ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಿಂದ ಇಮ್ರಾನ್ ಫೋಟೋ ಔಟ್?
ಮುಂಬೈ, ಫೆಬ್ರವರಿ 16 : ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಮುಂಬೈನ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಿಂದ ಪಾಕಿಸ್ತಾನದ ಪ್ರಧಾನಿ ಮತ್ತು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಇಮ್ರಾನ್ ಖಾನ್ ಅವರ ಭಾವಚಿತ್ರವನ್ನು ಮುಚ್ಚಲಾಗಿದೆ.
ಸದ್ಯಕ್ಕೆ ಇಮ್ರಾನ್ ಖಾನ್ ಭಾವಚಿತ್ರವನ್ನು ಕವರ್ ಮಾಡಲಾಗಿದೆ. ಅದನ್ನು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ(ಸಿಸಿಐ)ದಿಂದ ಶಾಶ್ವತವಾಗಿ ಕಿತ್ತುಹಾಕುವ ಬಗ್ಗೆ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಿಸಿಐನ ಅಧ್ಯಕ್ಷ ಪ್ರೇಮಲ್ ಉಡಾನಿ ಅವರು ಹೇಳಿದ್ದಾರೆ.
ಕ್ರಿಕೆಟ್ ಗೆ ಇಮ್ರಾನ್ ಖಾನ್ ನೀಡಿರುವ ಕೊಡುಗೆಯ ಬಗ್ಗೆ ನಮಗೆ ಅಭಿಮಾನವಿದೆ. ಆದರೆ, ಅದೇ ಸಮಯದಲ್ಲಿ ಅವರು ಪಾಕಿಸ್ತಾನದ ಪ್ರಧಾನಿ ಎಂಬುದನ್ನು ಮರೆಯುವಂತಿಲ್ಲ. ನಮ್ಮ ದೇಶದ ಅಗಲಿದ ವೀರ ಯೋಧರಿಗೆ ಗೌರವ ಮತ್ತು ಐಕ್ಯತೆಯ ದೃಷ್ಟಿಯಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.
ಇಮ್ರಾನ್ ಖಾನ್ ಫೋಟೋವನ್ನು ಬರೀ ಮುಚ್ಚುವುದಾ? ಅದನ್ನು ಅಲ್ಲಿಂದ ಕಿತ್ತು ಬಿಸಾಕಿ, ಪೆಟ್ರೋಲ್ ಬಂಕ್ ನಿಂದ ಪೆಟ್ರೋಲ್ ತಂದು, ಮೈದಾನದಲ್ಲಿ ಅದರ ಮೇಲೆ ಪೆಟ್ರೋಲ್ ಸುರುವಿ, ಬೆಂಕಿಕಡ್ಡಿ ಅಥವಾ ಲೈಟರ್ ಬಳಸಿ ಸುಟ್ಟು ಹಾಕಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಕೆಲವರು ಇಮ್ರಾನ್ ಖಾನ್ ಚಿತ್ರವನ್ನು ಕಾರ್ಪೊರೇಷನ್ ತಿಪ್ಪೆಯಲ್ಲಿ ಬಿಸಾಕಿ, ಅದರ ಮೇಲೆ ಕಪ್ಪು ಬಣ್ಣ ಬಳಿಯಿರಿ, ಚರಂಡಿಯಲ್ಲಿ ಎಸೆಯಿರಿ. ಅದನ್ನು ಕಿತ್ತು ಬಿಸಾಡುವುದು ಮಾತ್ರವಲ್ಲದೆ, ಅದರ ಮೇಲೆ ಯಾಕೆ ಕಿತ್ತು ಬಿಸಾಡಿದ್ದೇವೆಂದು ವಿವರಿಸಿ ಆತನಿಗೆ ವಾಪಸ್ ಕಳಿಸಿ ಎಂದಿದ್ದಾರೆ ಕೆಲವರು.
ಇಡೀ ವಿಶ್ವವೇ ಭಾರತದ ಪರವಾಗಿ ನಿಂತಿದ್ದು, ಇಪ್ಪತ್ತೈದಕ್ಕೂ ಹೆಚ್ಚು ರಾಷ್ಟ್ರಗಳು ಭಯೋತ್ಪಾದನೆಯ ಬಗ್ಗೆ ಆತಂಕ ವ್ಯಕ್ತಪಡಿಸಿವೆ. ಈ ಹತ್ಯೆಯನ್ನು ಜೈಷ್-ಎ-ಮೊಹಮ್ಮದ್ ಮಾಡಿರುವುದಾಗಿ ಹೇಳಿದ್ದರೂ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಕನಿಷ್ಠಪಕ್ಷ ವಿಷಾದವನ್ನೂ ವ್ಯಕ್ತಪಡಿಸಿಲ್ಲ.
ಪಾಕಿಸ್ತಾನಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಅಪಾರವಾಗಿ ಮೆಚ್ಚಿಕೊಳ್ಳುವ, ಭಾರತದ ಮಾಜಿ ಕ್ರಿಕೆಟರ್ ನವಜ್ಯೋತ್ ಸಿಂಗ್ ಸಿಧು ಅವರನ್ನು 'ಕಪಿಲ್ ಶರ್ಮಾ ಶೋ'ನಿಂದ ತೆಗೆದುಹಾಕಲಾಗಿದೆ. ಪುಲ್ವಾಮಾದಲ್ಲಿ ನಡೆದ ಹತ್ಯಾಕಾಂಡಕ್ಕಾಗಿ ಇಡೀ ಪಾಕಿಸ್ತಾನ ದೇಶವನ್ನು ಏಕೆ ದೂರುತ್ತೀರಿ ಎಂದು ಹೇಳಿದ್ದಕ್ಕೆ ಸಿಧುವನ್ನು ಚಾನಲ್ ನಿಂದ ತೆಗೆಯಲಾಗಿದೆ.