ಕ್ಲಬ್ ಮೇಲೆ ದಾಳಿ: ಸುರೇಶ್ ರೈನಾ, ಸುಸೇನ್ ಖಾನ್, ಗುರು ರಾಂಧವ ಬಂಧನ
ಮುಂಬೈ, ಡಿಸೆಂಬರ್ 22: ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಪಾರ್ಟಿ ನಡೆಯುತ್ತಿದ್ದ ಕ್ಲಬ್ ಮೇಲೆ ದಾಳಿ ನಡೆಸಿರುವ ಮುಂಬೈ ಪೊಲೀಸರು ಮಾಜಿ ಕ್ರಿಕೆಟಿಗ ಸುರೇಶ್ ರೈನಾ, ಸುಸೇನ್ ಖಾನ್ ಮತ್ತು ಗಾಯಕ ಗುರು ರಾಂಧವ ಸೇರಿದಂತೆ ಸುಮಾರು 34 ಮಂದಿಯನ್ನು ಬಂಧಿಸಿ, ಜಾಮೀನನ ಆಧಾರದಲ್ಲಿ ಬಿಡುಗಡೆ ಮಾಡಲಾಗಿದೆ.
ಮುಂಬೈ ವಿಮಾನ ನಿಲ್ದಾಣದ ಸಮೀಪದ ಡ್ರ್ಯಾಗನ್ಫ್ಲೈ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು, ಕ್ಲಬ್ನಲ್ಲಿನ ಏಳು ಸಿಬ್ಬಂದಿ ಸೇರಿದಂತೆ ಅಲ್ಲಿದ್ದವರನ್ನು ಬಂಧಿಸಲಾಗಿದೆ. ಸುರೇಶ್ ರೈನಾ, ನಟ ಹೃತಿಕ್ ರೋಷನ್ ಪತ್ನಿ ಸುಸೇನ್ ಖಾನ್ ಮತ್ತು ಗುರು ರಾಂಧವ ಸೇರಿದಂತೆ ಅನೇಕರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ಈ ದಾಳಿ ನಡೆದಿದೆ.
ಸುರೇಶ್ ರೈನಾ ಮತ್ತು ಇತರರು ಸೇರಿದಂತೆ 34 ಜನರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 188, 269, 34ರ ಅಡಿ, ಬಾಂಬೆ ಪೊಲೀಸ್ ಕಾಯ್ದೆ ಮತ್ತು ಸಾಂಕ್ರಾಮಿಕ ರೋಗ ಕಾಯ್ದೆಗಳ ಅಡಿ ಪ್ರಕರಣಗಳನ್ನು ದಾಖಲಿಸಲಾಗಿದೆ. ಡ್ರ್ಯಾಗನ್ಫ್ಲೈ ಕ್ಲಬ್ನಲ್ಲಿ ಕೋವಿಡ್ ನಿಯಮಗಳನ್ನು ಪಾಲಿಸುತ್ತಿರಲಿಲ್ಲ ಮತ್ತು ಕ್ಲಬ್ ನಡೆಸಲು ನೀಡಲಾಗಿದ್ದ ಸಮಯದ ಗಡುವನ್ನು ಮೀರಿ ತೆರೆಯಲಾಗಿತ್ತು ಎಂದು ಸಹಾರ್ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮುಂದೆ ಓದಿ.
ಗಾಯಕ ಬಾದ್ ಷಾ ಪರಾರಿ?
ಅಂಧೇರಿಯ ಜೆಡಬ್ಕ್ಯೂ ಮ್ಯಾರಿಯೇಟ್ ಹೋಟೆಲ್ನಲ್ಲಿರುವ ಕ್ಲಬ್ನಲ್ಲಿ ಮಂಗಳವಾರ ನಸುಕಿನ 2.30ರ ವೇಳೆ ಈ ದಾಳಿ ನಡೆದಿದೆ. ಗಾಯಕ ಬಾದ್ಷಾ ಕೂಡ ಸ್ಥಳದಲ್ಲಿ ಇದ್ದರು. ಆದರೆ ಅವರನ್ನು ಹಿಂಬಾಗಿಲ ಮೂಲಕ ಹೊರಗೆ ಹೋಗಲು ಬಿಡಲಾಗಿದೆ. ಬಂಧಿತರಲ್ಲಿ 19 ಮಂದಿ ದೆಹಲಿ, ಪಂಜಾಬ್ನಿಂದ ಬಂದವರಾಗಿದ್ದು, ಅವರನ್ನು ಬೆಳಿಗ್ಗೆ 7 ಗಂಟೆಗೆ ವಿಮಾನದಲ್ಲಿ ದೆಹಲಿಗೆ ಕಳುಹಿಸಲಾಗಿದೆ.
ಯಾವ ಯಾವ ಪ್ರಕರಣ?
ಸಾರ್ವಜನಿಕ ಸೇವೆಯಲ್ಲಿರುವವರು ಹೊರಡಿಸಿದ ಆದೇಶಕ್ಕೆ ಅವಿಧೇಯತೆ ತೋರಿಸಿರುವುದು (ಸೆಕ್ಷನ್ 188), ಜೀವಕ್ಕೆ ಮಾರಕವಾಗುವ ಯಾವುದೇ ಕಾಯಿಲೆಯ ಸೋಂಕು ಹರಡುವ ಸಾಧ್ಯತೆ ಇರುವಲ್ಲಿ ಯಾವುದೇ ಕಾಯ್ದೆಗಳನ್ನು ಉಲ್ಲಂಘಿಸುವ ನಿರ್ಲಕ್ಷ್ಯ (ಸೆಕ್ಷನ್ 269) ಮತ್ತು ಸಾಮಾನ್ಯ ಉದ್ದೇಶದೊಂದಿಗೆ ಅನೇಕ ವ್ಯಕ್ತಿಗಳು ಜತೆಗೂಡಿ ಕೃತ್ಯ ಎಸಗುವುದು (ಸೆಕ್ಷನ್ 24) ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮುಂಬೈನಲ್ಲಿ ರಾತ್ರಿ ನಿಷೇಧಾಜ್ಞೆ
ಮುಂಬೈ ಪಾಲಿಕೆ ಪ್ರದೇಶಗಳಲ್ಲಿ ರಾತ್ರಿ ನಿಷೇಧಾಜ್ಞೆಯನ್ನು ಜಾರಿ ಮಾಡಿ ಮಹಾರಾಷ್ಟ್ರ ಸರ್ಕಾರ ಸೋಮವಾರ ಆದೇಶ ಹೊರಡಿಸಿತ್ತು. ಬ್ರಿಟನ್ನಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನ ಸಂಚಾರ ನಿರ್ಬಂಧದ ಜತೆಗೆ ಈ ಕ್ರಮ ಕೈಗೊಳ್ಳಲಾಗಿತ್ತು.
ಹೊಸ ವರ್ಷದ ಚಟುವಟಿಕೆಗಳಿಗೆ ನಿರ್ಬಂಧ
ಹೊಸ ವರ್ಷಕ್ಕೂ ಮುನ್ನ ಮಹಾರಾಷ್ಟ್ರ ಸರ್ಕಾರವು ರಾಜ್ಯದಲ್ಲಿ ಜನರ ಚಟುವಟಿಕೆಗಳ ಮೇಲೆ ಸರಣಿ ನಿರ್ಬಂಧಗಳನ್ನು ವಿಧಿಸಿದೆ. ಮುಖ್ಯವಾಗಿ ಮುಂಬೈನಲ್ಲಿ ಡಿ. 22ರಿಂದ ಜನವರಿ 5ರವರೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.