'ಚುನಾವಣೆ ಇಲ್ಲದಿದ್ದರೆ, ಕೇಂದ್ರ ಕೃಷಿ ಕಾಯ್ದೆ ಹಿಂಪಡೆಯುತ್ತಿರಲಿಲ್ಲ' ಎಂದ ಶರದ್ ಪವಾರ್
ಪುಣೆ, ನವೆಂಬರ್ 24: "ಭವಿಷ್ಯದಲ್ಲಿ ಉತ್ತರ ಪ್ರದೇಶ ಹಾಗೂ ಇತರೆ ರಾಜ್ಯದಲ್ಲಿ ಚುನಾವನೆ ಇಲ್ಲದಿದ್ದರೆ, ಕೇಂದ್ರ ಸರ್ಕಾರವು ಈ ಮೂರು ಕೃಷಿ ಕಾಯ್ದೆಯನ್ನು ರದ್ದು ಮಾಡಲಾಗುವುದು ಎಂದು ಘೋಷಣೆ ಮಾಡುತ್ತಿರಲಿಲ್ಲ," ಎಂದು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಹೇಳಿದರು.
ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂಪಡೆಯಲು ನಿರ್ಧಾರ ಮಾಡಿರುವುದಕ್ಕೆ ಹಲವಾರು ವಿರೋಧ ಪಕ್ಷಗಳು ಸಂತಸ ವ್ಯಕ್ತಪಡಿಸಿದೆ. ಕೃಷಿ ಕಾಯ್ದೆ ಹಿಂಪಡೆದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶರದ್ ಪವಾರ್, "ಮುಂದಿನ ವರ್ಷದಲ್ಲಿ ಉತ್ತರ ಪ್ರದೇಶ ಹಾಗೂ ಬೇರೆ ರಾಜ್ಯಗಳಲ್ಲಿ ಚುನಾವಣೆಯು ನಡೆಯಲಿದೆ. ನಮಗೆ ದೊರೆತ ಮಾಹಿತಿ ಪ್ರಕಾರ, ಬಿಜೆಪಿಗರು ಈ ಚುನಾವಣೆ ನಡೆಯುವ ರಾಜ್ಯಕ್ಕೆ ಹೋದಾಗ ವಿಭಿನ್ನ ರೀತಿಯ ಸ್ವಾಗತವನ್ನು ಪಡೆದಿದ್ದಾರೆ. ಅದರಿಂದಾಗಿ ಈ ನಿರ್ಧಾರ ಕೈಗೊಂಡಿದ್ದಾರೆ," ಎಂದು ವ್ಯಂಗ್ಯ ಮಾಡಿದ್ದಾರೆ.
'ಕೃಷಿ ಕಾಯ್ದೆ ತಿದ್ದುಪಡಿ ಮಾಡಿ ಜಾರಿಗೆ ತರಬಹುದು' ಎಂದ ಪವಾರ್ ಹೇಳಿಕೆಗೆ ಕೇಂದ್ರ ಸ್ವಾಗತ
"ಉತ್ತರ ಪ್ರದೇಶ ಸೇರಿದಂತೆ ಬೇರೆ ರಾಜ್ಯಗಳಲ್ಲಿನ ಗ್ರಾಮ ಪ್ರದೇಶಕ್ಕೆ ಹೋದ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಜನರು ವಿಭಿನ್ನವಾಗಿ ಬಿಜೆಪಿಗರನ್ನು ಸ್ವಾಗತ ಮಾಡಿದ್ದಾರೆ. ಇದರಿಂದಾಗಿ ಬಿಜೆಪಿಗೆ ಈ ಕೃಷಿ ಕಾಯ್ದೆ ಮುಂದಿನ ಚುನಾವಣೆಯ ಮೇಲೆ ಬೀರುವ ಪ್ರಭಾವದ ಬಗ್ಗೆ ತಿಳಿಯಿತು. ಮುಂದೆ ಪ್ರಚಾರ ಕಾರ್ಯ ನಡೆಸುವ ವೇಳೆ ಯಾವ ರೀತಿಯ ಉಪಚಾರ ದೊರೆಯಬಹುದು ಎಂಬುವುದು ಬಿಜೆಪಿಯ ಅರಿವಿಗೆ ಬಂದಿದೆ. ಈ ಹಿನ್ನೆಯಿಂದಾಗಿ ಸಂದರ್ಭಕ್ಕೆ ಅನುಗುಣವಾಗಿ ಆಲೋಚನೆ ಮಾಡಿ ಬಿಜೆಪಿ ಸಕಾರ ಕೃಷಿ ಕಾಯ್ದೆಯನ್ನು ವಾಪಸ್ ಪಡೆದಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಒಂದು ವೇಳೆ ಭವಿಷ್ಯದಲ್ಲಿ ಉತ್ತರ ಪ್ರದೇಶ ಹಾಗೂ ಬೇರೆ ರಾಜ್ಯಗಳಲ್ಲಿ ಚುನಾವಣೆ ಇಲ್ಲವೆಂದಾದರೆ ಕೇಂದ್ರ ಸರ್ಕಾರವು ಈ ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುತ್ತಿರಲಿಲ್ಲ," ಎಂದು ಹೇಳಿದ ಶರದ್ ಪವಾರ್ ಇದೇ ಸಂದರ್ಭದಲ್ಲಿ "ಮಹಾ ವಿಕಾಸ್ ಅಘಾಡಿ (ಎಂವಿಎ) ಸರ್ಕಾರವು ಮಹಾರಾಷ್ಟ್ರದಲ್ಲಿ ಐದು ವರ್ಷಗಳ ಅಧಿಕಾರವಧಿಯನ್ನು ಯಶಸ್ವಿಯಾಗಿ ಪೂರ್ಣ ಮಾಡಲಿದೆ. ಮಹಾರಾಷ್ಟ್ರದಲ್ಲಿ ಚುನಾವಣೆ ನಡೆದರೆ, ಕಾಂಗ್ರೆಸ್, ಎನ್ಸಿಪಿ, ಶಿವಸೇನೆ ಮೈತ್ರಿ ಕೂಟವು ಮತ್ತೆ ಅಧಿಕಾರವನ್ನು ಪಡೆಯಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಬಂಗಲೆಯನ್ನು ನಿರ್ವಹಣೆ ಮಾಡಲಾಗದ ಜಮೀನುದಾರ': ಕಾಂಗ್ರೆಸ್ ಕಾಳೆಲೆದ ಶರದ್
