬುವರೇ ಬಂಧಿತ ಆರೋಪಿಗಳು.
ಭಾವೆ ವಿರುದ್ಧ 2008ರಲ್ಲಿ ಗಡ್ಕರಿಯ ರಂಗಯಾತನ್ ಥಿಯೇಟರ್ಹಾಗೂ ಆಡಿಟೋರಿಯಂನಲ್ಲಿ ಬಾಂಬ್ ಸ್ಫೋಟಿಸಿದ ಆರೋಪವಿದೆ. 2013ರಲ್ಲಿ ಹೈಕೋರ್ಟ್ನಿಂದ ಜಾಮೀನು ಸಿಕ್ಕಿತ್ತು. ಜಾಮೀನಿನಿಂದ ಹೊರ ಬಂದ ಬಳಿಕ ಮಾಲೆಗಾಂವ್ ಸ್ಫೋಟಮಗಿಲ್ ಅದೃಶ್ಯ ಹಾತ್ ಎಂಬ ಪುಸ್ತಕ ಹೊರ ತಂದಿದ್ದರು.
2013ರ ಆಗಸ್ಟ್ನಲ್ಲಿ ನರೇಂದ್ರ ದಾಭೋಲ್ಕರ್ ಅವರನ್ನು ಅವರ ಮನೆ ಹೊರಗೆ ಗುಂಡಿಟ್ಟು ಕೊಲೆ ಮಾಡಲಾಗಿತ್ತು. 2016ರಲ್ಲಿ ಮೊದಲು ಸನಾತನ ಸಂಸ್ಥಾ ಸದಸ್ಯ ಇಎನ್ ಟಿ ಡಾಕ್ಟರ್ ವೀರೇಂದ್ರ ತಾವ್ಡೆ ಎಂಬುವರನ್ನು ಬಂಧಿಸಲಾಗಿತ್ತು. ಸಚಿನ್ ಅಂದುರೆ, ಶರದ್ ಕಲಸ್ಕರ್ ಅವರು ಬಂಧಿತ ಇನ್ನಿಬ್ಬರು ಪ್ರಮುಖರು. ಈ ಪ್ರಕರಣದಲ್ಲಿ ಇಲ್ಲಿ ತನಕ ಸನಾತನ ಸಂಸ್ಥಾಗೆ ಸೇರಿದ 8 ಮಂದಿಯನ್ನು ಬಂಧಿಸಲಾಗಿದೆ.
2015ರಲ್ಲಿ ಕೊಲ್ಹಾಪುರದಲ್ಲಿ ಹತ್ಯೆಯಾದ ಸಿಪಿಐ ನಾಯಕ ಗೋವಿಂದ್ ಪನ್ಸಾರೆ ಅವರ ಹತ್ಯೆಯ ಸಂಚು ತಾವ್ಡೆ ರೂಪಿಸಿದ್ದು ಎಂದು ಸಿಬಿಐ ವಾದಿಸಿದೆ.