ಮೋದಿ ಸರ್ಕಾರದ ಮುಂದಿನ ಟಾರ್ಗೆಟ್ ದಾವೂದ್!
ನವದೆಹಲಿ, ಅ.27: ಇಂಟರ್ ಪೋಲ್ ನಿಂದ ರೆಡ್ ಕಾರ್ನರ್ ನೋಟಿಸ್ ಪಡೆದುಕೊಂಡಿದ್ದ ಭಾರತದ ಮೋಸ್ಟ್ ವಾಂಟೆಡ್ ಭೂಗತ ಪಾತಕಿ ಛೋಟಾ ರಾಜನ್ ನನ್ನು ಇಂಡೋನೋಷಿಯಾದ ಬಾಲಿಯಲ್ಲಿ ಬಂಧಿಸಲಾಗಿದೆ. ಈಗ ಮೋದಿ ಸರ್ಕಾರದ ಮುಂದಿನ ಟಾರ್ಗೆಟ್ ದಾವೂದ್ ಇಬ್ರಾಹಿಂ.
ಇಂಡೋನೇಷ್ಯಾದ ಪೊಲೀಸರ ವಶದಲ್ಲಿರುವ ಛೋಟಾ ರಾಜನ್ ನನ್ನು ಭಾರತಕ್ಕೆ ಕರೆ ತರಲು ಸಿಬಿಐ ಸಿದ್ಧತೆ ನಡೆಸಿದೆ. ಅದರೆ, ಆ ದೇಶದ ಕಾನೂನು ಪ್ರಕ್ರಿಯೆ ಮುಗಿಯುವ ತನಕ ನಾವು ಕಾಯಬೇಕಾಗುತ್ತದೆ ಎಂದು ಕೇಂದ್ರ ಗೃಹ ಖಾತೆಯ ಸಹಾಯಕ ಸಚಿವ ಕೀರೆನ್ ರಿಜಿಜು ಹೇಳಿದ್ದಾರೆ. [ಭೂಗತ ಪಾತಕಿ ಛೋಟಾ ರಾಜನ್ ಬಂಧನ]
ದಾವೂದ್ ಮುಂದಿನ ಟಾರ್ಗೆಟ್?: ಛೋಟಾ ರಾಜನ್ ನಂತರ 1993ರ ಮುಂಬೈ ಸರಣಿ ಸ್ಫೋಟದ ಆರೋಪಿ ದಾವೂದ್ ಇಬ್ರಾಹಿಂ ನಮ್ಮ ಟಾರ್ಗೆಟ್ ಎಂದು ಸಚಿವ ಕೀರೆನ್ ಹೇಳಿದ್ದಾರೆ. ಪಾಕಿಸ್ತಾನದ ಕರಾಚಿಯಲ್ಲಿ ಅಡಗಿ ಕುಳಿತಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಕೂಡ ಛೋಟಾ ರಾಜನ್ ರೀತಿಯಲ್ಲೇ ಬಂಧಿಸಿ ಭಾರತಕ್ಕೆ ಕರೆತರಲಾಗುವುದು ಎಂದಿದ್ದಾರೆ. [ಛೋಟಾ ರಾಜನ್ : ಡಾನ್ ಆಗಿದ್ದು ಹೇಗೆ?]
ಸುಮಾರು 20ಕ್ಕೂ ಅಧಿಕ ಕೊಲೆ ಕೇಸ್, ಗಲಭೆ, ಹಿಂಸಾಚಾರ, ಬೆದರಿಕೆ ಪ್ರಕರಣಗಳನ್ನು ಮೈಮೇಲೆ ಹೊತ್ತುಕೊಂಡಿರುವ 55 ವರ್ಷದ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ್ ನಿಕ್ಲಾಜೆಯನ್ನು ಭಾರತಕ್ಕೆ ಕರೆ ತರುವ ಪ್ರಕ್ರಿಯೆ ಆರಂಭವಾಗಿದೆ. ಇತ್ತೀಚೆಗೆ ಭಾರತ ಹಾಗೂ ಇಂಡೋನೇಷಿಯಾ ನಡುವೆ ಆಗಿರುವ ಒಪ್ಪಂದದಂತೆ ಕ್ರಿಮಿನಲ್ ಗಳನ್ನು ಕೋರ್ಟ್ ವಾರೆಂಟ್ ಆಧಾರದ ಮೇಲೆ ಹಸ್ತಾಂತರ ಮಾಡಲು ಸಾಧ್ಯವಿದೆ.
ಅದರೆ, ರಾಜನ್ ಬಂಧನ ಮಾಡಿದ್ದೇ ಆತನನ್ನು ರಕ್ಷಿಸಲು ಹಾಗೂ ಆತನ ಬಳಿ ಇರುವ ಮಾಹಿತಿ ಕಲೆ ಹಾಕಿ ದಾವೂದ್ ಇಬ್ರಾಹಿಂನನ್ನು ಹಿಡಿಯಲು ಬಲೆ ಹೆಣೆಯಲಾಗುತ್ತಿದೆ ಎಂದು ಭೂಗತ ಜಗತ್ತಿನಲ್ಲಿ ಸುದ್ದಿ ಹರಿದಾಡುತ್ತಿದೆ.