ದಾವೂದ್ ಭೂ ಅವ್ಯವಹಾರದ ಮೇಲೆ ಇಡಿ ಕಣ್ಣು
ಮುಂಬೈ, ಸೆ. 29: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಅವರ ಸೋದರ ಕಸ್ಕರ್ ಮೇಲಿನ ಬೆದರಿಕೆ ಕರೆ ಪ್ರಕರಣದ ತನಿಖೆಯನ್ನು ಥಾಣೆ ಪೊಲೀಸರು ತೀವ್ರಗೊಳಿಸಿದ್ದಾರೆ.
ದಾವೂದ್ ಪರವಾಗಿ ಮಟ್ಕಾ ದಂಧೆಕೋರನೊಬ್ಬ ಭೂ ವ್ಯವಹಾರಗಳಲ್ಲಿ ಬಂಡವಾಳ ಹೂಡಿಕೆ ಮಾಡುತ್ತಿರುವುದು ಪತ್ತೆಯಾಗಿದೆ. ಇಕ್ಬಾಲ್ ಕಸ್ಕರ್ ನಿಂದ ಮಾಹಿತಿ ಪಡೆದಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗ ದಾವೂದ್ ನ ಭೂ ಅವ್ಯವಹಾರಗಳತ್ತ ತನಿಖೆ ಜಾಡನ್ನು ತಿರುಗಿಸಿದ್ದಾರೆ.
ಕಸ್ಕರ್ ನೀಡಿದ ಮಾಹಿತಿ ಆಧಾರದ ಮೇಲೆ ಜೂಜುಗಾರ ಪಂಕಜ್ ಗಂಗರ್ ಎಂಬಾತನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. 1993ರ ಮುಂಬೈ ಸರಣಿ ಸ್ಫೋಟದ ರೂವಾರಿ ದಾವೂದ್ ಪರವಾಗಿ ಮುಂಬೈನ ಹೊರವಲಯದಲ್ಲಿ ಭೂ ಖರೀದಿ ವ್ಯವಹಾರಗಳನ್ನು ಪಂಕಜ್ ನೋಡಿಕೊಳ್ಳುತ್ತಿದ್ದಾನೆ.
ಮುಂಬೈನ ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ಬೆದರಿಸುತ್ತಿದ್ದ ಡಿ ಗ್ಯಾಂಗಿನ ಬಿಹಾರ ಮೂಲದ ಶಮ್ಮಿ, ಹಾಗೂ ಗುಡ್ಡು ಎಂಬುವವರನ್ನು ಕೂಡಾ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದ್ದಾರೆ. ಹವಾಲ ಹಣ ಬಳಕೆ ಸೇರಿದಂತೆ ಎಲ್ಲಾ ವ್ಯವಹಾರಗಳತ್ತ ಜಾರಿ ನಿರ್ದೇಶನಾಲಯ ಕಣ್ಣು ಹಾಯಿಸಿದೆ.