'ಪಿಎಂ ಕೇರ್ ಅಡಿ ಲಭಿಸಿದ ವೆಂಟಿಲೇಟರ್ನ ದೋಷ ಸಾವಿಗೆ ಕಾರಣವಾದರೆ ಕೇಂದ್ರವೇ ಹೊಣೆ' : ಬಾಂಬೆ ಹೈಕೋರ್ಟ್
ಮುಂಬೈ, ಜೂ. 03: ಗುಜರಾತ್ ಕಂಪನಿಯೊಂದು ಪಿಎಂ ಕೇರ್ಸ್ ಫಂಡ್ ಮೂಲಕ ಸರಬರಾಜು ಮಾಡಿದ ಯಾವುದೇ ದೋಷಯುಕ್ತ ವೆಂಟಿಲೇಟರ್ಗಳು ಕೋವಿಡ್ -19 ರೋಗಿಗಳ ಸಾವಿಗೆ ಕಾರಣವಾದರೆ ಅದಕ್ಕೆ ಕೇಂದ್ರವೇ ಹೊಣೆಯಾಗಲಿದೆ ಎಂದು ಬಾಂಬೆ ಹೈಕೋರ್ಟ್ ವೆಂಟಿಲೇಟರ್ ವಿಚಾರದಲ್ಲಿ ಮಹತ್ವದ ತೀರ್ಪಿನ್ನು ನೀಡಿದೆ.
ಬುಧವಾರ ತನ್ನ ತೀರ್ಪಿನಲ್ಲಿ ನ್ಯಾಯಮೂರ್ತಿ ರವೀಂದ್ರ ಗೂಗೆ ಹಾಗೂ ನ್ಯಾಯಮೂರ್ತಿ ಬಿ.ಯು. ದೇಬಾದ್ವಾರ್, "ರೋಗಿಗಳಿಗೆ ಚಿಕಿತ್ಸೆ ನೀಡುವ ಸಂದರ್ಭದಲ್ಲೇ ಹಲವಾರು ಬಾರಿ ರಿಪೇರಿ ಮಾಡಬೇಕಾದ ವೆಂಟಿಲೇಟರ್ಗಳ ಉಪಯೋಗ ಸರಿಯಲ್ಲ. ಇದು ರೋಗಿಗಳಿಗೆ ಅಪಾಯವನ್ನುಂಟುಮಾಡುತ್ತದೆ. ದುರದೃಷ್ಟವಶಾತ್, ಅಂತಹ ವೆಂಟಿಲೇಟರ್ಗಳ ಬಳಕೆಯು ಪ್ರಾಣ ಹಾನಿಗೆ ಕಾರಣವಾಗಬಹುದು'' ಎಂದು ಹೇಳಿದ್ದಾರೆ.
ಎಲ್ಗರ್ ಪರಿಷದ್ ಪ್ರಕರಣ: ಆಸ್ಪತ್ರೆಗೆ ಸ್ಟಾನ್ ಸ್ವಾಮಿ ದಾಖಲಿಸಲು ಬಾಂಬೆ ಹೈಕೋರ್ಟ್ ಅನುಮತಿ
ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಮತ್ತು ಸಫ್ದರ್ಜಂಗ್ ಆಸ್ಪತ್ರೆಯಿಂದ ತಲಾ ಒಬ್ಬರ ತಜ್ಞ ವೈದ್ಯರ ತಂಡ ದೋಷಯುಕ್ತ ವೆಂಟಿಲೇಟರ್ಗಳನ್ನು ಪರೀಕ್ಷಿಸಲು ಗುರುವಾರ ಔರಂಗಾಬಾದ್ (ಜಿಎಂಸಿಎಚ್) ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಭೇಟಿ ನೀಡಲು ಸೂಚಿಸಿದ ನ್ಯಾಯಾಲಯ ದೋಷಯುಕ್ತ ವೆಂಟಿಲೇಟರ್ಗಳನ್ನು ಪರಿಶೀಲಿಸಿದ ಬಳಿಕ ವಿಚಾರಣೆ ನಡೆಸುವ ನಿಟ್ಟಿನಲ್ಲಿ ವಿಚಾರಣೆಯನ್ನು ಜೂನ್ 7 ಕ್ಕೆ ಮುಂದೂಡಿದೆ.
