ಪ್ರವಾಹದ ನಡುವೆ ಬಸ್ ಮೇಲೆ ಗಂಟೆಗಟ್ಟಲೆ ನಿಂತು ಸರ್ಕಾರದ ಹಣ ಕಾಪಾಡಿದ ವ್ಯಕ್ತಿ
ಮುಂಬೈ, ಜುಲೈ 27: ಮಹಾರಾಷ್ಟ್ರದಲ್ಲಿ ವಾರದಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು, ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ. ಕೋಟ್ಯಂತರ ರೂಪಾಯಿ ಆಸ್ತಿಪಾಸ್ತಿ ನೀರಿನಲ್ಲಿ ಕೊಚ್ಚಿಹೋಗಿವೆ. ಸಾವು ನೋವುಗಳೂ ಸಂಭವಿಸಿವೆ.
ಆದರೆ ಈ ಪ್ರವಾಹದ ನಡುವೆ, ಸರ್ಕಾರಕ್ಕೆ ಸೇರಿದ್ದ ಭಾರೀ ಹಣವನ್ನು ರಕ್ಷಿಸಿದ ಬಸ್ ಡಿಪೋ ಮ್ಯಾನೇಜರ್ ತಮ್ಮ ಕಾರ್ಯದಿಂದಾಗಿ ಮೆಚ್ಚುಗೆ ಗಳಿಸಿದ್ದಾರೆ. ಸರ್ಕಾರದ ಹಣ ನೀರಿನಲ್ಲಿ ಕೊಚ್ಚಿಹೋಗದಂತೆ ಕಾಪಾಡಲು ಹಲವು ಗಂಟೆಗಳ ಕಾಲ, ಪ್ರವಾಹ, ಭಾರೀ ಮಳೆ ನಡುವೆ ಬಸ್ ಮೇಲೇ ಕಾದು ನಿಂತಿದ್ದಾರೆ.
ಪ್ರವಾಹ: ಮಹಾರಾಷ್ಟ್ರ, ಕರ್ನಾಟಕ ಮತ್ತು ಗೋವಾದಲ್ಲಿ ಸೇನೆಯಿಂದ ರಕ್ಷಣೆ
ರತ್ನಗಿರಿ ಜಿಲ್ಲೆಯ ಚಿಪ್ಲುನ್ ಬಸ್ ಡಿಪೋದ ರಂಜಿತ್ ರಾಜೇ ಶಿರ್ಕೆ ಎಂಬ ವ್ಯವಸ್ಥಾಪಕ ನಿರ್ದೇಶಕ, ಬಸ್ ಡಿಪೋಗೆ ನದಿ ನೀರು ನುಗ್ಗುತ್ತಿದ್ದಂತೆಯೇ ಸಾರಿಗೆ ಆದಾಯ ಇಲಾಖೆಗೆ ಸೇರಿದ ಹಣವನ್ನು ಬ್ಯಾಗ್ಗೆ ತೆಗೆದಿಟ್ಟುಕೊಂಡಿದ್ದಾರೆ. ನೋಡನೋಡುತ್ತಿದ್ದಂತೆ ಡಿಪೋ ನೀರಿನಿಂದ ಆವೃತವಾಗಿದೆ. ನೀರು ಹೆಚ್ಚಾಗುತ್ತಿದ್ದಂತೆ ರಂಜಿತ್ ಸೇರಿದಂತೆ ಹಲವು ಸಾರಿಗೆ ಸಿಬ್ಬಂದಿ ಡಿಪೋದಲ್ಲಿ ನಿಂತಿದ್ದ ಬಸ್ಸೊಂದರ ಮೇಲೆ ಹತ್ತಿದ್ದಾರೆ. ಕ್ಷಣ ಮಾತ್ರದಲ್ಲೇ ಬಸ್ಗಳು ಕೂಡ ನೀರಿನಿಂದ ಮುಳುಗಲು ಆರಂಭಿಸಿವೆ. ಆನಂತರ ನೀರಿನ ಪ್ರಮಾಣ ಕೊಂಚ ತಗ್ಗಿದೆ. ಅಲ್ಲಿಯೇ ಸುಮಾರು ಏಳು ಗಂಟೆಗಳ ಕಾಲ ಹಣದ ಬ್ಯಾಗ್ನೊಂದಿಗೆ ಉಳಿದುಕೊಂಡಿದ್ದಾರೆ.
