ಶಿವಸೇನಾ ನೇತೃತ್ವಕ್ಕೆ ಸರ್ಕಾರಕ್ಕೆ ಬಾಹ್ಯ ಬೆಂಬಲ ಘೋಷಿಸಿದ ಕಾಂಗ್ರೆಸ್
ಮುಂಬೈ, ನವೆಂಬರ್ 11: ಇದೇ ಮೊದಲ ಬಾರಿಗೆ ಸೈದ್ಧಾಂತಿಕ ಕಡು ವಿರೋಧಿಗಳ ಸರ್ಕಾರ ರಚನೆಗೆ ಮಹಾರಾಷ್ಟ್ರ ಸಾಕ್ಷಿಯಾಗುವ ಸಾಧ್ಯತೆ ಇದೆ. ಸುದೀರ್ಘ ರಾಜಕೀಯ ಕಸರತ್ತಿನ ಬಳಿಕ ಶಿವಸೇನಾ ನೇತೃತ್ವದಲ್ಲಿ ಸರ್ಕಾರ ರಚನೆಯಾಗುವ ಸಂಭವ ಹೆಚ್ಚಿದ್ದು, ಶಿವಸೇನಾ-ಎನ್ಸಿಪಿ ಮೈತ್ರಿ ಸರ್ಕಾರಕ್ಕೆ ಬೆಂಬಲ ನೀಡಲು ಕಾಂಗ್ರೆಸ್ ಮುಂದಾಗಿದೆ.
ಮಹಾರಾಷ್ಟ್ರ ಕಾಂಗ್ರೆಸ್ನ ಮಾಜಿ ಮುಖ್ಯಮಂತ್ರಿಗಳು ಮತ್ತು ಹಿರಿಯ ಮುಖಂಡರ ಜತೆ ಸಭೆ ನಡೆಸಿದ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಶಿವಸೇನಾ-ಎನ್ಸಿಪಿ ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಲು ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಇದರಿಂದ ಫಲಿತಾಂಶ ಹೊರಬಂದು ಸುಮಾರು 20 ದಿನಗಳ ಬಳಿಕ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಯಾಗುವುದು ನಿಶ್ಚಿತವಾಗಿದೆ.
ಸೋನಿಯಾ ಗಾಂದಿ ಜತೆ ಉದ್ಧವ್ ಠಾಕ್ರೆ ಮಾತುಕತೆ
ಕಾಂಗ್ರೆಸ್ ನಾಯಕರಾದ ಅಹ್ಮದ್ ಪಟೇಲ್, ಮುಕುಲ್ ವಾಸ್ನಿಕ್, ಅವಿನಾಶ್ ಪಾಂಡೆ, ಪೃಥ್ವಿರಾಜ್ ಚವಾಣ್, ಅಶೋಕ್ ಚವಾಣ್, ಬಾಳಾಸಾಹೇಬ್ ಥೋರಟ್ ಅವರೊಂದಿಗೆ ಸೋನಿಯಾ ಗಾಂಧಿ ಅವರು ಸೋಮವಾರ ಸುದೀರ್ಘ ಮಾತುಕತೆ ನಡೆಸಿದರು. ಈ ನಡುವೆ ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಸೋನಿಯಾ ಗಾಂಧಿ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದರು.
ಶಾಸಕರ ಅಭಿಪ್ರಾಯ ಸಂಗ್ರಹ
ಜೈಪುರದ ಹೋಟೆಲ್ಒಂದರಲ್ಲಿ ಸೇರಿರುವ ಮಹಾರಾಷ್ಟ್ರ ಕಾಂಗ್ರೆಸ್ನ ಕೆಲವು ಶಾಸಕರೊಂದಿಗೆ ಸೋನಿಯಾ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರು ವಿಡಿಯೋ ಕರೆ ಮೂಲಕ ಮಾತುಕತೆ ನಡೆಸಿ ಅವರ ಅಭಿಪ್ರಾಯ ಸಂಗ್ರಹಿಸಿದರು. ಕೆಲವು ಶಾಸಕರು ಸರ್ಕಾರದ ಭಾಗವಾಗಿ ಇರಬೇಕೆಂದು ಅಭಿಪ್ರಾಯ ಮಂಡಿಸಿದರೆ, ಇನ್ನು ಕೆಲವು ಶಾಸಕರು ಬಾಹ್ಯ ಬೆಂಬಲ ನೀಡುವುದು ಒಳಿತು ಎಂದು ಹೇಳಿದರು.
