ಅಜಿತ್ ಪವಾರ್ ವಿರುದ್ಧ 1000 ಕೋಟಿ ಬ್ಯಾಂಕ್ ಹಗರಣದ ಆರೋಪ
ಮುಂಬೈ, ಆಗಸ್ಟ್ 27: ನ್ಯಾಷಲಿಸ್ಟ್ ಕಾಂಗ್ರೆಸ್ ಪಾರ್ಟಿ(ಎನ್ಸಿಪಿ)ಯ ಪ್ರಮಖ ಮುಖಂಡ ಅಜಿತ್ ಪವಾರ್ ವಿರುದ್ಧ 1000 ಕೋಟಿ ಬ್ಯಾಂಕಿಂಗ್ ಅವ್ಯವಹಾರ ಆರೋಪ ಕೇಳಿ ಬಂದಿದೆ. ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕಿನಲ್ಲಿ ಅಜಿತ್ ಪವಾರ್ ಹಾಗೂ 70 ಮಂದಿ ಭ್ರಷ್ಟಾಚಾರದಲ್ಲಿ ತೊಡಗಿದ್ದರು ಎಂದು ಮುಂಬೈ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗದ ತಂಡ ಪ್ರಕರಣ ದಾಖಲಿಸಿಕೊಂಡಿದೆ.
ಬಾಂಬೆ ಹೈಕೋರ್ಟಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ತನಿಖೆ ಕೈಗೊಳ್ಳಲು ಅನುಮತಿ ಪಡೆದುಕೊಳ್ಳಲಾಗಿದೆ. ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಸಂಬಂಧಿ ಅಜಿತ್ ಈ ಹಿಂದೆ ನವೆಂಬರ್ 10, 2010 ರಿಂದ ಸೆಪ್ಟೆಂಬರ್ 26, 2014ರ ತನಕ ಉಪ ಮುಖ್ಯಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಈ ಪ್ರಕರಣದಲ್ಲಿ ಅಜಿತ್ ಜೊತೆಗೆ ಪೆಸೆಂಟ್ಸ್ ಅಂಡ್ ವರ್ಕರ್ಸ್ ಪಾರ್ಟಿ ನಾಯಕ ಜಯಂತ್ ಪಾಟೀಲ್ ಹಾಗೂ ಇನ್ನಿತರ ಅಧಿಕಾರಿಗಳು ಶಾಮೀಲಾಗಿದ್ದಾರೆ. 34 ಜಿಲ್ಲೆಗಳಲ್ಲಿ ಭ್ರಷ್ಟಾಚಾರ ಎಸಗಿರುವುದು ಕಂಡು ಬಂದಿದೆ ಎಂದು ಮುಂಬೈ ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
"ಎಂಆರ್ ಎ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಕೊಟ್ಟ ದೂರನ್ನು ಆಧಾರವಾಗಿಟ್ಟುಕೊಳ್ಳಲಾಗಿದೆ" ಎಂದು ತನಿಖಾಧಿಕಾರಿ ತಿಳಿಸಿದರು.
ಬ್ಯಾಂಕಿಂಗ್ ನಿಯಮ, ಆರ್ ಬಿಐ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಲಾಗಿದೆ ಸುಮಾರು 1,000 ಕೋಟಿ ರು ಬ್ಯಾಂಕಿಗೆ ನಷ್ಟವಾಗಿದೆ ಎಂದು National Bank for Agriculture and Rural Development(ನಬಾರ್ಡ್) ದೂರಿದೆ. ಇದೆಲ್ಲವೂ ಕಬ್ಬು ಬೆಳೆಗಾರರ ಸಾಲ, ಕಾರ್ಖಾನೆ, ಗಿರಣಿಗಳ ಸಾಲಕ್ಕೆ ಸಂಬಂಧಪಟ್ಟಿದ್ದು, 2007 ರಿಂದ 2011ರ ಅವಧಿಯಲ್ಲಿ ನಡೆದ ಅವ್ಯವಹಾರ ಎಂದು ತಿಳಿದು ಬಂದಿದೆ.
ಸಾಮಾಜಿಕ ಕಾರ್ಯಕರ್ತ ಸುರೀಂದರ್ ಅರೋರಾ 2015ರಲ್ಲಿ ಮೊದಲಿಗೆ ಈ ಅವ್ಯವಹಾರದ ಬಗ್ಗೆ ಪೊಲೀಸರಲ್ಲಿ ದೂರು ದಾಖಲಿಸಿ, ನಂತರ ಹೈಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ವಾರ ಜಸ್ಟೀಸ್ ಎಸ್ ಸಿ ಧರ್ಮಾಧಿಕಾರಿ ಹಾಗೂ ಎಸ್ ಕೆ ಶಿಂಧೆ ಅವರಿದ್ದ ಬಾಂಬೆ ಹೈಕೋರ್ಟಿನ ನ್ಯಾಯಪೀಠವು ತನಿಖೆಗೆ ಆದೇಶಿಸಿದ್ದನ್ನು ಇಲ್ಲಿ ಸ್ಮರಿಸಬಹುದು.