ಮಹಾರಾಷ್ಟ್ರದ ಆರ್ ಎಸ್ ಎಸ್ ಗರ್ಭಗುಡಿಯಲ್ಲೇ ಮುಗ್ಗರಿಸಿದ ಬಿಜೆಪಿ
ಮುಂಬೈ, ಜನವರಿ.08: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣಕ್ಕೆ ಮುಂದಾದ ಭಾರತೀಯ ಜನತಾ ಪಕ್ಷಕ್ಕೆ ಮೇಲಿಂದ ಮೇಲೆ ಪೆಟ್ಟು ಬೀಳುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಇತ್ತೀಚಿಗೆ ನಡೆದ ಎಲ್ಲ ಚುನಾವಣೆಗಳಲ್ಲೂ ತೀವ್ರ ಮುಖಭಂಗ ಅನುಭವಿಸುತ್ತಿದೆ.
ಮಹಾರಾಷ್ಟ್ರದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅತಿಹೆಚ್ಚು ಸ್ಥಾನ ಗಳಿಸಿದರೂ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಸೋತಿತು. ಇದರ ಬೆನ್ನಲ್ಲೇ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ಭಾರತೀಯ ಜನತಾ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
ಸರ್ಕಾರವಾಯ್ತು, ಮೊದಲು ನಮ್ಮ ಜೇಬು ತುಂಬಿಸಿಕೊಳ್ಳಬೇಕು ಎಂದ ಸಚಿವರು!
ಮಹಾರಾಷ್ಟ್ರ ಎಂದರೆ ಆರ್ ಎಸ್ ಎಸ್, ಆರ್ ಎಸ್ ಎಸ್ ಎಂದರೆ ಮಹಾರಾಷ್ಟ್ರ ಎನ್ನುವ ಹಾಗಿತ್ತು. ಅಂಥ ಮಹಾರಾಷ್ಟ್ರದಲ್ಲೇ ಬಿಜೆಪಿ ಹಿನ್ನಡೆ ಅನುಭವಿಸಿದೆ. ಜಿಲ್ಲಾ ಪರಿಷತ್ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿಯನ್ನೇ ಹಿಂದಿಕ್ಕಿದೆ.
ಆರ್ ಎಸ್ ಎಸ್ ಗರ್ಭಗುಡಿಯಲ್ಲೇ ಬಿಜೆಪಿಗಿಲ್ಲ ಸ್ಥಾನ:
ಕೇಂದ್ರ ಸಚಿವ ನಿತಿನ್ ಗಡ್ಕರಿ ತವರು ಜಿಲ್ಲೆ ನಾಗ್ಪುರದಲ್ಲೇ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಮುಖಭಂಗ ಅನುಭವಿಸಿದೆ. 58 ಸ್ಥಾನಗಳ ಪೈಕಿ ಕಾಂಗ್ರೆಸ್ ಅತಿಹೆಚ್ಚು ಎಂದರೆ 31 ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಬಿಜೆಪಿ 15 ಸ್ಥಾನಗಳಲ್ಲಿ ಗೆಲುವು ದಾಖಲಿಸಿದರೆ, ಎನ್ ಸಿಪಿ 10, ಶಿವಸೇನೆ 1, ಹಾಗೂ ಇತರೆ 1 ಸ್ಥಾನಗಳಲ್ಲಿ ಜಯ ಸಾಧಿಸಿವೆ. ಆರ್ ಎಸ್ ಎಸ್ ಮೂಲಸ್ಥಾನವಾಗಿರುವ ನಾಗ್ಪುರದಲ್ಲೇ ಬಿಜೆಪಿ ಈ ಬಾರಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದೆ.