ಯುದ್ಧಮುನ್ನ ಬಿಜೆಪಿ ಶಸ್ತ್ರತ್ಯಾಗ: 'ಮಹಾ' ಆಸೆಂಬ್ಲಿಗೆ ಕೈ ಶಾಸಕರೇ ಸ್ಪೀಕರ್!
ಮುಂಬೈ, ಡಿಸೆಂಬರ್.01: ಕೆಟ್ಟಮೇಲೆ ಬುದ್ಧಿ ಬಂತು ಅಂತಾರಲ್ವಾ. ಮಹಾರಾಷ್ಟ್ರದಲ್ಲಿ ಬಿಜೆಪಿ ನಾಯಕರಿಗೆ ಈ ಮಾತು ಹೇಳಿ ಮಾಡಿಸಿದಂತಿದೆ. ಸರ್ಕಾರ ರಚನೆ ವಿಚಾರದಲ್ಲಿ ಆತುರಕ್ಕೆ ಬಿದ್ದು ಕೈ ಸುಟ್ಟುಕೊಂಡ ಕೇಸರಿ ಟೀಮ್ ಈಗ ಯುದ್ಧಕ್ಕೂ ಮೊದಲೇ ಶಸ್ತ್ರತ್ಯಾಗ ಮಾಡಿದೆ.
ಮಹತ್ವದ ಬೆಳವಣಿಗೆಯಲ್ಲಿ ವಿಧಾನಸಭಾ ಸ್ಪೀಕರ್ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳೇ ಜಯಭೇರಿ ಬಾರಿಸಿವೆ. ಮೊದಲು ಚುನಾವಣೆ ನಡೆಸಲು ಮುಂದಾಗಿದ್ದ ಭಾರತೀಯ ಜನತಾ ಪಕ್ಷದ ನಾಯಕರು ಕೊನೆಕ್ಷಣದಲ್ಲಿ ತಮ್ಮ ನಿಲುವನ್ನು ಬದಲಾಯಿಸಿದ್ದಾರೆ.
ತ್ರಿಮೈತ್ರಿ ಸರ್ಕಾರ ಬೆಂಬಲಕ್ಕೆ ನಿಂತ 169 ಶಾಸಕರು, ಸರ್ಕಾರ ಭದ್ರ
ವಿಧಾನಸಭಾ ಹಂಗಾಮಿ ಸ್ಪೀಕರ್ ದಿಲೀಪ್ ವಾಲ್ಸೆ ಪಾಟೀಲ್ ನೇತೃತ್ವದಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಸರ್ಕಾರ ವಿಶ್ವಾಸಮತಯಾಚನೆಯ ಅಗ್ನಿ ಪರೀಕ್ಷೆಯಲ್ಲಿ ಪಾಸ್ ಆಗಿದೆ. ಶಿವಸೇನೆ-ಕಾಂಗ್ರೆಸ್-ಎನ್ ಸಿಪಿಯ 169 ಶಾಸಕರು ಮೈತ್ರಿ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದಾರೆ. ಇದರ ಬೆನ್ನಲ್ಲೇ ಸ್ಪೀಕರ್ ಚುನಾವಣೆ ನಡೆಸುವ ನಿರ್ಧಾರದಿಂದ ಬಿಜೆಪಿ ಹಿಂದೆ ಸರಿದಿದೆ.
ಸ್ಪೀಕರ್ ಆಗಿ ಆಯ್ಕೆಯಾದ ನಾನಾ ಪಾತೋಲೆ
ಮಹಾರಾಷ್ಟ್ರದ ನೂತನ ಸ್ಪೀಕರ್ ಆಗಿ ಕಾಂಗ್ರೆಸ್ ಶಾಸಕ ನಾನಾ ಪಾತೋಲೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಹಂಗಾಮಿ ಸ್ಪೀಕರ್ ದಿಲೀಪ್ ವಾಲ್ಸೆ ಪಾಟೀಲ್ ನೇತೃತ್ವದ ವಿಶೇಷ ಅಧಿವೇಶನದಲ್ಲಿ ಚುನಾವಣೆ ನಡೆಸಲಾಯಿತು. ಇದಕ್ಕೂ ಮೊದಲು ನಡೆದ ಸಭೆಯಲ್ಲಿ ಬಿಜೆಪಿ ತಮ್ಮ ಸ್ಪೀಕರ್ ಅಭ್ಯರ್ಥಿಯ ನಾಮಪತ್ರವನ್ನೇ ವಾಪಸ್ ಪಡೆದುಕೊಂಡಿದು. ಇದರಿಂದ ಕಾಂಗ್ರೆಸ್ ಶಾಸಕ ನಾನಾ ಪಾತೋಲೆ ಮಹಾರಾಷ್ಟ್ರ ವಿಧಾನಸಭೆಯ ನೂತನ ಸ್ಪೀಕರ್ ಆಗಿ ಅವಿರೋಧವಾಗಿ ಆಯ್ಕೆಯಾದರು.
ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಘೋಷಣೆ
ವಿಧಾನಸಭೆ ವಿಶೇಷ ಅಧಿವೇಶನಕ್ಕೂ ಮೊದಲು ಬಿಜೆಪಿ ಶಾಸಕರೆಲ್ಲ ಸಭೆ ನಡೆಸಿದರು. ಈ ವೇಳೆ ಸ್ಪೀಕರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕಿಸಾನ್ ಕಾಥೋರ್ ನಾಮಪತ್ರವನ್ನು ಹಿಂಪಡೆಯಲು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್ ಪಾಟೀಲ್ ಘೋಷಣೆ ಮಾಡಿದರು. ಸ್ಪೀಕರ್ ಸ್ಥಾನಕ್ಕೆ ಅಭ್ಯರ್ಥಿಗಳನ್ನು ಮೊದಲಿನಿಂದಲೂ ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಈ ಸಂಪ್ರದಾಯವನ್ನು ಗೌರವಿಸುವ ಹಾಗೂ ಮುಂದುವರಿಸುವ ದೃಷ್ಟಿಯಿಂದ ಬಿಜೆಪಿ ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಚಂದ್ರಕಾಂತ್ ಪಾಟೀಲ್ ತಿಳಿಸಿದ್ದಾರೆ.
ಎನ್ಸಿಪಿ ಮುಖಂಡ ದಿಲೀಪ್ ''ಮಹಾ'' ಹಂಗಾಮಿ ಸ್ಪೀಕರ್
ಸ್ಪೀಕರ್ ಆಗಿ ನಾನಾ ಪಾತೋಲೆ ಅಧಿಕಾರ ಸ್ಪೀಕಾರ
ವಿಧಾನಸಭಾ ಸ್ಪೀಕರ್ ಆಗಿ ನಾನಾ ಪಾತೋಲೆ ಅವಿರೋಧವಾಗಿ ಆಯ್ಕೆಯಾಗುತ್ತಿದ್ದಂತೆ ಅಧಿಕಾರ ಸ್ವೀಕರಿಸಿದರು. ನೂತನ ಸ್ಪೀಕರ್ ಗೆ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಹಾಗೂ ವಿಧಾನಸಭಾ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಶುಭಾಷಯ ಕೋರಿದರು.
ವಿಧಾನಸಭೆ ಸಾರಥಿಯ ಹಿನ್ನೆಲೆ ಏನು ಗೊತ್ತಾ?
ಮಹಾರಾಷ್ಟ್ರ ವಿಧಾನಸಭೆ ಸ್ಪೀಕರ್ ಆಗಿ ಆಯ್ಕೆಯಾಗಿರುವ ನಾನಾ ಪಾತೋಲೆ ಅಮರಾವತಿ ಜಿಲ್ಲೆ ಸಿಕಾಲಿ ವಿಧಾನಸಕ್ಷಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ. 2014ರಲ್ಲಿ ಎನ್ ಸಿಪಿ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದ ನಾನಾ ಪಾತೋಲೆ, ಬಂದಾರಾ-ಗೊಂಡಿಯಾ ಲೋಕಸಭಾ ಕ್ಷೇತ್ರದಲ್ಲಿ ಎನ್ ಸಿಪಿ ಮುಖಂಡ ಪ್ರಫುಲ್ ಪಟೇಲ್ ವಿರುದ್ಧ ಸ್ಪರ್ಧಿಸಿದ್ದರು. ತದನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರದ ಮೊದಲ ಅವಧಿ ಆಡಳಿತವನ್ನು ವಿರೋಧಿಸಿ, ಬಿಜೆಪಿ ತೊರೆದಿದ್ದ ನಾನಾ ಪಟೋಲೆ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದರು. ಕಳೆದ ಬಾರಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ನಾಗಪುರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನ್ನಪ್ಪಿದ್ದರು.