ಮುಂಬೈ ನಗರದಲ್ಲೇ 20,000ಕ್ಕೂ ಹೆಚ್ಚು ಮಂದಿಗೆ ಕೊರೊನಾವೈರಸ್!
ಮುಂಬೈ, ಜನವರಿ 6: ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಅತಿರೇಕಕ್ಕೆ ತಿರುಗಿದೆ. ರಾಜ್ಯ ರಾಜಧಾನಿ ಮುಂಬೈನಲ್ಲಿ ಒಂದೇ ದಿನ 20,000ಕ್ಕೂ ಅಧಿಕ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, ಶೇ.85ರಷ್ಟು ಸೋಂಕಿತರಲ್ಲಿ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ ಎಂಬುದು ಗೊತ್ತಾಗಿದೆ.
ಮುಂಬೈನಲ್ಲಿ ಬುಧವಾರಕ್ಕೆ ಹೋಲಿಸಿದರೆ ಗುರುವಾರ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.33ರಷ್ಟು ಏರಿಕೆಯಾಗಿದೆ. ಹೊಸ ಸೋಂಕಿತರ ಪೈಕಿ 85ರಷ್ಟು ಮಂದಿಯಲ್ಲಿ ಯಾವುದೇ ರೋಗದ ಲಕ್ಷಣಗಳು ಕಂಡು ಬಂದಿಲ್ಲ. 1,170 ರೋಗಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಈ ಪೈಕಿ 106 ಮಂದಿ ಆಕ್ಸಿಜನ್ ಸಪೋರ್ಟ್ ನಲ್ಲಿದ್ದಾರೆ. ಬುಧವಾರ ನಗರದಲ್ಲಿ ಒಂದೇ ದಿನ 15,166 ಮಂದಿಗೆ ಕೊವಿಡ್-19 ಸೋಂಕು ತಗುಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ದೃಢಪಟ್ಟಿತ್ತು.
ಮಹಾರಾಷ್ಟ್ರದಲ್ಲಿ ನಿನ್ನೆಗೆ ಹೋಲಿಸಿದರೆ ಇಂದು ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಶೇ.36.65ರಷ್ಟು ಏರಿಕೆಯಾಗಿದೆ. ರಾಜ್ಯದಲ್ಲಿ ಒಂದೇ ದಿನ 36,265 ಮಂದಿಗೆ ಸೋಂಕು ತಗುಲಿರುವುದು ಪರೀಕ್ಷೆಯಲ್ಲಿ ಖಾತ್ರಿಯಾಗಿದೆ.
ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಸೋಂಕು:
ಮಹಾರಾಷ್ಟ್ರ ರಾಜಧಾನಿ ಮುಂಬೈ ಮಹಾನಗರದಲ್ಲಿ ಹೆಚ್ಚು ಹೆಚ್ಚು ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ಕೊವಿಡ್-19 ಸೋಂಕು ತಗುಲುತ್ತಿರುವುದು ಹೊಸ ಆತಂಕಕ್ಕೆ ಕಾರಣವಾಗಿದೆ. ನಗರದ ಕಿಂಗ್ ಎಡ್ವರ್ಡ್ ಮೆಮೋರಿಯಲ್ (ಕೆಇಎಂ) ಆಸ್ಪತ್ರೆಯಲ್ಲಿ 150ಕ್ಕೂ ಹೆಚ್ಚು ವೈದ್ಯರಲ್ಲಿ ಸೋಂಕು ಪತ್ತೆಯಾಗಿದೆ. ಸಿಯಾನ್ ಆಸ್ಪತ್ರೆಯಲ್ಲಿ ಇನ್ನೂ 80 ಮತ್ತು ಇತರರಲ್ಲಿ ಸುಮಾರು 80 ವೈದ್ಯರಲ್ಲಿ ವೈರಸ್ ಕಾಣಿಸಿಕೊಂಡಿದೆ.
ಮಹಾರಾಷ್ಟ್ರದಾದ್ಯಂತ ಇದುವರೆಗೆ 260ಕ್ಕೂ ಹೆಚ್ಚು ವೈದ್ಯರಲ್ಲಿ ಕೊವಿಡ್-19 ಸೋಂಕು ತಗುಲಿರುವುದು ಖಾತ್ರಿಯಾಗಿದೆ ಎಂದು ನಿವಾಸಿ ವೈದ್ಯರ ಸಂಘ ತಿಳಿಸಿದೆ. ನಗರದ ಸಾರ್ವಜನಿಕ ಸಾರಿಗೆ ಸೇವೆಯ 60 ಉದ್ಯೋಗಿಗಳು ಸಹ ಧನಾತ್ಮಕ ಪರೀಕ್ಷೆ ನಡೆಸಿದ್ದಾರೆ ಎಂದು ಎಎನ್ಐ ವರದಿ ಮಾಡಿದೆ.
