ಫೋನ್ ನಲ್ಲಿ ಮಾತಾಡಿದ್ದಕ್ಕೆ ಗ್ರಾಹಕನನ್ನು ಪೊಲೀಸರಿಗೆ ಒಪ್ಪಿಸಿದ ಉಬರ್ ಡ್ರೈವರ್!
ಮುಂಬೈ, ಜನವರಿ.06: ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದೆ. ರಾಷ್ಟ್ರ ರಾಜಧಾನಿಯ ಶಾಹಿನ್ ಬಾಗ್ ನಲ್ಲಿ ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಬೃಹತ್ ಹೋರಾಟವೇ ನಡೆಯುತ್ತಿದೆ.
ನವದೆಹಲಿಯ ಶಾಹಿನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಫೋನ್ ನಲ್ಲಿ ಮಾತನಾಡಿದ್ದಕ್ಕೆ ಗ್ರಾಹಕನನ್ನು ಉಬರ್ ಚಾಲಕನೇ ಪೊಲೀಸರಿಗೆ ಒಪ್ಪಿಸಿದ ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಬುಧವಾರ ರಾತ್ರಿ 10 ಗಂಟೆ ವೇಳೆ ಮುಂಬೈನ ಜುಹು ಪ್ರದೇಶದಿಂದ ತಮ್ಮ ನಿವಾಸವಿರುವ ಕುರ್ಲಾಗೆ ಕವಿ ಬಪ್ಪಾದಿತ್ಯಾ ಸರ್ಕಾರ್, ಉಬರ್ ಕ್ಯಾಬ್ ಬುಕ್ ಮಾಡಿದ್ದರು.
ಕಾರ್ ನಲ್ಲಿ ಸಂಚರಿಸುತ್ತಿದ್ದ ವೇಳೆ 15 ನಿಮಿಷಗಳ ಪ್ರಯಾಣ ಸಂದರ್ಭದಲ್ಲಿ ಸಿಎಎ ವಿರುದ್ಧ ಹೋರಾಟದ ಬಗ್ಗೆ ಮೊಬೈಲ್ ನಲ್ಲಿ ಮಾತನಾಡಿದ್ದಾರೆ. ಇದರಿಂದ ಅನುಮಾನಗೊಂಡ ಕ್ಯಾಬ್ ಚಾಲಕ, ಕಾರ್ ನ್ನು ಪೊಲೀಸ್ ಠಾಣೆಯತ್ತ ತಿರುಗಿಸಿದ್ದಾನೆ.
ಮುಂಬೈನಲ್ಲಿ ಶಾಹಿಗ್ ಬಾಗ್ ರೀತಿಯಲ್ಲಿ ಹೋರಾಟ
ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ವಿರುದ್ಧ ದೆಹಲಿಯ ಶಾಹಿನ್ ಬಾಗ್ ರೀತಿಯಲ್ಲೇ ಮುಂಬೈನಲ್ಲೂ ಪ್ರತಿಭಟನೆ ನಡೆಸುವುದರ ಬಗ್ಗೆ ಬಪ್ಪಾದಿತ್ಯಾ ಸರ್ಕಾರ್ ಸಂಭಾಷಣೆ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವಿರುದ್ಧ ಮಾತನಾಡಿದ ಸರ್ಕಾರ್, ಒಬ್ಬ ಕಮ್ಯುನಿಷ್ಟ ಎಂಬ ಅನುಮಾನ ಕ್ಯಾಬ್ ಚಾಲಕನಲ್ಲಿ ಮೂಡಿತು.
ಹಣಕ್ಕಾಗಿ ಎಟಿಎಂ ಬಳಿ ಕಾರ್ ನಿಲ್ಲಿಸುವುದಾಗಿ ಹೇಳಿಕೆ
ಸರ್ಕಾರ್ ನಡೆಸಿದ ಸಂಭಾಷಣೆಯಿಂದ ಅನುಮಾನಗೊಂಡ ಕ್ಯಾಬ್ ಚಾಲಕ, ಸ್ವಲ್ಪ ಹಣ ವಿತ್ ಡ್ರಾ ಮಾಡಿಕೊಳ್ಳಬೇಕು. ಎಟಿಎಂ ಬಳಿ ಕಾರ್ ನಿಲ್ಲಿಸಬಹುದಾ ಎಂದು ಗ್ರಾಹಕನಲ್ಲಿ ಕೇಳಿ ಕೊಂಡಿದ್ದಾನೆ. ನಂತರದಲ್ಲಿ ಎಟಿಎಂ ಬದಲು ಪೊಲೀಸ್ ಠಾಣೆಯತ್ತ ಕ್ಯಾಬ್ ತಿರುಗಿಸಿದ್ದಾನೆ.
ಪೊಲೀಸರನ್ನು ಕರೆದುಕೊಂಡು ಬಂದ ಡ್ರೈವರ್
ಪೊಲೀಸ್ ಠಾಣೆ ಬಳಿ ಕ್ಯಾಬ್ ನಿಲ್ಲಿಸಿದ ಚಾಲಕ ಇಬ್ಬರು ಪೊಲೀಸರೊಂದಿಗೆ ವಾಪಸ್ ಬಂದಿದ್ದಾನೆ. ಈ ವ್ಯಕ್ತಿ ದೇಶವಿರೋಧಿಯಾಗಿ ಮಾತನಾಡುತ್ತಿದ್ದು, ಈತನನ್ನು ಬಂಧಿಸುವಂತೆ ಪೊಲೀಸರಲ್ಲಿ ಕ್ಯಾಬ್ ಚಾಲಕ ದೂರು ನೀಡುತ್ತಾನೆ. ಈ ಹೇಳಿಕೆ ಆಧರಿಸಿದ ಪೊಲೀಸರು ಇಬ್ಬರನ್ನು ವಿಚಾರಣೆಗೆ ಒಳಪಡಿಸುತ್ತಾರೆ.
|
ಡ್ರೈವರ್ ಮತ್ತು ಗ್ರಾಹಕನ ಹೇಳಿಕೆ ದಾಖಲು
ಇನ್ನು, ಸಿಎಎ ಮತ್ತು ಎನ್ಆರ್ ಸಿ ವಿರುದ್ಧ ಮುಂಬೈನಲ್ಲಿ ಬೃಹತ್ ಹೋರಾಟ ನಡೆಸುವ ಬಗ್ಗೆ ಮತನಾಡಿದ ರಾಜಸ್ಥಾನ ಮೂಲದ ಬಪ್ಪಾದಿತ್ಯಾ ಸರ್ಕಾರ್ ಒಬ್ಬ ಕವಿ ಎಂದು ವಿಚಾರಣೆ ವೇಳೆ ತಿಳಿದು ಬಂದಿದೆ. ಕಲಾ-ಖೋದಾ ಹಬ್ಬಕ್ಕಾಗಿ ರಾಜಸ್ಥಾನದಿಂದ ಮುಂಬೈಗೆ ಕರೆಯಿಸಲಾಗಿತ್ತು ಎಂದು ಸಿಪಿಐ-ಎಂಎಲ್ ಸದಸ್ಯ ಕವಿತಾ ಕೃಷ್ಣನ್ ಟ್ವೀಟ್ ಮಾಡಿದ್ದಾರೆ.