ದೇಶ ಭ್ರಷ್ಟ ಆರ್ಥಿಕ ಆಪರಾಧ ಕಾಯ್ದೆ ಭೀಕರ ಎಂದು ಮಲ್ಯ ಬೊಂಬಡಾ
ಮುಂಬೈ, ಏಪ್ರಿಲ್ 1: ಹೊಸದಾಗಿ ಜಾರಿಗೆ ತಂದಿರುವ ದೇಶಭ್ರಷ್ಟ ಆರ್ಥಿಕ ಅಪರಾಧ ಕಾಯ್ದೆ ಅಡಿ ತಮ್ಮ ಆಸ್ತಿಯನ್ನೆಲ್ಲ ವಶಕ್ಕೆ ಪಡೆದಿರುವುದು ಬಹಳ ಕಠಿಣವಾಗಿದೆ. ಇದರಿಂದ ಸಾಲ ನೀಡಿದವರಿಗೆ ಯಾವ ಅನುಕೂಲ ಕೂಡ ಆಗುವುದಿಲ್ಲ ಎಂದು ಭಾರತದಿಂದ ಪಲಾಯನ ಮಾಡಿರುವ ಉದ್ಯಮಿ ವಿಜಯ್ ಮಲ್ಯ ಸೋಮವಾರ ಬಾಂಬೆ ಹೈ ಕೋರ್ಟ್ ಗೆ ಹೇಳಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಕಳೆದ ಜನವರಿ ಐದನೇ ತಾರೀಕಿನಂದು ಬಾಂಬೆ ಹೈ ಕೋರ್ಟ್ ನಿಂದ ವಿಜಯ್ ಮಲ್ಯ ಅವರನ್ನು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಕೋರ್ಟ್ ನಿಂದ ದೇಶ ಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಣೆ ಮಾಡಿತ್ತು. ಇದನ್ನು ಬಾಂಬೆ ಹೈ ಕೋರ್ಟ್ ನಲ್ಲಿ ಮಲ್ಯ ಪ್ರಶ್ನೆ ಮಾಡಿದ್ದರು.
ಯಾರು ಕುಬೇರರು, ಯಾರು ಕುಚೇಲರು? ಆಸ್ತಿಪಾಸ್ತಿ ವಿವರ ಬೇಕೆ?
ಒಮ್ಮೆ ಈ ಕಾಯ್ದೆ ಅಡಿಯಲ್ಲಿ ದೇಶಭ್ರಷ್ಟ ಎಂದು ಘೋಷಿಸಿದರೆ ಆತನ ಆಸ್ತಿಯನ್ನೆಲ್ಲ ತನಿಖಾ ಸಂಸ್ಥೆ- ಜಾರಿ ನಿರ್ದೇಶನಾಲಯವು ವಶಕ್ಕೆ ಪಡೆಯಬಹುದು. ಜಾರಿ ನಿರ್ದೇಶನಾಲಯವು ಆಸ್ತಿ ವಶಕ್ಕೆ ಪಡೆಯುವುದರಿಂದ ಸಾಲಗಾರರಿಗೆ ಯಾವುದೇ ಪ್ರಯೋಜನ ಇಲ್ಲ ಎಂದು ಮಲ್ಯ್ ಪರ ವಕೀಲ ಅಮಿತ್ ದೇಸಾಯಿ ಅವರು ಐಎ ಮಹಂತಿ, ಎಎಂ ಬದರ್ ಒಳಗೊಂಡ ಪೀಠಕ್ಕೆ ಹೇಳಿದ್ದಾರೆ.
ಆಸ್ತಿಯನ್ನು ವಶಕ್ಕೆ ಪಡೆಯುವುದು ಸರಿಯಲ್ಲ. ಈಗಿನ ಅಗತ್ಯ ಏನೆಂದರೆ, ಬ್ಯಾಂಕ್ ಗಳು ಹಾಗೂ ಸಾಲಗಾರರ ಜತೆ ಸರಿಯಾಗಿ ವ್ಯವಹರಿಸುವುದು. ಮಲ್ಯ ಅವರಿಗೆ ತಮ್ಮ ಆಸ್ತಿ ವಾಪಸ್ ಬೇಕು ಅಂತಲ್ಲ. ಸರಕಾರವು ಆಸ್ತಿ ವಶಕ್ಕೆ ಪಡೆದರೆ ಬ್ಯಾಂಕ್ ಗಳು, ಸಾಲಗಾರರ ಸಮಸ್ಯೆ ನಿವಾರಣೆ ಆಗಲ್ಲ ಎಂದಿದ್ದಾರೆ ದೇಸಾಯಿ.
ವಿಜಯ್ ಮಲ್ಯಗೆ ಸೇರಿದ ಷೇರು ಮಾರಾಟದಿಂದ 1008 ಕೋಟಿ ವಸೂಲಿ
ಆದರೆ, ಮಲ್ಯ ವಾದವನ್ನು ಇಡಿ ವಿರೋಧಿಸಿದೆ. ಕಾಯ್ದೆಯ ಗುರಿ ಏನೆಂದರೆ, ಭಾರತದಲ್ಲಿ ಬಂಧನ ಆಗುವುದನ್ನು ತಪ್ಪಿಸಬೇಕು ಅಂತಿರುವ ವ್ಯಕ್ತಿಯನ್ನು ವಾಪಸ್ ಬರುವಂತೆ ಮಾಡುವುದು ಎಂದಿದ್ದಾರೆ. ಯಾರು ಭಾರತದಲ್ಲಿ ವಂಚನೆ ಮಾಡಿ, ದೇಶ ಬಿಟ್ಟು ಹೋಗುತ್ತಾರೋ ಅವರನ್ನು ವಾಪಸ್ ದೇಶಕ್ಕೆ ಕರೆತರುವುದು ಕಾಯ್ದೆ ಉದ್ದೇಶ. ಒಂದು ಸಲ ಮಲ್ಯ ಭಾರತಕ್ಕೆ ಹಿಂತಿರುಗಿದರೆ ಈ ಕಾಯ್ದೆ ಅವರಿಗೆ ಅನ್ವಯ ಆಗಲ್ಲ ಎಂದು ಹೇಳಿದ್ದಾರೆ.
ಮುಂದಿನ ವಿಚಾರಣೆಯನ್ನು ಪೀಠವು ಏಪ್ರಿಲ್ ಇಪ್ಪತ್ನಾಲ್ಕರಂದು ನಡೆಸಲಿದೆ. ಮಲ್ಯ ಆಸ್ತಿ ವಶಕ್ಕೆ ಸಂಬಂಧಿಸಿದಂತೆ ಇಡಿ (ಜಾರಿ ನಿರ್ದೇಶನಾಲಯ) ಅನುಮತಿ ಕೋರಿರುವ ಅರ್ಜಿಯು ವಿಶೇಷ ಕೋರ್ಟ್ ಮುಂದೆ ಇದೆ. ಏಪ್ರಿಲ್ ಎಂಟರಂದು ಕಲಾಪ ಆರಂಭ ಆಗಲಿದೆ.