ಕೊವಿಡ್-19 ಸುನಾಮ ಎದುರಿಸಲು ಮುಂಬೈ ಸಿದ್ಧ:
ಮುಂಬೈ ನಗರದಲ್ಲಿ ಹಠಾತ್ ಬೆಳವಣಿಗೆಯಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದರೆ ಏನು ಕಥೆ ಎಂಬ ಪ್ರಶ್ನೆಗೆ ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ಉತ್ತರಿಸಿದ್ದಾರೆ. "ನಾವು ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗಸೂಚಿಗಳನ್ನು ಪಾಲಿಸುತ್ತಿದ್ದೇವೆ. ಜಂಬೋ ಕ್ವಾರಂಟೇನ್ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ನಗರ ಮತ್ತು ಮಹಾರಾಷ್ಟ್ರದಲ್ಲಿ ಸೋಂಕು ಹರಡುವಿಕೆ ತಡೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಒಂದು ವೇಳೆ ಕೊರೊನಾವೈರಸ್ ಸುನಾಮಿ ವೇಗದಲ್ಲಿ ಹರಡಲು ಆರಂಭಿಸಿದರೆ ಅದನ್ನು ಎದುರಿಸಲು ನಾವು ಸನ್ನದ್ಧರಾಗಿದ್ದೇವೆ," ಎಂದು ತಿಳಿಸಿದ್ದಾರೆ.
ಎರಡನೇ ಅಲೆಯಿಂದ ಪಾಠ ಕಲಿತಿದ್ದೇವೆ:
ಕೊರೊನಾವೈರಸ್ ಎರಡನೇ ಅಲೆಯ ಸಮಯದಲ್ಲಿ, ನಗರವು ಆಸ್ಪತ್ರೆಯ ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕದ ಕೊರತೆಯನ್ನು ಎದುರಿಸಿತು. ಅಂದೇ ನಾವು ಪಾಠಗಳನ್ನು ಕಲಿತಿದ್ದೇವೆ ಎಂದು ಒತ್ತಿ ಹೇಳಿದ ಮೇಯರ್, "ನಾವು ಕಳೆದ ಬಾರಿ ಅಂತರವನ್ನು ಗಮನಿಸಿದ್ದೇವೆ. 30,000ಕ್ಕೂ ಹೆಚ್ಚು ಹಾಸಿಗೆಗಳು - ಆಸ್ಪತ್ರೆಯ ಹಾಸಿಗೆಗಳನ್ನು ಹೊರತುಪಡಿಸಿ - ಪ್ರಸ್ತುತ ಅಲ್ಲಿ ಆಮ್ಲಜನಕ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿ ಕೊರತೆಯೂ ಇಲ್ಲ, ನಾವು ಮೂರನೇ ಅಲೆಗೆ ಸಿದ್ಧರಾಗಿದ್ದೇವೆ," ಎಂದು ಹೇಳಿದ್ದಾರೆ.
ಕೊವಿಡ್-19 ಪರೀಕ್ಷೆ ಹೆಚ್ಚಳದ ಭರವಸೆ:
ಮುಂಬೈ ನಗರ ಸೇರಿದಂತೆ ಮಹಾರಾಷ್ಟ್ರದಲ್ಲಿ ಕೊವಿಡ್-19 ಸೋಂಕು ಪರೀಕ್ಷೆ ವೇಗವನ್ನು ಹೆಚ್ಚಿಸಲಾಗುವುದು ಎಂಬು ಮೇಯರ್ ಕಿಶೋರಿ ಪಡ್ನೇಕರ್ ಭರವಸೆ ನೀಡಿದ್ದಾರೆ. ನಾವು ಸದಾ ಅಲರ್ಟ್ ಆಗಿದ್ದೇವೆ. ವಿಮಾನ ಪ್ರಯಾಣಿಕರು ಕಡ್ಡಾಯವಾಗಿ RT-PCR ಪರೀಕ್ಷೆಗೊಳಪಡಬೇಕು, ಪರೀಕ್ಷೆಯ ವರದಿ ಬರುವವರೆಗೂ ಹೊರಗೆ ಹೋಗುವಂತಿಲ್ಲ. ಇನ್ನು, ಹಗಡು ಹತ್ತುವುದಕ್ಕೂ RT-PCR ಪರೀಕ್ಷಾ ವರದಿ ಕಡ್ಡಾಯವಾಗಿರುತ್ತದೆ. ಒಂದು ವೇಳೆ ಅವರಲ್ಲಿ ಸೋಂಕಿನ ಲಕ್ಷಣ ಕಂಡು ಬಂದಲ್ಲಿ, ಅವರನ್ನು ಜೀನೋಮ್ ಸೀಕ್ವೆನ್ಸಿಂಗ್ ಪರೀಕ್ಷೆಗೊಳಪಡಿಸಲಾಗುವುದು, ಈ ಅವಧಿಯಲ್ಲಿ ಅವರನ್ನು ಕ್ವಾರೆಂಟೇನ್ ಮಾಡಲು, ಕೇಂದ್ರಗಳು ಮತ್ತು ಹೋಟೆಲ್ಗಳನ್ನು ಅಲ್ಲಿ ಪಟ್ಟಿ ಮಾಡಲಾಗಿರುತ್ತದೆ," ಎಂದು ಕಿಶೋರಿ ಪಡ್ನೇಕರ್ ಮಾಹಿತಿ ನೀಡಿದ್ದಾರೆ.
Recommended Video