ಪಶ್ಚಿಮ ಬಂಗಾಳ vs ಕೇಂದ್ರ ಸರ್ಕಾರ ಜಟಾಪಟಿ: ಉರಿಯುವ ಬೆಂಕಿಗೆ ತುಪ್ಪ ಸುರಿದ ಶಿವಸೇನೆ
ಮುಂಬೈ, ಜೂನ್ 4: ಪಶ್ಚಿಮ ಬಂಗಾಳದ ಮಾಜಿ ಮುಖ್ಯ ಕಾರ್ಯದರ್ಶಿ ಅಲಪನ್ ಬಂಡೋಪಾಧ್ಯಾಯ್ ವಿಚಾರವಾಗಿ ಕೇಂದ್ರ ಸರ್ಕಾರ ಮತ್ತು ಪಶ್ಚಿಮ ಬಂಗಾಳ ಸರ್ಕಾರಗಳ ನಡುವೆ ಜಟಾಪಟಿ ಮುಂದುವರಿದಿದೆ. ಈ ಬೆಳವಣಿಗೆಗೆ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಶಿವಸೇನೆ ಪ್ರತಿಕ್ರಿಯಿಸಿದ್ದು ಬಂಗಾಳಕೊಲ್ಲಿಯಲ್ಲಿ ಇನ್ನು ಕೂಡ ದುರಹಂಕಾರದ ಚಂಡಮಾರುತ ಸುಳಿದಾಡುತ್ತಿದೆ ಎಂದಿದೆ.
"ಯಾಸ್ ಚಂಡಮಾರುತ ಬಂತು, ಹೋಯ್ತು. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಬಂಡೋಪಾಧ್ಯಾಯ್ ಪ್ರಧಾನಿ ನರೇಂದ್ರ ಮೋದಿ ಕರೆದಿದ್ದ ಚಂಡಮಾರುತ ಪರಿಶೀಲನಾ ಸಭೆಯಲ್ಲಿ ಭಾಗವಹಿಸಲಿಲ್ಲ ಎಂಬ ಕಾರಣಕ್ಕೆ ದುರಹಂಕಾರದ ಚಂಡಮಾರುತ ಮಾತ್ರ ಬಂಗಾಳಕೊಲ್ಲಿಯಲ್ಲಿ ಇನ್ನೂ ಸುಳಿದಾಡುತ್ತಿದೆ" ಎಂದು ಶಿವಸೇನೆ ಪ್ರತಿಕ್ರಿಯೆ ನೀಡಿದೆ. ಈ ಮೂಲಕ ಕೇಂದ್ರ ಹಾಗೂ ಪಶ್ಚಿಮ ಬಂಗಾಳ ನಡುವೆ ನಡೆಯುತ್ತಿರುವ ಜಟಾಪಟಿಗೆ ತುಪ್ಪ ಸುರಿದಿದೆ.
ಶಿವಸೇನೆ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಈ ವಿಚಾರಗಳನ್ನು ಬರೆದುಕೊಂಡಿದೆ. "ರಾಜ್ಯಗಳ ಮೇಲೆ ಒತ್ತಡವನ್ನು ಹೇರುವ ಮೂಲಕ ಕೇಂದ್ರ ಸರ್ಕಾರ ತಪ್ಪೆಸಗುತ್ತಿದೆ. ರಾಜಕೀಯ ಸೋಲು ಗೆಲುವುಗಳ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಶಾಲ ಮನೋಭಾವವನ್ನು ಹೊಂದಿರಬೇಕು. ಇಲ್ಲವಾದಲ್ಲಿ ಅದು ದೇಶದ ಏಕತೆಗೆ ಧಕ್ಕೆ ತರುತ್ತದೆ" ಎಂದಿದೆ.
ರಾಜ್ಯಗಳೊಂದಿಗೆ ಕೇಂದ್ರ ಸೌಹಾರ್ದಯುತವಾಗಿದ್ದವು
ಇನ್ನು ಈ ಸಂದರ್ಭದಲ್ಲಿ ಈ ಹಿಂದಿನ ಸರ್ಕಾರಗಳನ್ನು ಉಲ್ಲೇಖಿಸಿ ಸಾಮ್ನಾದಲ್ಲಿ ಹೋಲಿಕೆಯನ್ನು ಮಾಡಲಾಗಿದೆ. ಮಾಜಿ ಪ್ರಧಾನಮಂತ್ರಿಗಳಾದ ಮನಮೋಹನ್ ಸಿಂಗ್, ರಾಜೀವ್ ಗಾಂಧಿ, ನರಸಿಂಹ ರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಅಧಿಕಾರಾವಧಿಯಲ್ಲಿ ಕೇಂದ್ರ ಮತ್ತು ರಾಜ್ಯಗಳ ನಡುವೆ ಯಾವುದೇ ಅಂತರಗಳು ಇರಲಿಲ್ಲ. ಅವರ ಅಧಿಕಾರಾವಧಿಯಲ್ಲಿ, ರಾಜ್ಯಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಮತ್ತು ದೂರದೃಷ್ಟಿಕೋನದೊಂದಿಗೆ ಪರಿಹರಿಸಲಾಗುತ್ತಿತ್ತು. ರಾಜ್ಯಗಳು ತಾವು ಕೇಳಿದಕ್ಕಿಂತ ಹೆಚ್ಚಿನದನ್ನು ಕೇಂದ್ರದಿಂದ ಪಡೆಯುತ್ತಿದ್ದವು ಎಂದು ಶಿವಸೇನೆ ಹೇಳಿದೆ.
