Breaking: ಮಹಾರಾಷ್ಟ್ರ ವಿಶ್ವಾಸಮತಯಾಚನೆಯಲ್ಲಿ ಶಿಂಧೆ ಸರ್ಕಾರ ಪಾಸ್
ಮುಂಬೈ, ಜುಲೈ 04: ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ಪ್ರಮಾಣವಚನ ಸ್ವೀಕರಿಸಿರುವ ಏಕನಾಥ್ ಶಿಂಧೆ ಸರ್ಕಾರವು ಸೋಮವಾರ ನಡೆದ ವಿಶ್ವಾಸಮತಯಾಚನೆಯಲ್ಲೂ ಪಾಸ್ ಆಗಿದೆ.
ಸೋಮವಾರ ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ವಿಶ್ವಾಸಮತಯಾಚನೆ ಪ್ರಕ್ರಿಯೆ ಆರಂಭಿಸಲಾಯಿತು. ತಲೆ ಎಣಿಕೆ ಮೂಲಕ ವಿಶ್ವಾಸಮತಯಾಚನೆ ಪ್ರಕ್ರಿಯೆ ನಡೆಸಲಾಯಿತು.
33 ನಿಮಿಷಗಳಲ್ಲಿ ಶಿವಸೇನೆ ಮತ್ತು ಬಿಜೆಪಿ ನೇತೃತ್ವದ ಸರ್ಕಾರವು 164 ಮತಗಳ ಬೆಂಬಲದೊಂದಿಗೆ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ 10 ದಿನಗಳ ಶಿವಸೇನೆ ಬಂಡಾಯವು ಹೊಸ ಸರ್ಕಾರದ ಅಸ್ತಿತ್ವದೊಂದಿಗೆ ಅಂತ್ಯವಾಗಿದೆ.
ಮೈತ್ರಿಕೂಟದ ಸರ್ಕಾರಕ್ಕೆ ಸಿಕ್ಕಿದ್ದು ಎಷ್ಟು ವಿಶ್ವಾಸ
ಭಾನುವಾರ ಸ್ಪೀಕರ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಶಿವಸೇನೆ ಮತ್ತು ಬಿಜೆಪಿ ಮೈತ್ರಿಕೂಟವು ಸೋಮವಾರ ನಿರೀಕ್ಷೆಯಂತೆ ವಿಶ್ವಾಸಮತಯಾಚನೆಯಲ್ಲೂ ಗೆಲುವು ಸಾಧಿಸಿದೆ. 287 ಸದಸ್ಯರ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಪರವಾಗಿ 164 ಮತಗಳು ಬಿದ್ದಿದೆ. ಇನ್ನೊಂದು ಕಡೆ ಕಾಂಗ್ರೆಸ್, ರಾಷ್ಟ್ರೀಯವಾದಿ ಕಾಂಗ್ರೆಸ್ ಮತ್ತು ಉದ್ಧವ್ ಠಾಕ್ರೆ ಬಣದ ಶಾಸಕರು ಸೇರಿ ಒಟ್ಟು 99 ಮತಗಳು ಠಾಕ್ರೆ ಬಣಕ್ಕೆ ಸಿಕ್ಕಿದೆ. ಇದರ ಹೊರತಾಗಿ 21 ಶಾಸಕರು ಸೋಮವಾರದ ಕಲಾಪಕ್ಕೆ ಗೈರು ಹಾಜರಾಗಿದ್ದರು.
ಸರ್ಕಾರವನ್ನು ಅಭಿನಂದಿಸಿದ ಡಿಸಿಎಂ ಫಡ್ನವೀಸ್
ಮಹಾರಾಷ್ಟ್ರದಲ್ಲಿ ಭಾರೀ ಜನಾದೇಶದೊಂದಿಗೆ ವಿಶ್ವಾಸ ಮತ ಗೆದ್ದಿದ್ದಕ್ಕಾಗಿ ಸಿಎಂ ಏಕನಾಥ್ ಶಿಂಧೆ ಅನ್ನು ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅಭಿನಂದಿಸಿದ್ದಾರೆ. ವಿಧಾನಸಭೆಯನ್ನು ಉದ್ದೇಶಿಸಿ ಮಾತನಾಡಿದ ಡಿಸಿಎಂ ದೇವೇಂದ್ರ ಫಡ್ನವೀಸ್, "ಮುಖ್ಯಮಂತ್ರಿ ಏಕನಾಥ್ ಶಿಂಧೆಯೊಬ್ಬ ನಿಷ್ಠಾವಂತ ಶಿವಸೈನಿಕ. ಏಕನಾಥ್ ಶಿಂಧೆಯವರು ಬಾಳಾಸಾಹೇಬ್ ಠಾಕ್ರೆ ಸಿದ್ಧಾಂತಕ್ಕೆ ನಿಷ್ಠರಾಗಿದ್ದಾರೆ" ಎಂದು ಹೇಳಿದರು.
