ಬಾಂದ್ರಾದ ವಲಸೆ ಕಾರ್ಮಿಕರಿಗೆ ಸಿಎಂ ಉದ್ಧವ್ ಠಾಕ್ರೆ ಅಭಯ
ಮುಂಬೈ, ಏಪ್ರಿಲ್ 14: ಮುಂಬೈನ ಬಾಂದ್ರಾದಲ್ಲಿ ವಲಸೆ ಕಾರ್ಮಿಕರು ಲಾಕ್ಡೌನ್ ಉಲ್ಲಂಘನೆ ಮಾಡಿದ ಘಟನೆ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪ್ರತಿಕ್ರಿಯೆ ನೀಡಿದ್ದಾರೆ.
''ಇಂದು ಬಾಂದ್ರಾದಲ್ಲಿ ನಡೆದಿದ್ದು ದುರಾದೃಷ್ಟಕರ ಸಂಗತಿ. ಏಪ್ರಿಲ್ 14ರ ಬಳಿಕ ರೈಲು ಸಂಚಾರ ಮಾಡುತ್ತೆ ಎಂದು ತಪ್ಪಾಗಿ ಗ್ರಹಿಸಿ, ತಮ್ಮ ಊರುಗಳಿಗೆ ಹೋಗಬಹುದು ಎಂದು ಭಾವಿಸಿದ್ದರಿಂದ ಈ ಘಟನೆ ಸಂಭವಿಸಿದೆ'' ಎಂದು ಮಹಾರಾಷ್ಟ್ರ ಸಿಎಂ ಹೇಳಿದ್ದಾರೆ.
ಬೀದಿಗಿಳಿದ ವಲಸೆ ಕಾರ್ಮಿಕರು; ಠಾಕ್ರೆಗೆ ಅಮಿತ್ ಶಾ ಕರೆ
ರಾಜ್ಯದಲ್ಲಿರುವ ವಲಸೆ ಕಾರ್ಮಿಕರಿಗೆ ಧೈರ್ಯ ತುಂಬಿದ ಸಿಎಂ ''ನಿಮ್ಮ ಇಚ್ಛೆಗೆ ವಿರೋಧವಾಗಿ ನೀವು ಇಲ್ಲೇ ಉಳಿಯಬೇಕು ಎಂದು ಯಾರೂ ಬಯಸಲ್ಲ. ಲಾಕ್ಡೌನ್ ಎನ್ನುವುದು ಲಾಕಪ್ ಅಲ್ಲ. ಇದು ನಮ್ಮ ದೇಶ. ನೀವು ನಮ್ಮ ರಾಜ್ಯದಲ್ಲಿ ಸುರಕ್ಷಿತವಾಗಿದ್ದೀರ, ಯೋಚನೆ ಮಾಡಬೇಡಿ. ಲಾಕ್ಡೌನ್ ತೆರವುಗೊಂಡ ಬಳಿಕ, ನಾನು ಮಾತ್ರವಲ್ಲ, ಕೇಂದ್ರ ಸರ್ಕಾರವೂ ನಿಮಗೆ ವ್ಯವಸ್ಥೆ ಮಾಡಿಕೊಡಲಿದೆ' ಎಂದು ಭರವಸೆ ನೀಡಿದರು.
ಈ ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತಾ ಶಾ, ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ದೂರವಾಣಿ ಕರೆ ನೀಡಿ, ''ಇಂತಹ ಪ್ರಕರಣದಿಂದ ಕೊರೊನಾ ವಿರುದ್ಧದ ದೇಶದ ಹೋರಾಟಕ್ಕೆ ಹಿನ್ನಡೆಯಾಗಲಿದೆ. ಇಂತಹ ಘಟನೆಗಳು ನಡೆಯದಂತೆ ಸ್ಥಳೀಯ ಆಡಳಿತ ಕ್ರಮ ಕೈಗೊಳ್ಳಬೇಕು. ಕೇಂದ್ರ ಸರ್ಕಾರ ಇದಕ್ಕೆ ಸಂಪೂರ್ಣ ಸಹಕಾರ ನೀಡಲಿದೆ" ಎಂದು ಮುಖ್ಯಮಂತ್ರಿಗೆ ಸೂಚಿಸಿದ್ದಾರೆ.
ಮುಂಬೈನಲ್ಲಿ ಹೈಡ್ರಾಮ; ರೈಲು ನಿಲ್ದಾಣದಲ್ಲಿ ಸೇರಿದ ನೂರಾರು ಜನ
ಸಂಜೆ ಸುಮಾರು 3 ಗಂಟೆಯಿಂದ 4 ಗಂಟೆಯ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಲಸೆ ಕಾರ್ಮಿಕರು ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣಕ್ಕೆ ಧಾವಿಸಿದ್ದರು. ಪ್ರಧಾನಿ ಏಪ್ರಿಲ್ 14ರವರೆಗಿನ ಲಾಕ್ಡೌನ್ ಘೋಷಿಸಿದ್ದರು. ಇಂದಿಗೆ ಲಾಕ್ಡೌನ್ ಮುಗಿಯುತ್ತೆ, ತಮ್ಮ ತಮ್ಮ ಊರುಗಳಿಗೆ ಹೋಗೋಣ ಎಂದು ಅಂದುಕೊಂಡಿದ್ದರು. ಆದರೆ, ಲಾಕ್ಡೌನ್ ಮುಂದುವರಿಯುವುದಾಗಿ ಪ್ರಧಾನಿ ಘೋಷಿಸಿದ್ದರಿಂದ ಸಹಜವಾಗಿ ಗೊಂದಲಕ್ಕೆ ಒಳಗಾಗಿದ್ದಾರೆ.
Today what happened in Bandra was unfortunate. It might have happened because they thought that trains will start from 14th April and so they would be able to go back to their villages: Maharashtra Chief Minister Uddhav Thackeray https://t.co/35bJ1n5JQT
— ANI (@ANI) April 14, 2020
ಹೆಚ್ಚು ಸೇರಿದ್ದರಿಂದ ಲಾಕ್ಡೌನ್ ಉಲ್ಲಂಘನೆ ಮತ್ತು ಸೋಂಕಿನ ಭೀತಿಯಲ್ಲಿದ್ದ ಪೊಲೀಸರು ಗುಂಪನ್ನು ಚದುರಿಸಲು ಲಾಠಿಚಾರ್ಜ್ ಮಾಡಿದ್ದಾರೆ.