ಮೊದಲು ಪಿಒಕೆಯನ್ನು ತನ್ನಿ, ಆಮೇಲೆ ಕರಾಚಿಗೆ ಹೋಗೋಣ: ಸಂಜಯ್ ರಾವತ್
ಮುಂಬೈ, ನವೆಂಬರ್ 23: ಪಾಕಿಸ್ತಾನದಲ್ಲಿರುವ ಕರಾಚಿಯು ಭಾರತದ ಭಾಗವಾಗಲಿದೆ ಎಂದು ಅಖಂಡ ಭಾರತದ ಬಗ್ಗೆ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೀಡಿದ ಹೇಳಿಕೆಯನ್ನು ಶಿವಸೇನಾ ಮುಖಂಡ ಸಂಜಯ್ ರಾವತ್ ಟೀಕಿಸಿದ್ದಾರೆ. ರಾಜ್ಯದ ವಿರೋಧಪಕ್ಷದ ನಾಯಕ ಫಡ್ನವೀಸ್ ಹೇಳಿಕೆ ನೀಡಿದ ಎರಡು ದಿನಗಳ ಬಳಿಕ ಪ್ರತಿಕ್ರಿಯೆ ನೀಡಿರುವ ರಾವತ್, ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಮೊದಲು ಮರಳಿ ಭಾರತದೊಂದಿಗೆ ಸೇರಿಸಲಿ. ಬಳಿಕ ಕರಾಚಿ ಬಗ್ಗೆ ಮಾತನಾಡಬಹುದು ಎಂದು ವ್ಯಂಗ್ಯವಾಡಿದ್ದಾರೆ.
'ಪಾಕಿಸ್ತಾನವು ಆಕ್ರಮಿಸಿಕೊಂಡಿರುವ ಕಾಶ್ಮೀರವನ್ನು ಮೊದಲು ತನ್ನಿ, ನಾವು ಬಳಿಕ ಕರಾಚಿಗೆ ಹೋಗುತ್ತೇವೆ' ಎಂದು ರಾವತ್ ಹೇಳಿಕೆ ನೀಡಿದ್ದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
ಒಂದು ದಿನ ಕರಾಚಿಯೂ ಭಾರತದ ಭಾಗವಾಗಲಿದೆ: ದೇವೇಂದ್ರ ಫಡ್ನವಿಸ್
ಬಾಂದ್ರಾದಲ್ಲಿ ಸುಮಾರು 60 ವರ್ಷಗಳಿಂದ ಇರುವ 'ಕರಾಚಿ ಸ್ವೀಟ್ಸ್' ಅಂಗಡಿಯ ಹೆಸರಿನಿಂದ ಕರಾಚಿ ಎಂಬ ಪದವನ್ನು ತೆಗೆದುಹಾಕುವಂತೆ ಶಿವಸೇನಾ ಮುಖಂಡರೊಬ್ಬರು ಅಂಗಡಿ ಮಾಲೀಕರಿಗೆ ಸೂಚಿಸಿದ್ದರ ಕುರಿತು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡುವಾಗ ಫಡ್ನವೀಸ್ ಕರಾಚಿಯನ್ನು ಭಾರತಕ್ಕೆ ಸೇರಿಸುವ ಬಗ್ಗೆ ಹೇಳಿಕೆ ನೀಡಿದ್ದರು. ಮುಂದೆ ಓದಿ.
ಭಾರತದ ಭಾಗವಾಗಲಿದೆ
ಶನಿವಾರ ಹೇಳಿಕೆ ನೀಡಿದ್ದ ಫಡ್ನವೀಸ್, 'ನಾವು ಅಖಂಡ ಭಾರತವನ್ನು ನಂಬುತ್ತೇವೆ. ಒಂದು ದಿನ ಕರಾಚಿಯು ಭಾರತದ ಭಾಗವಾಗಲಿದೆ ಎಂದು ನಂಬಿದ್ದೇವೆ' ಎಂದಿದ್ದರು. ಅಖಂಡ ಭಾರತದ ಬಗ್ಗೆ ವಿಶ್ವಾಸವಿರುವುದರಿಂದ ಒಂದು ದಿನ ಕರಾಚಿಯು ಭಾರತ ಭಾಗ ಎಂದು ಘೋಷಿತವಾಗಲಿದೆ ಎಂದು ಹೇಳಿದ್ದರು.