ಎರಡು ವರ್ಷ ಜೈಲು ಶಿಕ್ಷಗೆ ಅವಕಾಶ
ಪ್ರಧಾನಮಂತ್ರಿಗಳ ಸಬೆಗೆ ಹಾಜರಾಗದ ಕಾರಣಕ್ಕೆ ಕೇಂದ್ರ ಗೃಹ ಸಚಿವಾಲಯ ವಿಪತ್ತು ನಿರ್ಹಣಾ ಕಾಯ್ದೆಯ ಅಡಿಯಲ್ಲಿ ಮುಖ್ಯ ಕಾರ್ಯದರ್ಶಿಯಾಗಿದ್ದ ಅಲಪನ್ ಬಂಡೋಪಾಧ್ಯಾಯ್ಗೆ 'ಶೋ ಕಾಸ್' ನೋಡಿಸ್ ನೀಡಿದೆ. ಇದಕ್ಕೆ ಬಂಡೋಪಾಧ್ಯಾಯ್ ಉತ್ತರವನ್ನು ನೀಡಿದ್ದಾರೆ ಎನ್ನಲಾಗಿದೆ. ಈ ಕಾಯ್ದೆ ಎರಡು ವರ್ಷಗಳವರೆಗಿನ ಜೈಲುಶಿಕ್ಷೆಯನ್ನು ವಿಧಿಸುವ ಅವಕಾಶವನ್ನು ಹೊಂದಿದೆ.
ಆಗಸ್ಟ್ವರೆಗೆ ಸೇವಾವಧಿ ವಿಸ್ತರಣೆ
ಬಂಡೋಪಾಧ್ಯಾಯ್ ಕಳೆದ ಮೇ 31ರಂದು ನಿವೃತ್ತಿಯನ್ನು ಪಡೆಯಬೇಕಾಗಿತ್ತು. ಆದರೆ ಕೊರೊನಾ ವೈರಸ್ನ ಸಂಕಷ್ಟದ ಸಂದರ್ಭದಲ್ಲಿ ಅವರ ಸೇವಾವಧಿ ವಿಸ್ತರಿಸಲು ಕೇಂದ್ರಕ್ಕೆ ಪಶ್ಚಿಮ ಬಂಗಾಳ ಕೇಳಿದ್ದ ಕಾರಣ ಆಗಸ್ಟ್ 31ರವರೆಗೆ ಹುದ್ದೆಯಲ್ಲಿ ಮುಂದುವರಿಯಲು ಕೇಂದ್ರ ಸಮ್ಮತಿಸಿತ್ತು.
ಹಠಾತ್ ನಿವೃತ್ತಿ ಪಡೆದ ಬಂಡೋಪಾಧ್ಯಾಯ್
ಆದರೆ ಪಶ್ಚಿಮ ಬಂಗಾಳಕ್ಕೆ ಪ್ರಧಾನಿ ತೆರಳಿದ್ದ ಸಂದರ್ಭದಲ್ಲಿ ಉಂಟಾದ ಬೆಳವಣಿಗೆಯ ಬಳಿಕ ಮೇ 31ರಂದು ಪಶ್ಚಿಮ ಬಂಗಾಳ ಮುಖ್ಯಕಾರ್ಯದರ್ಶಿ ಹುದ್ದೆಯಿಂದ ಬಿಡುಗಡೆಗೊಂಡು ದೆಹಲಿಯಲ್ಲಿ ವರದಿ ಮಾಡಬೇಕೆಂದು ಸೂಚಿಸಲಾಗಿತ್ತು. ಈ ಬೆಳವಣಿಗೆಯ ನಂತರ ಅಲಪನ್ ಬಂಡೋಪಾಧ್ಯಾಯ್ ತಮ್ಮ ಹುದ್ದೆಗೆ ರಾಜೀನಾಮೆಯನ್ನು ನೀಡಿದ್ದಾರೆ. ಈಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿಯ ಮುಖ್ಯ ಸಲಹೆಗಾರರನ್ನಾಗಿ ಅಲಪನ್ ಬಂಡೋಪಾಧ್ಯಾಯ್ ಅವರನ್ನು ನೇಮಿಸಿಕೊಳ್ಳಲಾಗಿದೆ.