ಸರ್ಕಾರವೇ ಬದಲಾದರೂ ಆದಿತ್ಯ ಠಾಕ್ರೆ ವಿರುದ್ಧ ಮಾತ್ರ ಏಕೆ ಕ್ರಮ ತೆಗೆದುಕೊಳ್ಳಲ್ಲ ಶಿಂಧೆ ಟೀಮ್!?
ಮುಂಬೈ, ಜುಲೈ 05: ಮಹಾರಾಷ್ಟ್ರ ವಿಧಾನಸಭೆಯಲ್ಲಿ ನಡೆದ ಬಹುಮತ ಪರೀಕ್ಷೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ಗೆಲುವು ಸಾಧಿಸಿದ್ದು ಆಗಿದೆ.
ಸರ್ಕಾರವನ್ನು ಬೆಂಬಲಿಸಲು ನೀಡಿದ ವಿಪ್ ಅನ್ನು ಉಲ್ಲಂಘಿಸಿದ ಉದ್ಧವ್ ಠಾಕ್ರೆ ಬಣದ 16 ಶಾಸಕರನ್ನು ಅಮಾನತುಗೊಳಿಸುವಂತೆ ನೂತನವಾಗಿ ಆಯ್ಕೆಯಾದ ಸ್ಪೀಕರ್ ರಾಹುಲ್ ನಾರ್ವೇಕರ್ ಅವರಿಗೆ ಮನವಿ ಸಲ್ಲಿಸಲಾಗಿದೆ.
ಅಂದು ಮನಸಾರೆ ಕಣ್ಣೀರು, ಇಂದು ಕನಸಿಗೆ ತಣ್ಣೀರು; ಇವರಾ 'ಮಹಾ' ಶಾಸಕರು!?
ಇದರ ಮಧ್ಯೆ ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಮೇಲಿನ ಗೌರವದಿಂದ ಮಾಜಿ ಸಚಿವ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ ಹೆಸರನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿಲ್ಲ ಎಂದು ಬಣದ ನೂತನ ಮುಖ್ಯ ಸಚೇತಕ ಭರತ್ ಗೋಗವಾಲೆ ಹೇಳಿದ್ದಾರೆ.
"ಆದಿತ್ಯ ಠಾಕ್ರೆ ಹೊರತುಪಡಿಸಿ ನಮ್ಮ ವಿಪ್ ಅನ್ನು ಧಿಕ್ಕರಿಸಿದ ಎಲ್ಲ ಶಾಸಕರನ್ನು ಅನರ್ಹಗೊಳಿಸಲು ನಾವು ನೋಟಿಸ್ ನೀಡಿದ್ದೇವೆ. ಬಾಳಾಸಾಹೇಬ್ ಠಾಕ್ರೆ ಮೇಲಿನ ಗೌರವದ ಕಾರಣದಿಂದ ನಾವು ಆದಿತ್ಯ ಠಾಕ್ರೆ ಹೆಸರನ್ನು ನೀಡಿಲ್ಲ" ಎಂದು ಗೋಗಾವಾಲೆ ಹೇಳಿದ್ದಾರೆ.
ಮಹಾ ವಿಕಾಸ ಅಘಾಡಿ ಶಿವಸೇನೆ ಬಲ ಕುಗ್ಗಿಸಿತು
ಬಾಳಾಸಾಹೇಬ್ ಠಾಕ್ರೆ ಸಂಸ್ಥಾಪನೆ ಮಾಡಿದ ಶಿವಸೇನೆ ಪಕ್ಷವು ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವನ್ನು ಮಾಡುತ್ತಿತ್ತು. ಆದರೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿ ಮಾಡಿಕೊಳ್ಳುವ ಮೂಲಕ ಅದನ್ನು ದುರ್ಬಲಗೊಳಿಸಿದ್ದಾರೆ ಎಂದು ಏಕನಾಥ್ ಶಿಂಧೆ ಬಣದ ಶಾಸಕರು ವಾದಿಸಿದ್ದಾರೆ.
ಸೋಮವಾರ ವಿಶ್ವಾಸಮತ ಗೆದ್ದುಕೊಂಡ ಶಿಂಧೆ ಸರ್ಕಾರ
ಸೋಮವಾರ 288 ಸದಸ್ಯ ಬಲದ ವಿಧಾನಸಭೆಯಲ್ಲಿ ಒಬ್ಬ ಶಾಸಕರು ಮೃತಪಟ್ಟ ಹಿನ್ನೆಲೆ ಸದಸ್ಯ ಬಲವನ್ನು 287ಕ್ಕೆ ಇಳಿಸಲಾಗಿದೆ. ಈ ಪೈಕಿ ಬಹುಮತಕ್ಕೆ 144 ಮತಗಳ ಅಗತ್ಯವಿದ್ದು, 164 ಶಾಸಕರು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರ ಮಂಡಿಸಿದ ವಿಶ್ವಾಸಮತ ಯಾಚನೆಗೆ ಮತ ಚಲಾಯಿಸಿದ್ದಾರೆ. 99 ಶಾಸಕರು ವಿಶ್ವಾಸಮತಯಾಚನೆಗೆ ವಿರುದ್ಧವಾಗಿ ಮತ ಚಲಾಯಿಸಿದ್ದು, ಆ ಮೂಲಕ ಒಟ್ಟು 263 ಶಾಸಕರು ಮತ ಚಲಾಯಿಸಿದ್ದಾರೆ. ಮೂವರು ಶಾಸಕರು ಗೈರಾಗಿದ್ದು, ಬಹುತೇಕ ಕಾಂಗ್ರೆಸ್ ಮತ್ತು ಎನ್ಸಿಪಿಯ 20 ಶಾಸಕರು ಮತದಾನದ ವೇಳೆ ಗೈರು ಹಾಜರಾಗಿದ್ದರು.
