ಕೊರೊನಾವೈರಸ್ ಮೂರನೇ ಅಲೆಗೆ ಹೇಗೆ ಸಿದ್ಧವಾಗುತ್ತಿದೆ ಮುಂಬೈ?
ಮುಂಬೈ, ಆಗಸ್ಟ್ 29: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯಿಂದ ಮಹಾರಾಷ್ಟ್ರ ಪಾಠ ಕಲಿತಿದೆ. ಕೊವಿಡ್-19 ಮೂರನೇ ಅಲೆಯನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ಬೃಹತ್ ಮುಂಬೈ ಮಹಾನಗರ ಪಾಲಿಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ.
ಮಹಾರಾಷ್ಟ್ರದಲ್ಲಿ ಕೊರೊನಾವೈರಸ್ ಮೂರನೇ ಅಲೆಯಲ್ಲಿ 60 ಲಕ್ಷಕ್ಕಿಂತ ಹೆಚ್ಚು ಸೋಂಕಿತ ಪ್ರಕರಣಗಳು ವರದಿಯಾಗಬಹುದು ಎಂದು ಅಂದಾಜಿಸಲಾಗಿದ್ದು, ಈ ನಿಟ್ಟಿನಲ್ಲಿ ಮುಂಬೈ ನಿವಾಸಿಗಳ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.
ಮುಂಬೈನಲ್ಲಿ ಗಣೇಶೋತ್ಸವ ಉತ್ಸಾಹ: 519 ಮಂಡಲಗಳಿಗೆ ಮಾತ್ರ ಅನುಮತಿ
ರಾಜ್ಯ ರಾಜಧಾನಿ ಮುಂಬೈನಲ್ಲಿ ಕೊವಿಡ್-19 ಸೋಂಕಿತರು ಮತ್ತು ರೋಗಿಗಳ ಚಿಕಿತ್ಸೆಗೆ ಮುಖ್ಯ ಅಗತ್ಯವಾಗಿರುವ ಆಮ್ಲಜನಕ ಮತ್ತು ಬೆಡ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಬಿಎಂಸಿ ಸ್ಪಷ್ಟಪಡಿಸಿದೆ. ಟೈಮ್ಸ್ ಆಫ್ ಇಂಡಿಯಾಗೆ ಪಾಲಿಕೆಯ ಹೆಚ್ಚುವರಿ ಆಯುಕ್ತ ಸುರೇಶ್ ಕಕಾನಿ ನೀಡಿರುವ ಸಂದರ್ಶನದ ಕುರಿತು ಒಂದು ವರದಿಗಾಗಿ ಮುಂದೆ ಓದಿ.
ಆಕ್ಸಿಜನ್ ಮತ್ತು ಬೆಡ್ ಕೊರತೆ ಸೃಷ್ಟಿ ಆಗುವುದಿಲ್ಲ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಮೂರನೇ ಅಲೆ ಸಂದರ್ಭದಲ್ಲಿ ಮುಖ್ಯವಾಗಿ ಜೀವ-ರಕ್ಷಕ ಎನಿಸಿರುವ ಆಕ್ಸಿಜನ್ ಕೊರತೆ ಸೃಷ್ಟಿಯಾಗದ ರೀತಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಕೊವಿಡ್-19 ಸೋಂಕಿತರ ಚಿತಿತ್ಸೆಗಾಗಿ 30,000 ಬೆಡ್ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ಆಮ್ಲಜನಕ ತುಂಬಿಸುವ ಘಟಕಗಳನ್ನು ಸ್ಥಾಪಿಸಲಾಗಿದೆ. ಆದ್ದರಿಂದ ನಗರದಲ್ಲಿ ಆಕ್ಸಿಜನ್ ಕೊರತೆಯನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ.
