ಮಹಾರಾಷ್ಟ್ರಕ್ಕೆ ಶತಮಾನದ ಹೊಡೆತ ಕೊಡುತ್ತಾ 'ನಿಸರ್ಗ' ಚಂಡಮಾರತ?
ಮುಂಬೈ, ಜೂನ್.02: ನೊವೆಲ್ ಕೊರೊನಾ ವೈರಸ್ ಸೋಂಕಿನ ಸುಳಿಗೆ ಸಿಲುಕಿ ನಲುಗಿರುವ ಮಹಾರಾಷ್ಟ್ರಕ್ಕೆ ಮತ್ತೊಂದು ಮಹಾ ಗಂಡಾಂತರ ಎದುರಾಗಿದೆ. ಬುಧವಾರ ಮಹಾರಾಷ್ಟ್ರಕ್ಕೆ ಚಂಡಮಾರುತವೊಂದು ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
Recommended Video
ಅರಬ್ಬೀ ಸಮುದ್ರದ ಆಗ್ನೇಯ ಭಾಗ, ಪೂರ್ವದ ಮಧ್ಯಭಾಗ ಮತ್ತು ಲಕ್ಷದ್ವೀಪ ಪ್ರದೇಶದಲ್ಲಿ ವಾಯುಭಾರ ಕುಸಿತವಾಗಿದ್ದು, ಮಂಗಳವಾರ ಮಧ್ಯಾಹ್ನದ ವೇಳೆ ಚಂಡಮಾರುತವಾಗಿ ಪರಿವರ್ತನೆಯಾಗಿದೆ. ಈ ಚಂಡಮಾರುತಕ್ಕೆ ಬಾಂಗ್ಲಾದೇಶವು ನಿಸರ್ಗ ಎಂದು ಹೆಸರಿಸಿದೆ.
ನಿಸರ್ಗ ಚಂಡಮಾರುತ: ಮಹಾರಾಷ್ಟ್ರ, ಕರ್ನಾಟಕ ಕರಾವಳಿಯಲ್ಲಿ ಭಾರಿ ಮಳೆಯ ಮುನ್ಸೂಚನೆ
ಬುಧವಾರ ಮಹಾರಾಷ್ಟ್ರಕ್ಕೆ ನಿಸರ್ಗ ಚಂಡಮಾರುತವು ಅಪ್ಪಳಿಸಲಿದ್ದು, ರಾಜ್ಯದ ಹಲವೆಡೆ ಭೂಕುಸಿತ ಸಂಭವಿಸುವ ಆತಂಕವಿದೆ. ಮಹಾರಾಷ್ಟ್ರದ ಪಾಲಿಗೆ ಇದು ಶತಮಾನದ ಬಳಿಕ ಅಪ್ಪಳಿಸಿದ ಭೀಕರ ಚಂಡಮಾರುತ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಮಹಾರಾಷ್ಟ್ರ-ಗುಜರಾತ್ ಕರಾವಳಿಯಲ್ಲಿ ಹೈಅಲರ್ಟ್
ಜೂನ್.03ರ ಬುಧವಾರ ಮಹಾರಾಷ್ಟ್ರ ಕರಾವಳಿಗೆ ನಿಸರ್ಗ ಚಂಡಮಾರುತವು ಅಪ್ಪಳಿಸಲಿದ್ದು, ಭಾರಿ ಮಳೆಯಾಗುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಉತ್ತರ ಕರಾವಳಿ ಭಾಗ ಮತ್ತು ಗುಜರಾತ್ ನ ದಕ್ಷಿಣ ಕರಾವಳಿ ಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಹೈಅಲರ್ಟ್ ಘೋಷಿಸಲಾಗಿದೆ.
15 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳು ದೌಡು
ಮಹಾರಾಷ್ಟ್ರದಲ್ಲಿ ನಿಸರ್ಗ ಚಂಡಮಾರುತದ ಭೀತಿ ಹಿನ್ನೆಲೆ ಒಟ್ಟು 15 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡಗಳನ್ನು ಏಳು ನಗರಗಳಲ್ಲಿ ಮುನ್ನೆಚ್ಚರಿಕೆಯಾಗಿ ನಿಯೋಜನೆ ಮಾಡಲಾಗಿದೆ. ಮುಂಬೈ - 3, ರಾಯಘಡ್ - 4, ಪಲ್ಘರ್ - 2, ಥಾಣೆ - 2, ರತ್ನಗಿರಿ - 2, ಸಿಂಧುದುರ್ಗ - 1, ನವಮುಂಬೈ - 1 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ನಿಯೋಜನೆ ಮಾಡಲಾಗಿದೆ.
ಮಹಾರಾಷ್ಟ್ರ ಕರಾವಳಿಯಿಂದ ಮೀನುಗಾರರು ಶಿಫ್ಟ್
ನಿಸರ್ಗ ಚಂಡಮಾರುತವು 110 ರಿಂದ 120 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದ್ದು, ಇನ್ನು ಆರು ಗಂಟೆಗಳಲ್ಲೇ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನವಮುಂಬೈ, ಕೊಂಕಣ ಮತ್ತು ಸಿಂಧುದುರ್ಗ ಕರಾವಳಿ ಪ್ರದೇಶಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಈ ಪ್ರದೇಶದಲ್ಲಿ 6 ಎನ್ ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ. ಕರಾವಳಿ ಭಾಗದಲ್ಲಿದ್ದ ಮೀನುಗಾರರನ್ನು ಕರಾವಳಿ ಪ್ರದೇಶದಿಂದ ಬೇರೆ ಕಡೆಗೆ ಸ್ಥಳಾಂತರಿಸಲಾಗಿದೆ.
ಎನ್ ಡಿಆರ್ಎಫ್ ಹೆಚ್ಚುವರಿ ತಂಡಕ್ಕಾಗಿ ಗುಜರಾತ್ ಮನವಿ
ಮುಂದಿನ ಆರು ಗಂಟೆಗಳಲ್ಲಿ ಮಹಾಹರಾಷ್ಟ್ರ ಮತ್ತು ಗುಜರಾತ್ ಕರಾವಳಿ ಪ್ರದೇಶದಲ್ಲಿ ನಿಸರ್ಗ ಚಂಡಮಾರುತವು ಅಲ್ಲೋಲ-ಕಲ್ಲೋಲ ಸೃಷ್ಟಿಸುವ ಆತಂಕ ಎದುರಾಗಿದೆ. ಹೀಗಾಗಿ ಮಹಾರಾಷ್ಟ್ರಕ್ಕೆ ಈಗಾಗಲೇ 15 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ರವಾನಿಸಲಾಗಿದ್ದು, ಗುಜರಾತ್ ಗೆ 10 ಎನ್ ಡಿಆರ್ಎಫ್ ತಂಡವನ್ನು ಕರೆಸಿಕೊಳ್ಳಲಾಗಿದೆ. ಇದರ ಜೊತೆಗೆ ಹೆಚ್ಚುವರಿ ಎನ್ ಡಿಆರ್ಎಫ್ ತಂಡವನ್ನು ಕಳುಹಿಸುವಂತೆ ಗುಜರಾತ್ ಮನವಿ ಮಾಡಿಕೊಂಡಿದೆ.