ಮುಂಬೈ ಲೋಕಲ್ ರೈಲಲ್ಲಿ ವಿಶ್ವಬ್ಯಾಂಕ್ ಸಿಇಒ ಕಂಡು ಬೆರಗಾದ ಜನ
ಭಾರತ ಪ್ರವಾಸದಲ್ಲಿರುವ ವಿಶ್ವ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ರಿಸ್ಟಾಲಿನಾ ಜಾರ್ಜಿಯೆವಾ ಮಂಗಳವಾರ ಮುಂಬೈನ ಸ್ಥಳೀಯ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ.
ಮುಂಬೈ, ಮಾರ್ಚ್ 1: ಜನದಟ್ಟಣೆಯಲ್ಲೇ ಮುಳುಗಿರುವ ಮುಂಬೈ ಸ್ಥಳೀಯ ರೈಲಿನಿಂದ ಗಣ್ಯರು, ಶ್ರೀಮಂತರು ದೂರ ಉಳಿಯುವುದೇ ಜಾಸ್ತಿ. ಆದರೆ ಮಂಗಳವಾರ ರೈಲು ಪ್ರಯಾಣಿಕರಿಗೆಲ್ಲಾ ಅಚ್ಚರಿ ಕಾದಿತ್ತು. ಕಾರಣ ರೈಲಿನಲ್ಲಿ ವಿಶ್ವ ಬ್ಯಾಂಕ್ ಸಿಇಒ ಪ್ರಯಾಣಿಸುತ್ತಿದ್ದರು. [ಪ್ರಧಾನಿಗೂ ಜವಾನನಿಗೂ ಒಂದೇ ಸಂಬಳ ಸಿಗುವಂತಾದಾಗ!]
ಭಾರತ ಪ್ರವಾಸದಲ್ಲಿರುವ ವಿಶ್ವ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕ್ರಿಸ್ಟಾಲಿನಾ ಜಾರ್ಜಿಯೆವಾ ಮಂಗಳವಾರ ಮುಂಬೈನ ಸ್ಥಳೀಯ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಹಾಗಂತ ಕ್ರಿಸ್ಟಾಲಿನಾ ಸುಮ್ಮನೆ ಮೋಜು ಮಾಡಲು ರೈಲು ಹತ್ತಿಲ್ಲ. ಮುಂಬೈ ರೈಲ್ವೆಗೆ ವಿಶ್ವ ಬ್ಯಾಂಕ್ ಕೂಡ ಆರ್ಥಿಕ ಸಹಾಯ ನೀಡುತ್ತಿದ್ದು ಅದರ ಪರಿಶೀಲನೆಗಾಗಿ ರೈಲು ಹತ್ತಿದ್ದಾರೆ.[ಪಿಎಫ್ ಪಿಂಚಣಿ ಪಡೆಯಲು ಆಧಾರ್ ಕಾರ್ಡ್ ಬೇಕಿಲ್ಲ!]
20 ಜನರ ತಂಡ
ರೈಲಿನಲ್ಲಿರುವ ಸೌಲಭ್ಯಗಳು ಮತ್ತು ವ್ಯವಸ್ಥೆಗಳನ್ನು ಪರಿಶೀಲಿಸಲು ಕ್ರಿಸ್ಟಾಲಿನಾ 20 ಜನರ ತಂಡದೊಂದಿಗೆ ಪ್ರಯಾಣ ಬೆಳೆಸಿದರು. ಅವರನ್ನು ಹಿಂಬಾಲಿಸಿದ್ದ ಮಾಧ್ಯಮಗಳಿಗೆ ತಮ್ಮ ರೈಲು ಟಿಕೆಟ್ ತೋರಿಸಿ ಕ್ರಿಸ್ಟಾಲಿನಾ ಪೋಸ್ ನೀಡಿದರು.[ಅಪನದೀಕರಣದ ನಡುವೆಯೂ ಶೇ. 7ರ ಗಡಿ ತಲುಪಿದ ಜಿಡಿಪಿ]
ಚರ್ಚ್ ಗೇಟ್ ನಿಂದ ದಾದರ್ ವರೆಗೆ
ಮುಂಬೈನ ಚರ್ಚ್ ಗೇಟ್ ನಿಲ್ದಾಣದಿಂದ ದಾದರ್ ವರೆಗೆ ಕ್ರಿಸ್ಟಾಲಿನಾ ಪ್ರಯಾಣ ಬೆಳೆಸಿದರು. ಸೆಕೆಂಡ್ ಕ್ಲಾಸ್ ಲೇಡಿಸ್ ಕಂಪಾರ್ಟ್ ಮೆಂಟ್ ಹತ್ತಿದ್ದ ಕ್ರಿಸ್ಟಾಲಿನಾ, ರೈಲ್ವೆ ಸೇವೆ ಬಗ್ಗೆ ಕಂಪಾರ್ಟ್ ಮೆಂಟ್ ನಲ್ಲಿದ್ದ ಮಹಿಳೆಯರ ಜತೆ ಮಾತುಕತೆ ನಡೆಸಿ ಮಾಹಿತಿ ಪಡೆದುಕೊಂಡರು.[ಏನಿದು ಆಧಾರ್ ಆಧಾರಿತ ಪೇಮೆಂಟ್ App? ಹೇಗೆ ಕಾರ್ಯ ನಿರ್ವಹಿಸುತ್ತೆ?]
