ಕಲ್ಲಿದ್ದಲು ಬಿಕ್ಕಟ್ಟು: ಮಹಾರಾಷ್ಟ್ರದಲ್ಲಿ 4,000 ಮೆಗಾ ವ್ಯಾಟ್ ವಿದ್ಯುತ್ ಕೊರತೆ
ಮುಂಬೈ, ಅಕ್ಟೋಬರ್ 13: ಮಹಾರಾಷ್ಟ್ರದಲ್ಲಿ 3,500 ರಿಂದ 4,000 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯ ಕೊರತೆ ಎದುರಾಗಿದೆ ಎಂದು ಇಂಧನ ಸಚಿವ ನಿತಿನ್ ರಾವತ್ ಹೇಳಿದ್ದಾರೆ. ರಾಜ್ಯದ ಇಂದಿನ ಪರಿಸ್ಥಿತಿಗೆ ಕೇಂದ್ರದ ವಿದ್ಯುತ್ ಸ್ಥಾವರ ಘಟಕ ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್)ನ "ದುರಾಡಳಿತ ಮತ್ತು ಯೋಜನೆಯ ಕೊರತೆ"ಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ.
ಮಹಾರತ್ನ ಪಿಎಸ್ಯು ಮತ್ತು ಕಚ್ಚಾ ಇಂಧನದ ಅತಿದೊಡ್ಡ ಉತ್ಪಾದಕ ಸಂಸ್ಥೆಯು ರಾಜ್ಯದ ಉಷ್ಣ ವಿದ್ಯುತ್ ಉತ್ಪಾದನಾ ಘಟಕಗಳಿಗೆ ಸಕಾಲಕ್ಕೆ ಕಲ್ಲಿದ್ದಲು ಪೂರೈಕೆ ಮಾಡುವಲ್ಲಿ ವಿಫಲವಾಗಿದೆ ಎಂದಿದ್ದಾರೆ.
ವಿದ್ಯುತ್ ವ್ಯತ್ಯಯ: ಕರ್ನಾಟಕದಲ್ಲೂ ಕಗ್ಗತ್ತಲು ಮೂಡಿಸುತ್ತಾ ಕಲ್ಲಿದ್ದಲು!?
"ಮಹಾರಾಷ್ಟ್ರವು 3,500 ರಿಂದ 4,000 ಮೆಗಾವ್ಯಾಟ್ ವಿದ್ಯುತ್ ಪೂರೈಕೆಯ ಕೊರತೆಯನ್ನು ಎದುರಿಸುತ್ತಿದೆ. ಇದು ಕೋಲ್ ಇಂಡಿಯಾದ ಅಸಂಘಟಿತ ಕಾರ್ಯಚಟುವಟಿಕೆ ಮತ್ತು ಯೋಜನೆಯ ಕೊರತೆಯಿಂದಾಗಿ ಮಹಾರಾಷ್ಟ್ರದಲ್ಲಿ ಕಲ್ಲಿದ್ದಲಿನ ಕೊರತೆ ಎದುರಾಗಿದೆ" ಎಂದು ಸಚಿವ ನಿತಿನ್ ರಾವತ್ ಹೇಳಿದ್ದಾರೆ.
ವಿದ್ಯುತ್ ಸರಬರಾಜು ಸ್ಥಗಿತಗೊಳಿಸಿದ ಜೆಎಸ್ ಡಬ್ಲ್ಯು
ಕರಾವಳಿ ಗುಜರಾತ್ ಪವರ್ ಲಿಮಿಟೆಡ್ ಮತ್ತು ಜೆಎಸ್ಡಬ್ಲ್ಯೂ ಕಂಪನಿಗಳು ಒಪ್ಪಂದವನ್ನು ಮಾಡಿಕೊಂಡಿದ್ದರೂ ಮಹಾರಾಷ್ಟ್ರಕ್ಕೆ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ ಎಂದು ಸಚಿವ ನಿತಿನ್ ರಾವತ್ ಆರೋಪಿಸಿದ್ದಾರೆ. "ಕರಾವಳಿ ಗುಜರಾತ್ ಪವರ್ ಲಿಮಿಟೆಡ್ 760 ಮೆಗಾವ್ಯಾಟ್ ಮತ್ತು ಜೆಎಸ್ಡಬ್ಲ್ಯೂ 240 ಮೆಗಾವ್ಯಾಟ್ ವಿದ್ಯುತ್ ಸರಬರಾಜು ಮಾಡಲು ರಾಜ್ಯ ವಿದ್ಯುತ್ ಉಪಯುಕ್ತತೆಗಳೊಂದಿಗೆ ಒಪ್ಪಂದ ಮಾಡಿಕೊಂಡಿವೆ," ಎಂದು ಹೇಳಿದ್ದಾರೆ.
2 ಕಂಪನಿಗಳಿಂದ 1000 ಮೆಗಾವ್ಯಾಟ್ ವಿದ್ಯುತ್ ಕೊರತೆ
"ಕರಾವಳಿ ಗುಜರಾತ್ ಪವರ್ ಲಿಮಿಟೆಡ್ ಮತ್ತು ಜೆಎಸ್ಡಬ್ಲ್ಯೂ ಕಂಪನಿಗಳು ಒಪ್ಪಂದಕ್ಕೆ ತಕ್ಕಂತೆ ವಿದ್ಯುತ್ ಪೂರೈಸುತ್ತಿಲ್ಲ. ಇದರಿಂದ ಮಹಾರಾಷ್ಟ್ರದಲ್ಲಿ 1,000 ಮೆಗಾವ್ಯಾಟ್ ಕೊರತೆಯನ್ನು ಸೃಷ್ಟಿಸಿದೆ. ನಾವು ಈ ಕಂಪನಿಗಳೊಂದಿಗೆ ದೀರ್ಘಾವಧಿಯ ಒಪ್ಪಂದಗಳನ್ನು ಮಾಡಿಕೊಂಡಿದ್ದೇವೆ. ಈ ಕಂಪನಿಗಳು ಸಾಕಷ್ಟು ದಾಸ್ತಾನು ಹೊಂದಿದ್ದರೂ, ಮಹಾರಾಷ್ಟ್ರಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿಲ್ಲ," ಎಂದು ಸಚಿವರು ದೂಷಿಸಿದ್ದಾರೆ.