ನಿತಿನ್ ನಂದಗಾಂವ್ಕರ್
ಶಿವಸೇನಾ ಮುಖಂಡ ನಿತಿನ್ ನಂದಗಾಂವ್ಕರ್ ಅವರು ಕಳೆದ ವಾರ 'ಕರಾಚಿ ಸ್ವೀಟ್ಸ್' ಅಂಗಡಿಯ ಹೆಸರನ್ನು ದ್ವೇಷಿಸುವುದಾಗಿ ಹೇಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 'ನಿಮ್ಮ ಪೂರ್ವಜರು ಪಾಕಿಸ್ತಾನದಿಂದ ಬಂದವರು. ನೀವು ದೇಶ ವಿಭಜನೆ ವೇಳೆ ಭಾರತಕ್ಕೆ ಬಂದವರು. ನಿಮಗೆ ಸ್ವಾಗತವಿದೆ. ಆದರೆ ನಾನು ಕರಾಚಿ ಎಂಬ ಹೆಸರನ್ನು ದ್ವೇಷಿಸುತ್ತೇನೆ. ಪಾಕಿಸ್ತಾನದಲ್ಲಿರುವ ಆ ನಗರವು ಭಯೋತ್ಪಾದಕರ ಕೇಂದ್ರವಾಗಿದೆ' ಎಂದು ನಿತಿನ್ ಹೇಳಿದ್ದರು. ಅಲ್ಲದೆ, ಅಂಗಡಿ ಹೆಸರನ್ನು ಮರಾಠಿಯಲ್ಲಿ ಏನಾದರೂ ಬದಲಿಸುವಂತೆ ಸೂಚಿಸಿದ್ದರು.
15 ದಿನದ ಬಳಿಕ ಬರುತ್ತೇನೆ
15 ದಿನಗಳ ಬಳಿಕ ಮತ್ತೆ ಬರುವುದಾಗಿ ಮತ್ತು ಹೆಸರು ಬದಲಾವಣೆಗೆ ಅಂಗಡಿ ಮಾಲೀಕರಿಗೆ ಸಹಾಯ ಮಾಡುವುದಾಗಿ ನಿತಿನ್ ತಿಳಿಸಿದ್ದರು. ಇದು ದೊಡ್ಡ ಸುದ್ದಿಯಾಗಿದ್ದರಿಂದ ತಾವು ಸಮಸ್ಯೆಯನ್ನು ಮೈಮೇಲೆ ಎಳೆದುಕೊಳ್ಳಲು ಬಯಸುವುದಿಲ್ಲ ಎಂದು ಅಂಗಡಿ ಮಾಲೀಕರು ಹೇಳಿದ್ದರು. ಶಿವಸೇನಾ ಇದರಿಂದ ಅಂತರ ಕಾಪಾಡಿಕೊಂಡಿತ್ತು.
ಹೆಸರು ಬದಲಿಸಲು ಅರ್ಥವಿಲ್ಲ
'ಪಾಕಿಸ್ತಾನದೊಂದಿಗೆ ಅವರಿಗೆ ಯಾವ ಸಂಬಂಧವೂ ಇಲ್ಲ. ಈಗ ಹೆಸರು ಬದಲಿಸುವಂತೆ ಹೇಳುವುದರಲ್ಲಿ ಯಾವ ಅರ್ಥವೇ ಇಲ್ಲ. ಹೆಸರು ಬದಲಿಸುವಂತೆ ಒತ್ತಾಯಿಸುವುದು ಶಿವಸೇನಾದ ಅಧಿಕೃತ ನಿಲುವಲ್ಲ' ಎಂದು ಸಂಜಯ್ ರಾವತ್ ಹೇಳಿದ್ದರು.