ಕಳೆದ ಬಾರಿ ಕೊರೊನಾವೈರಸ್ ಎರಡನೇ ಅಲೆ ಸಂದರ್ಭದಲ್ಲಿ ಬಿಎಂಸಿ ಕೊವಿಡ್--19 ರೋಗಿಗಳ ಚಿಕಿತ್ಸೆಗಾಗಿ 21,000 ಬೆಡ್ ವ್ಯವಸ್ಥೆ ಮಾಡಲಾಗಿತ್ತು. ಪ್ರಸ್ತುತದಲ್ಲಿ 30,000 ಹಾಸಿಗೆಯುಳ್ಳ ಜಂಬೋ ಬೆಡ್ ವ್ಯವಸ್ಥೆ ಮಾಡಲಾಗುತ್ತಿದೆ, ಆದರೆ ಏಕಕಾಲಕ್ಕೆ ಎಲ್ಲ ಹಾಸಿಗೆಗಳನ್ನು ಬಳಕೆ ಮಾಡುವುದಿಲ್ಲ ಎಂದು ಬಿಎಂಸಿ ಹೆಚ್ಚುವರಿ ಆಯುಕ್ತ ಸುರೇಶ್ ಕಕಾನಿ ಹೇಳಿದ್ದಾರೆ.
ಹಂತ-ಹಂತವಾಗಿ ವೈದ್ಯಕೀಯ ಸೌಲಭ್ಯ ಸಕ್ರಿಯ
"ಕೊವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ನಾವು ಸಾಕಷ್ಟು ಪಾಠಗಳನ್ನು ಕಲಿತುಕೊಂಡಿದ್ದೇವೆ. ವೈದ್ಯಕೀಯ ಸಂಪನ್ಮೂಲಗಳನ್ನು ನಾವು ಬಹಳಷ್ಟು ವಿವೇಚನೆಯಿಂದ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಂಡಿದ್ದೇವೆ. ಬೇಡಿಕೆಯಿಲ್ಲದ ಸಮಯದಲ್ಲಿ ನಾವು ಬೆಡ್ ಬಳಸಿದರೆ ಅದಕ್ಕಾಗಿ ಹೆಚ್ಚುವರಿ ವೈದ್ಯರು, ದಾದಿಯರು ಸೇರಿದಂತೆ ಸಿಬ್ಬಂದಿಯನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಮೂರನೇ ಅಲೆಯಲ್ಲಿ 10,000 ಪ್ರಕರಣಗಳೇ ಬಂದರೂ, ಹಂತ-ಹಂತವಾಗಿ ಸೌಲಭ್ಯಗಳನ್ನು ಪ್ರಾರಂಭಿಸುತ್ತೇವೆ," ಎಂದರು.
ಕೊವಿಡ್-19 ಸೋಂಕಿತರಲ್ಲಿ ಶೇ.12ರಷ್ಟು ಜನರಿಗೆ ಆಕ್ಸಿಜನ್ ಅವಶ್ಯ
ಕೊರೊನಾವೈರಸ್ ಸೋಂಕಿತರಲ್ಲಿ ಶೇ.12ರಷ್ಟು ಮಂದಿಗೆ ಆಮ್ಲಜನಕದ ಅಗತ್ಯವಿರುತ್ತದೆ ಎಂಬುದನ್ನು ತಲೆಯಲ್ಲಿ ಇಟ್ಟುಕೊಂಡು ಸರ್ಕಾರ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ ಎಂದು ರಾಜ್ಯ ಆರೋಗ್ಯ ಸಚಿವ ರಾಜೇಶ್ ತೊಪೆ ಹೇಳಿದ್ದಾರೆ. ಈ ಹಿನ್ನೆಲೆ ಆಕ್ಸಿಜನ್ ಲಭ್ಯತೆಯನ್ನು ಹೆಚ್ಚಿಸಿದ್ದು 2,000 ಮೆಟ್ರಿಕ್ ಟನ್ ಆಮ್ಲಜನಕ ಉತ್ಪಾದಿಸುವ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲಾಗಿದೆ," ಎಂದು ತಿಳಿಸಿದ್ದಾರೆ. ಎರಡನೇ ಅಲೆಯ ಅಂತ್ಯದ ವೇಳೆಗೆ ಬಿಎಂಸಿ ಕೇಂದ್ರ ಆಮ್ಲಜನಕ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದು, ಅದರಿಂದ ಆಕ್ಸಿಜನ್ ಅಗತ್ಯತೆಯು ಶೇ.30ರಷ್ಟು ಕಡಿಮೆಯಾಗಿತ್ತು ಎಂದರು.