ಜಂಟ್ಸ್ ಕಂಪಾರ್ಟ್ ಮೆಂಟ್ ನಲ್ಲಿ
ಇನ್ನು ವಿಶ್ವ ಬ್ಯಾಂಕ್ ನಿರ್ದೇಶಕ ಜುನೈದ್ ಅಹ್ಮದ್ ಹಾಗೂ ಇತರ ರೈಲ್ವೆ ಅಧಿಕಾರಿಗಳು ಜೆಂಟ್ಸ್ ಕಂಪಾರ್ಟ್ ವೆುಂಟ್ ನಲ್ಲಿ ಪ್ರಯಾಣಿಸಿದರು. ಸೆಕೆಂಡ್ ಕ್ಲಾಸ್ ಕಂಪಾರ್ಟ್ ಮೆಂಟ್ ಹತ್ತಿದ ಅಧಿಕಾರಿಗಳು ಪುರುಷ ಪ್ರಯಾಣಿಕರೊಂದಿಗೆ ರೈಲ್ವೆ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಕ್ರಿಸ್ಟಾಲಿನಾ ಹೇಳಿದ್ದೇನು?
ಮುಂಬೈ ಸ್ಥಳೀಯ ರೈಲುಗಳಲ್ಲಿ ಪ್ರಯಾಣ ನಡೆಸಿ, ಮಹಿಳೆಯರ ಜತೆ ಮಾತುಕತೆ ನಡೆಸಿ ಬಂದ ಕ್ರಿಸ್ಟಾಲಿನಾ ಮಾಧ್ಯಮಗಳ ಜತೆ ಮಾತನಾಡಿದರು. ಎಂಆರ್ ಸಿವಿ ಮುಖ್ಯ ಕಚೇರಿಯಲ್ಲಿ ಮಾತನಾಡಿದ ಕ್ರಿಸ್ಟಾಲಿನಾ, ಮುಂಬೈ ಹಾಗೂ ಸುತ್ತಮುತ್ತಲ ಭಾಗದಲ್ಲಿ ವಿಶ್ವಬ್ಯಾಂಕ್ ಅನುದಾನದಲ್ಲಿ ನಡೆಯುತ್ತಿರುವ ರೈಲ್ವೆ ಮೂಲಸೌಕರ್ಯ ಯೋಜನೆಗಳ ಬೆಳವಣಿಗೆಯನ್ನು ವಿವರಿಸಿದರು.
ದೇವೇಂದ್ರ ಫಡ್ನಾವೀಸ್ ಜತೆ ಮಾತುಕತೆ
ಭಾರತ ಪ್ರವಾಸದಲ್ಲಿ ಕ್ರಿಸ್ಟಲಿನಾ ಹಲವು ಗಣ್ಯರ ಜತೆ ಮಾತುಕತೆ ನಡೆಸಲಿದ್ದಾರೆ. ಈಗಾಗಲೇ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಜತೆ ಅವರು ಮಾತುಕತೆ ನಡೆಸಿದ್ದಾರೆ. ಇನ್ನು ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಹಾಗೂ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಜತೆ ಚರ್ಚೆ ನಡೆಸಲಿದ್ದಾರೆ.