4 ದಿನಗಳಲ್ಲೇ 70 ಸ್ಥಾವರಗಳಲ್ಲಿ ಕಲ್ಲಿದ್ದಲು ಖಾಲಿ
ಕೇಂದ್ರ ವಿದ್ಯುತ್ ಪ್ರಾಧಿಕಾರವು (CEA) ಮೇಲ್ವಿಚಾರಣೆ ಬಳಿಕ 135 ವಿದ್ಯುತ್ ಸ್ಥಾವರಗಳಲ್ಲಿ ಕಲ್ಲಿದ್ದಲು ದಾಸ್ತಾನು ದತ್ತಾಂಶಗಳನ್ನು ಸಂಗ್ರಹಿಸಲಾಗಿದೆ. ಆ ಪ್ರಕಾರ, 165 GW ಗಿಂತಲೂ ಹೆಚ್ಚು ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೊಂದಿವೆ. ಕಳೆದ ಅಕ್ಟೋಬರ್ 3ರಂದು 64 ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ತೀವ್ರವಾಗಿದ್ದು, ನಾಲ್ಕು ದಿನಗಳಲ್ಲಿ ಖಾಲಿಯಾಗುವ ಪರಿಸ್ಥಿತಿ ಎದುರಿಸುತ್ತಿದ್ದವು. ಅಕ್ಟೋಬರ್ 10ರ ವೇಳೆಗೆ 70 ವಿದ್ಯುತ್ ಉತ್ಪಾದನಾ ಘಟಕಗಳು ಅದೇ ಪರಿಸ್ಥಿತಿಗೆ ತಲುಪಿವೆ ಎಂದು ಅಂಕಿ-ಅಂಶಗಳಿಂದ ಗೊತ್ತಾಗಿದೆ.
ವಿದ್ಯುತ್ ಉತ್ಪಾದನೆ ಹೆಚ್ಚಿಸುವಂತೆ ಕೋರಿಕೆ
ಕೇಂದ್ರ ಸರ್ಕಾರವು ದುರ್ಗಾ ಪೂಜೆ ವೇಳೆಗೆ ವಿದ್ಯುತ್ ಉತ್ಪಾದನಾ ಘಟಕಗಳಿಗೆ ದಿನಕ್ಕೆ 1.55 ರಿಂದ 1.60 ದಶಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ಪೂರೈಕೆ ಮಾಡಬೇಕು. ಅಕ್ಟೋಬರ್ 20ರ ನಂತರ ಈ ಪ್ರಮಾಣವನ್ನು 1.70 ದಶಲಕ್ಷ ಮೆಟ್ರಿಕ್ ಟನ್ ಗೆ ಹೆಚ್ಚಿಸಬೇಕು ಎಂದು ಕೋಲ್ ಇಂಡಿಯಾ ಲಿಮಿಡೆಟ್ ಕಂಪನಿಗೆ ಕೇಂದ್ರ ಸರ್ಕಾರ ತಿಳಿಸಿದೆ. ವಿದ್ಯುತ್ ಉತ್ಪಾದಿಸುವ ಸ್ಥಾವರಗಳ ಬೇಡಿಕೆಯನ್ನು ಪೂರೈಸಲು ದೇಶದಲ್ಲಿ ಸಾಕಷ್ಟು ಇಂಧನ ಲಭ್ಯವಿರುವುದಾಗಿ ಕಲ್ಲಿದ್ದಲು ಸಚಿವಾಲಯವು ಭಾನುವಾರ ಭರವಸೆ ನೀಡಿದೆ. ವಿದ್ಯುತ್ ಪೂರೈಕೆಯಲ್ಲಿ ಯಾವುದೇ ಅಡ್ಡಿ ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದೆ.
ದೇಶದಲ್ಲಿ ಕಲ್ಲಿದ್ದಲು ಪೂರೈಕೆ ಪ್ರಮಾಣ ಶೀಘ್ರ ಸುಧಾರಣೆ
ಪ್ರಸ್ತುತ ಕೋಲ್ ಇಂಡಿಯಾ ಲಿಮಿಟೆಡ್ 22 ದಿನಗಳ ಕಲ್ಲಿದ್ದಲು ದಾಸ್ತಾನು ಹೊಂದಿದೆ. ಸೋಮವಾರ 1.95 ದಶಲಕ್ಷ ಟನ್ ಕಲ್ಲಿದ್ದಲು ಪೂರೈಕೆಯಾಗಿದ್ದು ಇದು ಇಲ್ಲಿಯವರೆಗಿನ ಹೊಸ ದಾಖಲೆಯಾಗಿದೆ. ನಾವು ಕಲ್ಲಿದ್ದಲು ಪೂರೈಕೆ ವೇಗ ಹೆಚ್ಚಿಸುವುದನ್ನು ಮುಂದುವರಿಸುತ್ತೇವೆ. ಮುಂಗಾರು ಮುಗಿದ ನಂತರ ಕಲ್ಲಿದ್ದಲು ಪೂರೈಕೆಯು ಶೀಘ್ರವಾಗಿ ಸುಧಾರಿಸುತ್ತದೆ," ಎಂದು ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.