ಶಿವಸೇನಾಗೆ ಕಾಂಗ್ರೆಸ್ ಷರತ್ತು
ಸಭೆಯ ಬಳಿಕ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಮಾತನಾಡಿದ ಸೋನಿಯಾ ಗಾಂಧಿ, ಬಾಹ್ಯ ಬೆಂಬಲ ನೀಡಲು ಸಿದ್ಧ ಇರುವುದಾಗಿ ತಿಳಿಸಿದರು. ಸಾಮಾನ್ಯ ಕನಿಷ್ಠ ಕಾರ್ಯಕ್ರಮಕ್ಕೆ ಮತ್ತು ಸ್ಪೀಕರ್ ಸ್ಥಾನ ತಮಗೆ ನೀಡುವಂತೆ ಶಿವಸೇನಾ-ಎನ್ಸಿಪಿ ಮೈತ್ರಿಕೂಟಕ್ಕೆ ಕಾಂಗ್ರೆಸ್ ಷರತ್ತು ಹಾಕಿದೆ ಎನ್ನಲಾಗಿದೆ.
ಶಿವಸೇನೆಯ ಏಕೈಕ ಕೇಂದ್ರ ಸಚಿವರ ರಾಜೀನಾಮೆ, ಗರಿಗೆದರಿತು 'ಮಹಾ' ರಾಜಕೀಯ
ಹಕ್ಕು ಮಂಡಿಸಲಿರುವ ಸೇನಾ
ಶಿವಸೇನಾ, ತಮಗೆ ಸರ್ಕಾರ ರಚನೆಗೆ ಬೆಂಬಲ ನೀಡುತ್ತಿರುವ ಎನ್ಸಿಪಿ, ಕಾಂಗ್ರೆಸ್ ಮತ್ತು ಪಕ್ಷೇತರ ಶಾಸಕರ ಪಟ್ಟಿಯನ್ನು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರಿಗೆ ಸಲ್ಲಿಸಿತು. ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿರುವ ಶಿವಸೇನಾ ಮುಖಂಡ ಆದಿತ್ಯ ಠಾಕ್ರೆ ಅವರು, ಎನ್ಸಿಪಿ ಮತ್ತು ಕಾಂಗ್ರೆಸ್ನ ಶಾಸಕರ ಬೆಂಬಲ ಹೊಂದಿರುವ ಪತ್ರವನ್ನು ರಾಜ್ಯಪಾಲರಿಗೆ ನೀಡಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲಿದ್ದಾರೆ.
ಬಿಜೆಪಿ ಕೋರ್ ಕಮಿಟಿ ಸಭೆ
ಎನ್ಸಿಪಿ-ಶಿವಸೇನಾ ಸರ್ಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡುವುದಾಗಿ ಮಾಹಿತಿ ನೀಡಿದ ಕೂಡಲೇ, ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಶಿವಸೇನಾದ ಮಾಜಿ ಮಿತ್ರಪಕ್ಷ ಬಿಜೆಪಿ ನಾಯಕರು ತುರ್ತು ಸಭೆ ನಡೆಸಿದ್ದಾರೆ. ಮುಂಬೈನಲ್ಲಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ನಿವಾಸ 'ವರ್ಷಾ'ಕ್ಕೆ ಬಿಜೆಪಿ ನಾಯಕರಾದ ಚಂದ್ರಕಾಂತ್ ಪಾಟೀಲ್, ಸುಧೀರ್ ಮುಂಗಂಟಿವರ್, ಆಶೀಶ್ ಶೆಲಾರ್ ಮತ್ತು ಇತರರು ಧಾವಿಸಿದ್ದಾರೆ. ಬಿಜೆಪಿಯ ಕೋರ್ ಕಮಿಟಿ ಸಭೆ ಶೀಘ್ರದಲ್ಲಿಯೇ ನಡೆಯಲಿದೆ.