ಕಾಂಗ್ರೆಸ್ ಶಾಸಕರಿಗೂ ಧನ್ಯವಾದ ತಿಳಿಸಿದ ದೇವೇಂದ್ರ ಫಡ್ನವೀಸ್
"ಮುಖ್ಯಮಂತ್ರಿ ಏಕನಾಥ್ ಶಿಂಧೆ ಸರ್ಕಾರದ ಮೇಲೆ ನಂಬಿಕೆ ಇಟ್ಟ ಎಲ್ಲ ಸದಸ್ಯರಿಗೂ ನಾನು ಧನ್ಯವಾದ ಹೇಳುತ್ತೇನೆ. ಸದನದಿಂದ ಹೊರಗುಳಿಯುವ ಮೂಲಕ ಬಿಜೆಪಿ-ಶಿಂಧೆ ಮೈತ್ರಿಗೆ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ," ಎಂದು ಕಾಂಗ್ರೆಸ್ನ ಅಶೋಕ್ ಚೌವ್ಹಾಣ್, ವಿಜಯ್ ವಾಡೆತ್ತಿವಾರ್ ಮತ್ತು ಜೀಶನ್ ಸಿದ್ದಿಕ್ ಅಂತಹ ನಾಯಕರನ್ನು ಗುರಿಯಾಗಿಸಿಕೊಂಡು ಫಡ್ನವೀಸ್ ಹೇಳಿದರು.
ಸ್ಪೀಕರ್ ಚುನಾವಣೆಯಲ್ಲೂ ಏಕನಾಥ್ ಶಿಂಧೆ ಸರ್ಕಾರಕ್ಕೆ ದಿಗ್ವಿಜಯ
ಮಹಾರಾಷ್ಟ್ರದಲ್ಲಿ ಭಾನುವಾರ ನಡೆದ ವಿಧಾನಸಭೆ ಸ್ಪೀಕರ್ ಚುನಾವಣೆಯಲ್ಲಿ ಶಿವಸೇನಾ ಅಭ್ಯರ್ಥಿ ರಾಜನ್ ಸಾಲ್ವಿ ಅನ್ನು ಸೋಲಿಸಿದ ಬಿಜೆಪಿಯ ರಾಹುಲ್ ನಾರ್ವೇಕರ್ ಗೆಲುವು ಸಾಧಿಸಿದ್ದರು. 16 ಶಾಸಕರು ಶಿವಸೇನೆ ವಿಪ್ ಉಲ್ಲಂಘಿಸಿದ್ದಾರೆ ಎಂದು ಗೋಗಾವಾಲೆ ಹೇಳಿದ್ದಾರೆ. ಭಾನುವಾರ ನಡೆದ ಸ್ಪೀಕರ್ ಚುನಾವಣೆಯಲ್ಲಿ ನಾರ್ವೇಕರ್ ಪರವಾಗಿ ಬಿಜೆಪಿಯ106 ಶಾಸಕರು ಸೇರಿದಂತೆ ಒಟ್ಟು 164 ಮತಗಳನ್ನು ಪಡೆದಿದ್ದರೆ, ಶಿವಸೇನೆ ಅಭ್ಯರ್ಥಿಯು 107 ಮತಗಳನ್ನು ಪಡೆದಿದ್ದರು. ಸ್ಪೀಕರ್ ಚುನಾವಣೆ ವೇಳೆ 12 ಸದಸ್ಯರು ಮತ್ತು 3 ಶಾಸಕರು ಮತದಾನಕ್ಕೆ ಗೈರಾಗಿದ್ದರು.
Recommended Video