'ನಿಸರ್ಗ' ಚಂಡಮಾರುತ; ಮುಂಬೈನಲ್ಲಿ 40 ಸಾವಿರ ಜನರ ಸ್ಥಳಾಂತರ
ಮುಂಬೈ, ಜೂನ್ 03 : ಕೊರೊನಾ ವೈರಸ್ ಸೋಂಕಿನ ಭೀತಿಯ ನಡುವೆಯೇ ಮುಂಬೈ ಮಹಾನಗರಕ್ಕೆ 'ನಿಸರ್ಗ' ಚಂಡಮಾರುತದ ಆತಂಕ ಎದುರಾಗಿದೆ. ಎನ್ಡಿಆರ್ಎಫ್ ಪಡೆಗಳು ನಗರದಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡುತ್ತಿವೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ 'ನಿಸರ್ಗ' ಚಂಡಮಾರುತ ಮಹಾರಾಷ್ಟ್ರ ರಾಜ್ಯಕ್ಕೆ ಬುಧವಾರ ಮಧ್ಯಾಹ್ನದ ವೇಳೆಗೆ ಅಪ್ಪಳಿಸಲಿದೆ. ಮುಂಬೈನಿಂದ 94 ಕಿ. ಮೀ. ದೂರದಲ್ಲಿರುವ ಅಲಿಬಾಗ್ ಪ್ರದೇಶಕ್ಕೆ ಚಂಡಮಾರುತ ಆಗಮಿಸಲಿದೆ ಎಂದು ಅಂದಾಜಿಸಲಾಗಿದೆ.
ನಿಸರ್ಗ ಚಂಡಮಾರುತ ಎಫೆಕ್ಟ್; ಉಡುಪಿಯಲ್ಲಿ ಶುರುವಾದ ಮಳೆ
ಚಂಡಮಾರುತದ ಪ್ರಭಾವವನ್ನು ಎದುರಿಸಲು ಮಹಾರಾಷ್ಟ್ರ ಸರ್ಕಾರ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದೆ. ಕೇಂದ್ರ ಗೃಹ ಇಲಾಖೆ 30 ಎನ್ಡಿಆರ್ಎಫ್ ಪಡೆಗಳನ್ನು ರಾಜ್ಯಕ್ಕೆ ಕಳಿಸಿದೆ. ಭಾರತೀಯ ನೌಕಾಪಡೆ, ಮುಂಬೈ ಮಹಾನಗರ ಪಾಲಿಕೆಯ ತಂಡಗಳು ಕಾರ್ಯಾಚರಣೆಗೆ ತಯಾರಾಗಿವೆ.
'ನಿಸರ್ಗ' ಚಂಡಮಾರುತ; ರೈಲುಗಳ ವೇಳಾಪಟ್ಟಿ ಬದಲು
ಮುಂಬೈ ನಗರದ ತಗ್ಗು ಪ್ರದೇಶದಲ್ಲಿರುವ ಜನರನ್ನು ಸ್ಥಳಾಂತರ ಮಾಡುವ ಕಾರ್ಯ ಆರಂಭವಾಗಿದೆ. ಸಮುದ್ರ ತೀರದಲ್ಲಿರುವ ಜನರನ್ನು ಮೊದಲು ಸುರಕ್ಷಿತ ಸ್ಥಳಗಳಿಗೆ ಕಳಿಸಲಾಗುತ್ತಿದೆ. ಜನರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.
ನಿಸರ್ಗ ಚಂಡಮಾರುತ: ಮಹಾರಾಷ್ಟ್ರ, ಕರ್ನಾಟಕ ಕರಾವಳಿಯಲ್ಲಿ ಭಾರಿ ಮಳೆಯ ಮುನ್ಸೂಚನೆ
40 ಸಾವಿರ ಜನರ ಸ್ಥಳಾಂತರ
ಎನ್ಡಿಆರ್ಎಫ್ ಕಮಾಂಡೆಂಟ್ ಅನೂಪ್ ಶ್ರೀವಾಸ್ತವ್ ಈ ಕುರಿತು ಮಾಹಿತಿ ನೀಡಿದ್ದಾರೆ. "ಇದುವರೆಗೂ ಸಮುದ್ರ ತೀರದಲ್ಲಿನ ಸುಮಾರು 40 ಸಾವಿರ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.
8 ಎನ್ಡಿಆರ್ಎಫ್ ತಂಡ
ಎಂಟು ಎನ್ಡಿಆರ್ಎಫ್ ತಂಡಗಳನ್ನು ಮುಂಬೈ ನಗರದಲ್ಲಿ ನಿಯೋಜನೆ ಮಾಡಲಾಗಿದೆ. ಬಾಂದ್ರಾ, ಅಂಧೇರಿ, ವೋರ್ಲಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ತಂಡಗಳು ಕಾರ್ಯ ನಿರ್ವಹಣೆ ಮಾಡುತ್ತಿವೆ.
35 ಶಾಲೆಗಳ ಬಳಕೆ
ಮುಂಬೈ ಮಹಾನಗರ ಪಾಲಿಕೆ 35 ಶಾಲೆಗಳನ್ನು ಜನರಿಗೆ ವಾಸ್ತವ್ಯ ವ್ಯವಸ್ಥೆ ಕಲ್ಪಿಸಲು ಬಳಕೆ ಮಾಡುತ್ತಿದೆ. ಈಗಾಗಲೇ ಕೊರೊನಾ ಸೋಂಕಿನ ವಿಚಾರದಲ್ಲಿ ಮುಂಬೈ ಆತಂಕ ಮೂಡಿಸಿದೆ. ಅಷ್ಟರಲ್ಲಿಯೇ ಚಂಡಮಾರುತ ಬಂದು ಅಪ್ಪಳಿಸಲಿದೆ.
ವಿವಿಧ ಜಿಲ್ಲೆಯಲ್ಲಿ ಹೈ ಅಲರ್ಟ್
'ನಿಸರ್ಗ' ಚಂಡಮಾರುತದ ಪ್ರಭಾವದಿಂದಾಗಿ ಮಹಾರಾಷ್ಟ್ರದ ಮುಂಬೈ, ಪಾಲ್ಘರ್, ರಾಯಗಢ, ಥಾಣೆ, ರತ್ನಗಿರಿ, ಸಿಂಧುದುರ್ಗ ಜಿಲ್ಲೆಗಳಲ್ಲಿ ಎಚ್ಚರದಿಂದ ಇರಲು ಸೂಚನೆ ಕೊಡಲಾಗಿದೆ.