ಒಂದೇ ದಿನದಲ್ಲಿ 1.36 ಲಕ್ಷ ಜನರಿಗೆ ಕೊರೊನಾವೈರಸ್
ಕಳೆದ ಮಾರ್ಚ್ 11ರಂದು ಕೊರೊನಾವೈರಸ್ ಎರಡನೇ ಅಲೆಯು ಉತ್ತುಂಗದಲ್ಲಿದ್ದ ಸಂದರ್ಭದಲ್ಲಿ ಒಂದೇ ದಿನ 91,000 ಹೊಸ ಪ್ರಕರಣಗಳು ವರದಿಯಾಗಿದ್ದವು. ಅದೇ ರೀತಿ ಕೊವಿಡ್-19 ಮೂರನೇ ಅಲೆಯು ಹೆಚ್ಚಾಗಿರುವ ಸಂದರ್ಭದಲ್ಲಿ ದಿನಕ್ಕೆ 1.36 ಲಕ್ಷ ಜನರಿಗೆ ಸೋಂಕು ತಗುಲುವ ಅಪಾಯವಿರುತ್ತದೆ ಎಂದು ಸರ್ಕಾರ ಅಂದಾಜಿಸಿದೆ. ಕಳೆದ ಬಾರಿ ಅತಿಹೆಚ್ಚು ಹೊಸ ಪ್ರಕರಣ ವರದಿಯಾಗುತ್ತಿದ್ದ ಸಮಯದಲ್ಲಿ 88,823 ಸೋಂಕಿತರಿಗೆ ಗೃಹ ದಿಗ್ಬಂಧನಕ್ಕೆ ಸೂಚಿಸಲಾಗಿತ್ತು. 47,928 ಸೋಂಕಿತರು ಆಸ್ಪತ್ರೆಗೆ ದಾಖಲಾಗಿದ್ದರೆ, 957 ರೋಗಿಗಳು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಹಬ್ಬಗಳ ಬೆನ್ನಲ್ಲೇ ಸೋಂಕಿತರ ಸಂಖ್ಯೆ ಏರಿಕೆ
ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆ ಸಂದರ್ಭದಲ್ಲಿ ಮಹಮಾರಿಯಿಂದ ನಲುಗಿದ ನಗರಗಳ ಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿತ್ತು. ಮೂರನೇ ಅಲೆಯಲ್ಲೂ ಅದೇ ಪರಿಸ್ಥಿತಿ ಮರುಕಳಿಸುವ ಅಪಾಯವಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಬ್ಬಹರಿದಿನಗಳ ಹೊಸ್ತಿಲಿನಲ್ಲಿ ಕೊವಿಡ್-19 ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬರುತ್ತಿದೆ. ಆಗಸ್ಟ್ 30ರಂದು ಶ್ರೀಕೃಷ್ಣ ಜನ್ಮಾಷ್ಠಮಿ, ಸಪ್ಟೆಂಬರ್ 3 ರಿಂದ 10ರವರೆಗೂ ಜೈನ್ ಪರ್ಯುಶನ, ಸಪ್ಟೆಂಬರ್ 10 ರಿಂದ 19ರವರೆಗೂ ಗಣೇಶ ಚತುರ್ಥಿ ಸೇರಿದಂತೆ ಅದೇ ರೀತಿ ನವಂಬರ್ 4ರ ದೀಪಾವಳಿವರೆಗೂ ಸಾಲುಸಾಲು ಹಬ್ಬಗಳು ಬರುತ್ತವೆ. ಈ ಅವಧಿಯಲ್ಲಿ ಹೆಚ್ಚು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿಕೊಳ್ಳುವುದು ಅತ್ಯಗತ್ಯವಾಗಿದೆ.