ಹಡಗಿನಲ್ಲಿ ಡ್ರಗ್ಸ್ ಕೇಸ್: ಶಾರುಖ್ ಪುತ್ರನ ಜಾಮೀನು ಅರ್ಜಿ ವಜಾ
ಮುಂಬೈ, ಅಕ್ಟೋಬರ್ 08: ಅರಬ್ಬಿ ಸಮುದ್ರದಲ್ಲಿ ತೇಲುತ್ತಿದ್ದ ಕ್ರೂಸರ್ ಶಿಪ್ನಲ್ಲಿ ನಿಗದಿತ ಕಾರ್ಯಕ್ರಮಕ್ಕೆ ಅತಿಥಿಯಾಗಿ ಹೋಗಿದ್ದ ಆರ್ಯನ್ ಖಾನ್ ಸದ್ಯ ಡ್ರಗ್ಸ್ ಕೇಸಿನಲ್ಲಿ ಸಿಲುಕಿದ್ದಾರೆ. ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಮನವಿಯ ವಿಚಾರಣೆ ನಡೆಸಿದ ಎನ್ ಡಿ ಪಿ ಎಸ್ ವಿಶೇಷ ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿದೆ. ಆರ್ಥರ್ ರೋಡ್ ಜೈಲಿನಲ್ಲಿ ಆರ್ಯನ್ ಖಾನ್ ಇತರರನ್ನು ಕೋವಿಡ್ 19 ಮಾರ್ಗಸೂಚಿಯಂತೆ ಇರಿಸಲು ಸೂಚಿಸಲಾಗಿದೆ.
ಆರ್ಯನ್ ಖಾನ್ ಸೇರಿದಂತೆ ಬಂಧಿತರಾಗಿರುವ ಉಳಿದ ಏಳು ಮಂದಿಯನ್ನು ಪೊಲೀಸ್ ಕಸ್ಟಡಿಗೆ ನೀಡುವಂತೆ ಕೋರಿದ್ದ ಮಾದಕ ವಸ್ತು ನಿಯಂತ್ರಣ ಸಂಸ್ಥೆಯ (ಎನ್ಸಿಬಿ) ಮನವಿ ಮಾಡಿದೆ. ಆದರೆ, ಮುಖ್ಯ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್ ಎಂ ನೇರ್ಲಿಕರ್ ಮನವಿ ತಿರಸ್ಕರಿಸಿ, ಜಾಮೀನು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದರು.
#Breaking : Mumbai Court rejects bail applications of Aryan Khan, Arbaaz Merchant and Munmun Dhamecha holding that the applications are not maintainable. #AryanKhan
— Live Law (@LiveLawIndia) October 8, 2021
ಅಕ್ಟೋಬರ್ 4ರಂದು ಆರ್ಯನ್ ಖಾನ್ ಮತ್ತು ಇತರೆ ಆರೋಪಿಗಳನ್ನು ನ್ಯಾಯಾಲಯವು ಅಕ್ಟೋಬರ್ 7ರವರೆಗೆ ಎನ್ಸಿಬಿ ಕಸ್ಟಡಿಗೆ ನೀಡಿತ್ತು. ಬುಧವಾರ ಮತ್ತೆ ನಾಲ್ವರನ್ನು ಹೆಚ್ಚುವರಿಯಾಗಿ ಬಂಧಿಸಲಾಗಿದ್ದು, ಅವರನ್ನು ಅಕ್ಟೋಬರ್ 11ರವರೆಗೆ ಎನ್ಸಿಬಿ ವಶಕ್ಕೆ ನೀಡಲಾಗಿದೆ. ಹೀಗಾಗಿ, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ. ಅಚಿತ್ ಕುಮಾರ್ ಮತ್ತು ಅಂತಾರಾಷ್ಟ್ರೀಯ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವ ವಿದೇಶಿ ಪ್ರಜೆಯೊಬ್ಬರು ಪ್ರಕರಣದಲ್ಲಿ ಬಂಧಿಸಲಾಗಿದೆ.
ಆರ್ಯನ್ ಹಾಗೂ ಇತರೆ ಬಂಧಿತರ ಜೊತೆ ಮುಖಾಮುಖಿ ವಿಚಾರಣೆ ನಡೆಸಿದರೆ, ಈ ಪ್ರಕರಣದ ಇತರೆ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಲಿದೆ. ಹೀಗಾಗಿ ಕಸ್ಟಡಿಗೆ ನೀಡಿ ಎಂದು ಪೊಲೀಸರು ಮನವಿ ಮಾಡಿದ್ದರು.