16 ಶಾಸಕರ ಅನರ್ಹತೆ ಮನವಿ
ಸೋಮವಾರ ಒಂದು ಕಡೆ ವಿಶ್ವಾಸಮತಯಾಚನೆಯಲ್ಲಿ ಸಿಎಂ ಏಕನಾಥ್ ಶಿಂಧೆ ಸರ್ಕಾರವು ಗೆಲುವು ಸಾಧಿಸಿತು. ಅದೇ ದಿನ ಸಂಜೆ ಠಾಕ್ರೆ ಬಣದ 16 ಶಾಸಕರ ಅನರ್ಹತೆಗೆ ಸಂಬಂಧಿಸಿದ ಮನವಿಯನ್ನು ವಿಧಾನಸಭಾಧ್ಯಕ್ಷರಿಗೆ ಬಣದ ಸಚೇತಕ ಗೊಗಾವಾಲೆ ನೀಡಿದರು. ಕಳೆದ ತಿಂಗಳು ಉದ್ಧವ್ ಠಾಕ್ರೆ ಬಣವು ಏಕನಾಥ್ ಶಿಂಧೆ ಜೊತೆಗಿನ 16 ಶಾಸಕರನ್ನು ಅನರ್ಹಗೊಳಿಸುವಂತೆ ಸುಪ್ರೀಂಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿಯು ಸುಪ್ರೀಂ ಕೋರ್ಟ್ನಲ್ಲಿ ಇನ್ನೂ ಬಾಕಿ ಉಳಿದಿದ್ದು, ಉಪಾಸಭಾಪತಿಗಳಿಗೆ ಅದಕ್ಕೆ ಸಂಬಂಧಿಸಿದಂತೆ ನೋಟಿಸ್ ಕೂಡ ಜಾರಿಗೊಳಿಸಲಾಗಿದೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಹೊಸ ಪಕ್ಷದ ವಿಪ್ ಅನ್ನು ಗುರುತಿಸುವ ಸ್ಪೀಕರ್ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ. ನ್ಯಾಯಾಲಯವು ಜುಲೈ 11ರಂದು ಈ ಅರ್ಜಿಯನ್ನೂ ಸಹ ವಿಚಾರಣೆ ನಡೆಸಲಿದೆ.
ಸ್ಪೀಕರ್ ಚುನಾವಣೆಯಲ್ಲೂ ಶಿಂಧೆ ಸರ್ಕಾರ ಗೆಲುವು
ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ವಿಧಾನಸಭೆ ಸ್ಪೀಕರ್ ಚುನಾವಣೆಯಲ್ಲಿ ಶಿವಸೇನಾ ಅಭ್ಯರ್ಥಿ ರಾಜನ್ ಸಾಲ್ವಿ ಅನ್ನು ಸೋಲಿಸಿದ ಬಿಜೆಪಿಯ ರಾಹುಲ್ ನಾರ್ವೇಕರ್ ಗೆಲುವು ಸಾಧಿಸಿದ್ದರು. 16 ಶಾಸಕರು ಶಿವಸೇನೆ ವಿಪ್ ಉಲ್ಲಂಘಿಸಿದ್ದಾರೆ ಎಂದು ಗೋಗಾವಾಲೆ ಹೇಳಿದ್ದಾರೆ. ಭಾನುವಾರ ನಡೆದ ಸ್ಪೀಕರ್ ಚುನಾವಣೆಯಲ್ಲಿ ನಾರ್ವೇಕರ್ ಪರವಾಗಿ ಬಿಜೆಪಿಯ106 ಶಾಸಕರು ಸೇರಿದಂತೆ ಒಟ್ಟು 164 ಮತಗಳನ್ನು ಪಡೆದಿದ್ದರೆ, ಶಿವಸೇನೆ ಅಭ್ಯರ್ಥಿಯು 107 ಮತಗಳನ್ನು ಪಡೆದಿದ್ದರು. ಸ್ಪೀಕರ್ ಚುನಾವಣೆ ವೇಳೆ 12 ಸದಸ್ಯರು ಮತ್ತು 3 ಶಾಸಕರು ಮತದಾನಕ್ಕೆ ಗೈರಾಗಿದ್ದರು.
Recommended Video