"ಕ್ಷಣಕ್ಷಣಕ್ಕೂ ನೀರಿನ ಮಟ್ಟ ಏರಿಕೆಯಾಗುತ್ತಿತ್ತು. ಕಚೇರಿಯಲ್ಲಿ ಹಣವಿಟ್ಟಿದ್ದರೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿತ್ತು. ಅದು ನನ್ನ ಜವಾಬ್ದಾರಿಯಾದ ಕಾರಣ ಅದನ್ನು ನಾನೇ ಕಾಪಾಡಬೇಕಿತ್ತು. ಹಾಗಾಗಿ ಬೇರೇನನ್ನೂ ಯೋಚಿಸದೇ ಆ ಹಣವನ್ನು ತೆಗೆದುಕೊಂಡು ಬಸ್ ಮೇಲೇರಿದೆ" ಎಂದು ರಂಜಿತ್ ಹೇಳಿದ್ದಾರೆ. ಮಹಾರಾಷ್ಟ್ರ ರಸ್ತೆ ಸಾರಿಗೆಯ ರತ್ನಗಿರಿ ವಿಭಾಗೀಯ ಕಚೇರಿಗೆ ಕರೆ ಮಾಡಿ ವಿಷಯ ತಿಳಿಸಿದ್ದು, ನಂತರ ಇವರನ್ನು ಸ್ಥಳಾಂತರ ಮಾಡಲಾಗಿದೆ.
ಒಟ್ಟು ಸರ್ಕಾರಕ್ಕೆ ಸೇರಿದ ಒಂಬತ್ತು ಲಕ್ಷ ರೂಪಾಯಿ ಹಣವನ್ನು ರಂಜಿತ್ ಹಿಂದಿರುಗಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಕಳೆದ ವಾರದಿಂದ ಭಾರೀ ಮಳೆಯಾಗುತ್ತಿದ್ದು, ನದಿಗಳ ನೀರಿನ ಮಟ್ಟ ಏರಿಕೆಯಾಗಿದೆ. ರತ್ನಗಿರಿ, ಕೊಲ್ಲಾಪುರ, ಸಾಂಗ್ಲಿ ಹಾಗೂ ಇತೆರೆ ಜಿಲ್ಲೆಗಳು ಪ್ರವಾಹದಲ್ಲಿ ಮುಳುಗಿವೆ. ಇದುವರೆಗೂ ಮಳೆಯಿಂದ ಸಂಭವಿಸಿದ ಅವಘಡಗಳಲ್ಲಿ ಸತ್ತವರ ಸಂಖ್ಯೆ 164ಕ್ಕೆ ಏರಿಕೆಯಾಗಿದೆ. ನೂರಾರು ಮಂದಿ ನಾಪತ್ತೆಯಾಗಿದ್ದಾರೆ. ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯ ಮುಂದುವರೆದಿದೆ. ರಕ್ಷಣಾ ಸಿಬ್ಬಂದಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುತ್ತಿದ್ದಾರೆ. ರಾಜ್ಯದಲ್ಲಿ ಇದುವರೆಗೂ 1028 ಗ್ರಾಮಗಳಲ್ಲಿ ಸಂಭವಿಸಿದ ಮಳೆ ಸಂಬಂಧಿ ಅವಘಡಗಳಲ್ಲಿ ಸತ್ತವರ ಸಂಖ್ಯೆ 164ಕ್ಕೆ ಏರಿಕೆಯಾಗಿರುವುದಾಗಿ ಪರಿಹಾರ ಹಾಗೂ ಪುನರ್ವಸತಿ ಇಲಾಖೆ ಮಾಹಿತಿ ನೀಡಿದೆ.