ಮಹಾರಾಷ್ಟ್ರದ ಮತ್ತೊಬ್ಬ ಸಚಿವನಿಗೆ ಕೊರೊನಾ ಅಟ್ಯಾಕ್!
ಮುಂಬೈ, ಮೇ 25: ಮಹಾರಾಷ್ಟ್ರ ಲೋಕೋಪಯೋಗಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಮುಖಂಡ ಅಶೋಕ್ ಚೌಹಾಣ್ ಅವರಿಗೆ ಕೋವಿಡ್ 19 ಸೋಂಕು ತಗುಲಿರುವುದು ವರದಿಯಾಗಿದೆ.
ಕೋವಿಡ್ನ ಯಾವುದೇ ರೋಗಲಕ್ಷಣಗಳು ಇರದಿದ್ದರೂ ಭಾನುವಾರ ಅವರನ್ನು ಕೋವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಮಹಾರಾಷ್ಟ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಮುಂಬೈ ಏರ್ಪೋರ್ಟ್ನಲ್ಲಿ 25 ವಿಮಾನಗಳ ಹಾರಾಟಕ್ಕೆ ಮಹಾ ಸರ್ಕಾರ ಅನುಮತಿ
ಸದ್ಯ ಅವರನ್ನು ಮಹಾರಾಷ್ಟ್ರದ ನಾಂದೇಡ್ನ ಆಸ್ಪತ್ರೆಯಲ್ಲಿ ಐಸೋಲೇಷನ್ನಲ್ಲಿ ಇಡಲಾಗಿದೆ. ಅಶೋಕ್ ಚೌಹಾಣ್ ಅವರು ಮುದಖೇಡ್ ವಿಧಾನಸಭಾ ಕ್ಷೇತ್ರದ ಶಾಸಕರೂ ಸಹ ಆಗಿದ್ದಾರೆ.
ಮಹಾರಾಷ್ಟ್ರದಲ್ಲಿ ಮಾರಣಾಂತಿಕ ವೈರಸ್ಗೆ ತುತ್ತಾಗಿರುವ ಎರಡನೇ ಸಚಿವ ಅಶೋಕ್ ಚವಾಣ್ ಆಗಿದ್ದಾರೆ. ಕಳೆದ ತಿಂಗಳ ವಸತಿ ಸಚಿವ ಜಿತೇಂದ್ರ ಅವಾದ್ ಅವರಿಗೆ ಕೋವಿಡ್ 19 ಸೋಂಕು ತಗುಲಿತ್ತು. ಮುಂಬೈನ ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳ ಚಿಕಿತ್ಸೆಯ ನಂತರ ಸಂಪೂರ್ಣವಾಗಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು.
ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಭಾನುವಾರದ ಸಂಜೆಯ ವೇಳೆಗೆ 33,988 ಸಕ್ರಿಯ ಪ್ರಕರಣಗಳು ಆ ರಾಜ್ಯದಲ್ಲಿ ಕಂಡು ಬಂದಿವೆ. ಸಾವಿನ ಸಂಖ್ಯೆ 1,635 ಕ್ಕೆ ತಲುಪಿದೆ.