ಮುಂಬೈನಿಂದ ಗೋವಾದೆಡೆಗೆ ತೆರಳುತ್ತಿದ್ದ ಕ್ರೂಸ್ ಶಿಪ್ Cordelia Cruises' Empressನಲ್ಲಿ ರೇವ್ ಪಾರ್ಟಿ ನಡೆದಿಲ್ಲ ಅದು ಮ್ಯೂಸಿಕಲ್ ನೈಟ್, ಕದ್ದು ಮುಚ್ಚಿ ಆಯೋಜನೆ ಮಾಡಿದ್ದಲ್ಲ, ಎಂದು ವಕೀಲ ವಾದಿಸಿದ್ದಾರೆ. ನನ್ನ ಕಕ್ಷಿದಾರ ಈಗಾಗಲೇ ಎನ್ ಸಿ ಬಿ ವಿಚಾರಣೆಗೆ ಒಳಪಟ್ಟಿದ್ದು, ಮೊಬೈಲ್ ಹಾಗೂ ಇತರೆ ವಸ್ತುಗಳನ್ನು ತನಿಖಾ ಸಂಸ್ಥೆ ವಶಕ್ಕೆ ನೀಡಿ ತನಿಖೆಗೆ ಸಹಕರಿಸಿದ್ದಾರೆ, ಇನ್ನೂ ಹೆಚ್ಚಿನ ಕಸ್ಟಡಿಯ ವಿಚಾರಣೆ ಅಗತ್ಯವಿಲ್ಲ ಎಂದು ಆರ್ಯನ್ ಪರ ವಕೀಲ ಸತೀಶ್ ಮಾಡಿದ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿ, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಆಯೋಜಿಕರಿಗೆ ಸಮನ್ಸ್: ಕೊರ್ಡೆಲಿಯಾ ಕ್ರೂಸಸ್ ಅಧ್ಯಕ್ಷ ಹಾಗೂ ಸಿಇಒ ಜರ್ಗನ್ ಬೈಲೊಮ್, ಎಫ್ಟಿವಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಕಾಶಿಫ್ ಖಾನ್ ಅಲ್ಲದೆ 6 ಮಂದಿ ಆಯೋಜಕರಿಗೆ ಸಮನ್ಸ್ ನೀಡಲಾಗಿದೆ. ಆರ್ಯಾನ್ ಖಾನ್ ಸೇರಿದಂತೆ ವಶಕ್ಕೆ ಪಡೆದ 10 ಮಂದಿಯ ಸ್ಮಾರ್ಟ್ ಫೋನ್ ಜಪ್ತಿ ಮಾಡಲಾಗಿದೆ. ಸ್ಮಾರ್ಟ್ ಫೋನ್ ನಲ್ಲಿರುವ ವಾಟ್ಸಾಪ್, ಟೆಲಿಗ್ರಾಮ್, ಎಸ್ಎಂಎಸ್ ಸಂದೇಶಗಳನ್ನು ಪರಿಶೀಲಿಸಲಾಗುತ್ತಿದೆ.
ಯಾವ ಡ್ರಗ್ಸ್ ಪತ್ತೆ: ಎಕ್ಸ್ ಟಸಿ ಪಿಲ್ಸ್, ಕೊಕೈನ್, ಮೆಫೆಡ್ರೋನ್, ಚರಸ್ ಮುಂತಾದ ಮಾದಕ ದ್ರವ್ಯಗಳು ಸಿಕ್ಕಿವೆ. ನೋಂದಣಿ ಪ್ರಕಾರ ಎಂಟು ಮಂದಿ ಯುವಕರು ಇಬ್ಬರು ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ಎಂಡಿಎಂಎ/ectasy, ಕೊಕೈನ್, ಎಂಡಿ(mephedrone) ಹೆಚ್ಚಿನ ಪ್ರಮಾಣದಲ್ಲಿ ಸಿಕ್ಕಿದೆ. ಕ್ರೈಂ ಸಂಖ್ಯೆ ಸಿಆರ್ 94/21 ದಾಖಲಿಸಲಾಗಿದೆ, ವಿಚಾರಣೆ ಜಾರಿಯಲ್ಲಿದೆ.
ಯಾರ ಯಾರ ವಿಚಾರಣೆ?: ಗಣ್ಯಾತಿಗಣ್ಯರ ಮಕ್ಕಳೇ ಹೆಚ್ಚಾಗಿದ್ದ ಕ್ರೂಸ್ ಶಿಪ್ ನಲ್ಲಿದ್ದವರು ಲಕ್ಷಾಂತರ ರುಪಾಯಿ ಪ್ರವೇಶ ಶುಲ್ಕ ಪಾವತಿಸಿ, ಆಹ್ವಾನದ ಮೇರೆಗೆ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ. ಶಾರುಖ್ ಖಾನ್ ಪುತ್ರ ಆರ್ಯಾನ್ ಖಾನ್ ಅಲ್ಲದೆ ಆತನ ಗೆಳೆಯರಾದ ಅರ್ಬಾಜ್ ಮರ್ಚಂಟ್(29), ಮುನ್ಮುನ್ ಧಮೇಚಾ(39), ನೂಪೂರ್ ಸಾರಿಕಾ, ಇಸ್ಮಿತ್ ಸಿಂಗ್, ಮೋಹಕ್ ಜಸ್ವಾಲ್, ವಿಕ್ರಾಂತ್ ಛೊಕರ್ ಹಾಗೂ ಗೋಮಿತ್ ಛೋಪ್ರಾ ರನ್ನು ವಿಚಾರಣೆಗೊಳಪಡಿಸಲಾಗಿದೆ.