ಮಹಾರಾಷ್ಟ್ರದಲ್ಲಿ ಕೊರೊನಾ 2ನೇ ಅಲೆ ಹೆಚ್ಚಾಗುವುದರ ಹಿಂದಿನ ಗುಟ್ಟು
ಮುಂಬೈ, ಮಾರ್ಚ್ 21: ಭಾರತದಾದ್ಯಂತ ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಹೆಚ್ಚಾಗಿದೆ. ಈ ಬಾರಿಯ ಕೊವಿಡ್-19 ಸೋಂಕು ಸೌಮ್ಯವಾಗಿದ್ದು ತೀವ್ರಗತಿಯಲ್ಲಿ ಹರಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಎಚ್ಚರಿಕೆ ನೀಡಿದ್ದಾರೆ.
ಮಹಾರಾಷ್ಟ್ರದಲ್ಲಿ ಫೆಬ್ರವರಿ ತಿಂಗಳಿನಿಂದ ಕೊರೊನಾವೈರಸ್ ಎರಡನೇ ಅಲೆಯ ವೇಗ ಹೆಚ್ಚಾಗಿದೆ. ಫೆಬ್ರವರಿ 15ರಿಂದ ಮಾರ್ಚ್ 20ರವರೆಗೂ ಅಂಕಿ-ಅಂಶಗಳನ್ನು ತುಲನೆ ಮಾಡಿದರೆ ಕೊವಿಡ್-19 ಸೋಂಕಿನ ಪ್ರಕರಣಗಳ ಸಂಖ್ಯೆಯಲ್ಲಿ ನಾಲ್ಕು ಪಟ್ಟು ಏರಿಕೆಯಾಗಿದೆ.
Explained: ಭಾರತದಲ್ಲಿ ಕೊರೊನಾ ಲಸಿಕೆ ವ್ಯರ್ಥಕ್ಕೆ ಕಾರಣವೇನು?
ಫೆಬ್ರವರಿ ಮೊದಲ ವಾರದಲ್ಲಿ ಕೊವಿಡ್-19 ಹಾಸಿಗೆಗಳ ಸಂಖ್ಯೆಯನ್ನು ಕಡಿತಗೊಳಿಸಲು ನಾವು ಯೋಜನೆ ಹಾಕಿಕೊಂಡಿದ್ದೆವು. 60 ರಿಂದ 30ಕ್ಕೆ ಕೊರೊನಾವೈರಸ್ ಹಾಸಿಗೆಗಳ ಸಂಖ್ಯೆಯನ್ನು ಇಳಿಸಲು ಚಿಂತಿಸಲಾಗುತ್ತಿತ್ತು. ಆದರೆ ಫೆಬ್ರವರಿ ಕೊನೆಯ ವಾರದಲ್ಲಿ ಆಸ್ಪತ್ರೆಯ ಎಲ್ಲ ಕೊವಿಡ್-19 ಹಾಸಿಗೆಗಳು ಭರ್ತಿಯಾಗಿವೆ ಎಂದು ಚೆಂಬರ್ ಆಸ್ಪತ್ರೆಯ ವೈದ್ಯ ಪ್ರಿನ್ಸ್ ಸೂರಣ್ ತಿಳಿಸಿದ್ದಾರೆ.
"2ನೇ ಅಲೆಯ ಕೊರೊನಾವೈರಸ್ ಹರಡುವಿಕೆ ಹೆಚ್ಚು"
ಮಹಾರಾಷ್ಟ್ರದಲ್ಲಿ ಆತಂಕ ಸೃಷ್ಟಿಸಿರುವ ಕೊರೊನಾವೈರಸ್ 2ನೇ ಅಲೆಯ ಬಗ್ಗೆ ಡಾ. ಪ್ರದೀಪ್ ಅವಟೆ ಎಚ್ಚರಿಕೆ ನೀಡಿದ್ದಾರೆ. "ಕೊವಿಡ್-19 ಸೋಂಕಿನ 2ನೇ ಅಲೆಯು ಸೌಮ್ಯವಾಗಿದೆ. ಆದರೆ ಈ ಸೋಂಕಿನ ಹರಡುವಿಕೆಯ ವೇಗ ಮೊದಲಿಗಿಂತಲೂ ಹೆಚ್ಚಾಗಿದೆ" ಎಂದು ತಿಳಿಸಿದ್ದಾರೆ. ಮಾರ್ಚ್ 15 ರಿಂದ 21ರವರೆಗೂ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ.0.07ಕ್ಕೆ ಇಳಿಕೆಯಾಗಿದೆ. ಕಳೆದ ಫೆಬ್ರವರಿ 15 ರಿಂದ 21ರವರೆಗೂ ಸಾವಿನ ಪ್ರಮಾಣ ಶೇ.0.32ರಷ್ಟಿತ್ತು.