ಪಿಎಂ ಕೇರ್ಸ್ ಫಂಡ್ ಅಡಿಯಲ್ಲಿ ಏಪ್ರಿಲ್ನಲ್ಲಿ ರಾಜ್ಕೋಟ್ ಮೂಲದ ಜ್ಯೋತಿ ಸಿಎನ್ಸಿ ಸರಬರಾಜು ಮಾಡಿದ150 ವೆಂಟಿಲೇಟರ್ಗಳಲ್ಲಿ ಕನಿಷ್ಠ 113 ದೋಷಯುಕ್ತವಾಗಿರುವುದು ಮೇ 18 ರಂದು ಕಂಡು ಬಂದಿದ್ದು ಈ ಹಿನ್ನೆಲೆ ಆಸ್ಪತ್ರೆಯು ಉಳಿದ 37 ವೆಂಟಿಲೇಟರ್ಗಳನ್ನು ಉಪಯೋಗಿಸಿಲ್ಲ.
ಈ ಬಗ್ಗೆ ಮೇ 25 ರಂದು ನ್ಯಾಯಾಲಯವು ವಿಚಾರಣೆ ನಡೆಸಿದ್ದು ಕೇಂದ್ರ ಸರ್ಕಾವನ್ನು ತರಾಟೆಗೆ ತೆಗೆದುಕೊಂಡಿತ್ತು. ಈ ಬಗ್ಗೆ ಪರಿಹಾರ ಕ್ರಮ ಏನು ಎಂದು ತಿಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್, ''ಕೇಂದ್ರ ಸರ್ಕಾರ ಕೆಳಮಟ್ಟದ ವೆಂಟಿಲೇಟರ್ ಪೂರೈಸಿದ್ದಾರೆಂದು ಅರಿತುಕೊಳ್ಳಲಿ'' ಎಂದು ಹೇಳಿತ್ತು. ವೆಂಟಿಲೇಟರ್ ಹಿಂದಿರುಗಿಸುವಂತೆಯೂ ತಿಳಿಸಿತ್ತು.
'ಕಳಪೆ ವೆಂಟಿಲೇಟರ್' ಪೂರೈಸಿದ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
"ಇದು ತುಂಬಾ ಗಂಭೀರವಾದ ವಿಷಯವಾಗಿದೆ, ನೀವು ವೆಂಟಿಲೇಟರ್ ಅನ್ನು ಏಕೆ ವಾಪಸ್ ಕಳುಹಿಸಬಾರದು? ಕೇಂದ್ರ ಸಚಿವಾಲಯವು ಅದನ್ನು ನಿಮಗೆ ನೀಡಿದ್ದನ್ನು ನಾವು ಪ್ರಶಂಸಿಸುತ್ತೇವೆ, ಆದರೆ ಇದು ರೋಗಿಗೆ ಆರೋಗ್ಯಕ್ಕೆ ಅಪಾಯಕಾರಿಯಾಗಿದ್ದರೆ, ನೀವು ಅದನ್ನು ಬಳಸಲಾಗುವುದಿಲ್ಲ. ಈ ವೆಂಟಿಲೇಟರ್ಗಳನ್ನು ನೀವು ಸರ್ಕಾರಕ್ಕೆ ವಾಪಸ್ ಕಳುಹಿಸುವುದು ಉತ್ತಮ" ಎಂದು ಬಾಂಬೆ ಹೈಕೋರ್ಟ್ ತಿಳಿಸಿತ್ತು.
(ಒನ್ಇಂಡಿಯಾ ಸುದ್ದಿ)