ಕೆಲವೇ ದಿನದಲ್ಲಿ ಮಮತಾರನ್ನು ಭೇಟಿಯಾಗಲಿರುವ ಶರದ್ ಪವಾರ್
ಇನ್ನು ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶರದ್ ಪವಾರ್, "ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಬಿಜೆಪಿಯೇತರ ರಾಜ್ಯಗಳನ್ನು ಗುರಿಯಾಗಿಸಿಕೊಂಡು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ," ಎಂದು ಆರೋಪ ಮಾಡಿದ್ದಾರೆ. ಹೊಸ ವರ್ಷದಲ್ಲಿ ರಾಜ್ಯ ಸರ್ಕಾರ ಬದಲಾಗಲಿದೆ ಎಂಬ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಕಾಂತ್ ಪಾಟೀಲ್ ಹೇಳಿಕೆಯ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದಾಗ ಅದಕ್ಕೆ ಪ್ರತಿಕ್ರಿಯೆ ನೀಡಿದ ಶರದ್ ಪವಾರ್, "ಎರಡು ವರ್ಷಗಳ ಹಿಂದೆ ಶಿವಸೇನೆ, ಎನ್ಸಿಪಿ ಮತ್ತು ಕಾಂಗ್ರೆಸ್ನ ಸರ್ಕಾರ ರಚನೆ ಆದ ಬಳಿಕ ಇದೇ ರೀತಿ ಹೇಳಿಕೆಯನ್ನು ನೀಡಿದ್ದಾರೆ. 15 ದಿನಗಳಲ್ಲಿ ಸರ್ಕಾರ ಕುಸಿಯುತ್ತದೆ ಎಂದು ಅವರು ಹೇಳಿದ್ದರು," ಎಂದಿದ್ದಾರೆ. ಇನ್ನು ಇದೇ ಸಂದರ್ಭದಲ್ಲಿ "ನಾನು ಇತ್ತೀಚೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿರನ್ನು ಭೇಟಿಯಾದೆ. ಮಮತಾರ ಸರ್ಕಾರದ ಆರರಿಂದ ಏಳು ಸಚಿವರುಗಳು ಕೇಂದ್ರದ ಏಜೆನ್ಸಿಯ ಮೂಲಕ ದೌರ್ಜನ್ಯಕ್ಕೆ ಒಳಗಾಗುತ್ತಿದ್ದಾರೆ. ನಾನು ಕೆಲವೇ ದಿನದಲ್ಲಿ ಮಮತಾರನ್ನು ಭೇಟಿಯಾಗಲಿದ್ದೇನೆ," ಎಂದು ತಿಳಿಸಿದರು.
ತಿದ್ದುಪಡಿ ಮಾಡಿ ಕಾಯ್ದೆ ಜಾರಿ ಮಾಡಬಹುದು ಎಂದಿದ್ದ ಶರದ್
''ಕೇಂದ್ರದ ಹೊಸ ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕಾಗಿಲ್ಲ. ಬದಲಾಗಿ, ವಿವಾದಾತ್ಮಕ ಭಾಗಗಳನ್ನು ತೆಗೆದುಹಾಕಬಹುದು'' ಎಂದು ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಈ ಅಭಿಪ್ರಾಯವನ್ನು ಕೇಂದ್ರವು ಇಂದು ಸ್ವಾಗತಿಸಿತ್ತು. ಕೇಂದ್ರ ಮಾಜಿ ಕೃಷಿ ಸಚಿವರಾದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಈ ಕಾಯ್ದೆಗಳ ಬಗ್ಗೆ ಸರ್ಕಾರಿ ಸುದ್ದಿವಾಹಿನಿ ದೂರದರ್ಶನದಲ್ಲಿ ಮಾತನಾಡುತ್ತಾ, ''ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣವಾಗಿ ತಿರಸ್ಕರಿಸುವ ಬದಲು ಕೆಲವು ತಿದ್ದುಪಡಿಗಳನ್ನು ಮಾಡಬಹುದು,'' ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, "ಮಾಜಿ ಕೃಷಿ ಸಚಿವರ ಈ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಕೇಂದ್ರ ಸರ್ಕಾರ ಅವರ ಈ ಹೇಳಿಕೆಯನ್ನು ಒಪ್ಪುತ್ತದೆ ಎಂದು ನಾನು ಪವಾರ್ಗೆ ಹೇಳಲು ಬಯಸುತ್ತೇನೆ. ನಾವು ಈ ವಿಚಾರವನ್ನೇ ರೈತ ಸಂಘದೊಂದಿಗೆ ಹನ್ನೊಂದು ಬಾರಿ ಚರ್ಚಿಸಿದ್ದೇವೆ," ಎಂದು ಎಎನ್ಐಗೆ ತಿಳಿಸಿದರು.