ಮುಂಬೈನಲ್ಲೇ ಹೆಚ್ಚಾದ ಕೊರೊನಾವೈರಸ್ ಅಪಾಯ
ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಮುಂಬೈನಲ್ಲೇ ಹೆಚ್ಚಾಗಿ ವರದಿಯಾಗುತ್ತಿವೆ. ಶುಕ್ರವಾರ ಒಂದೇ ದಿನ 3062 ಮಂದಿಗೆ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,55,897ಕ್ಕೆ ಏರಿಕೆಯಾಗಿದೆ. ಗುರುವಾರ ಕೂಡಾ 2877 ಹೊಸ ಸೋಂಕಿ ಪ್ರಕರಣಗಳು ವರದಿಯಾಗಿದ್ದವು. 2021ರಲ್ಲಿ ಮೂರು ದಿನ ಅತಿಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿದ್ದವು. ಜನವರಿ 5ರಂದು 10, ಜನವರಿ 21ರಂದು 11 ಮಂದಿ ಮಹಾಮಾರಿಗೆ ಬಲಿಯಾಗಿದ್ದರು.
ಮಹಾರಾಷ್ಟ್ರದಲ್ಲಿ 6 ದಿನದಲ್ಲಿ 36 ಸಾವಿರ ಮಂದಿಗೆ ಸೋಂಕು
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ 2ನೇ ಅಲೆ ವೇಗವಾಗಿ ಹರಡುತ್ತಿದ್ದು, ಕಳೆದ ಫೆಬ್ರವರಿ 15 ರಿಂದ 21ರ ನಡುವೆ 36606 ಮಂದಿಗೆ ಸೋಂಕು ತಗುಲಿರುವುದು ವೈದ್ಯಕೀಯ ತಪಾಸಣೆಯಲ್ಲಿ ದೃಢಪಟ್ಟಿದೆ. ಈ ಆರು ದಿನಗಳಲ್ಲಿ 259 ಮಂದಿ ಪ್ರಾಣ ಬಿಟ್ಟಿದ್ದರು. ಅದೇ ಮಾರ್ಚ್ 15 ರಿಂದ 20ರ ಅವಧಿಯಲ್ಲಿ 1.34 ಲಕ್ಷ ಹೊಸ ಕೊವಿಡ್-19 ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದು, 439 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
24 ಗಂಟೆಗಳಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣ
ಮಹಾರಾಷ್ಟ್ರದಲ್ಲಿ ಶನಿವಾರ ಒಂದೇ ದಿನ 27126 ಮಂದಿಗೆ ಕೊರೊನಾವೈರಸ್ ಸೋಂಕು ತಗುಲಿದ್ದು, ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 24,49,147ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಗಳಲ್ಲಿ 92 ಮಂದಿ ಮಹಾಮಾರಿಗೆ ಬಲಿಯಾಗಿದ್ದು, ಸಾವಿನ ಸಂಖ್ಯೆ 53300ಕ್ಕೆ ಏರಿಕೆಯಾಗಿದೆ. 13588 ಸೋಂಕಿತರು ಗುಣಮುಖರಾಗಿದ್ದು, ಈವರೆಗೂ 22,03,553 ಮಂದಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ 1,91,006 ಸಕ್ರಿಯ ಪ್ರಕರಣಗಳಿರುವ ಬಗ್ಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.