ತೌಕ್ತೆ ಚಂಡಮಾರುತ: ಮುಂಬೈ ಏರ್ಪೋರ್ಟ್ ಕಾರ್ಯಾಚರಣೆ ಮೂರು ಗಂಟೆ ಸ್ಥಗಿತ
ಮುಂಬೈ, ಮೇ 17: ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆಯನ್ನು ಸೋಮವಾರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳಿಸಲಾಗಿದೆ. ತೌಕ್ತೆ ಚಂಡಮಾರುತ ಪ್ರಭಾವ ಹೆಚ್ಚಾಗುವ ಭೀತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮುಂಬೈ ಇಂಟರ್ನ್ಯಾಶನಲ್ ಏರ್ಪೋರ್ಟ್ ಲಿಮಿಟೆಡ್(ಎಂಐಎಎಲ್) ಮಾಹಿತಿ ನೀಡಿದೆ.
"ಚಂಡಮಾರುತದ ಮುನ್ನೆಚ್ಚರಿಕೆಯ ಕಾರಣದಿಂದಾಗಿ ಮುಂಬೈ ಏರ್ಪೋರ್ಟ್ನ ಕಾರ್ಯಾಚರಣೆಯನ್ನು ಮೇ 17ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಸ್ಥಗಿತಗೊಳ್ಳುವ ಅಗತ್ಯವಿದೆ" ಎಂದು ಎಂಐಎಎಲ್ ಮಾಹಿತಿಯನ್ನು ನೀಡಿದೆ.
ಚಂಡಮಾರುತ ತೌಕ್ತೆ ಭೀತಿ, ಕರಾವಳಿಯ ವಿಮಾನ ನಿಲ್ದಾಣಗಳಿಗೆ ಎಚ್ಚರಿಕೆ
ಮಹಾರಾಷ್ಟ್ರದಲ್ಲಿಯೂ ತೌಕ್ತೆ ಚಂಡಮಾರುತದ ಆರ್ಭಟ ಸೋಮವಾರ ಹೆಚ್ಚಾಗಿದೆ. ಮುಂಬೈನ ಗೇಟ್ವೇ ಆಫ್ ಇಂಡಿಯಾ ಸನಿಹ ಭಾರೀ ಗಾಳಿಯೊಂದಿಗೆ ಮಳೆಯಾಗಿದೆ. ತೌಕ್ತೆ ಚಂಡಮಾರುತದ ಪರಿಣಾಮದಿಂದಾಗಿ ಬಾಂದ್ರಾ-ವರ್ಲಿ ಸಮುದ್ರ ಸಂಪರ್ಕವನ್ನು ಕೂಡ ಮುಚ್ಚಲಾಗಿದೆ.
ರಾಯ್ಘಡ್, ಪಾಲ್ಘರ್, ಮುಂಬೈ, ಥಾಣೆ ಮತ್ತು ರತ್ನಗಿರಿ ಜಿಲ್ಲೆಗಳಲ್ಲಿ ಚಂಡಮಾರುತದ ಕಾರಣದಿಂದಾಗಿ 90-100 ಕಿಮೀ ವೇಗದಲ್ಲಿ ಗಾಳಿಯೊಂದಿಗೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.