ಯಾವುದೇ ಪ್ರತಿರೋಧವಿಲ್ಲದೆ ಒಬ್ಬನೇ ವ್ಯಕ್ತಿ ಅತ್ಯಾಚಾರ ಮಾಡಲು ಅಸಾಧ್ಯ: ಬಾಂಬೆ ಹೈಕೋರ್ಟ್
ಮುಂಬೈ, ಜನವರಿ 29: ವಿವಾದಾತ್ಮಕ ತೀರ್ಪುಗಳಿಂದ ಸುದ್ದಿಯಾಗುತ್ತಿರುವ ಬಾಂಬೆ ಹೈಕೋರ್ಟ್ನ ನಾಗಪುರ ಪೀಠದ ನ್ಯಾಯಮೂರ್ತಿ ಪುಷ್ಪಾ ಗಣೇದಿವಾಲ ಇನ್ನೊಂದು ಪ್ರಶ್ನಾರ್ಹ ತೀರ್ಪು ನೀಡಿದ್ದಾರೆ. ಅತ್ಯಾಚಾರ ಆರೋಪದಿಂದ ವ್ಯಕ್ತಿಯೊಬ್ಬರನ್ನು ಖುಲಾಸೆಗೊಳಿಸಿರುವ ಅವರು, 'ಒಬ್ಬನೇ ವ್ಯಕ್ತಿ ಸಂತ್ರಸ್ತೆಯ ಬಾಯಿ ಮುಚ್ಚಿ, ಆಕೆಯ ಮತ್ತು ತನ್ನ ಬಟ್ಟೆಗಳನ್ನು ತೆಗೆದು, ಯಾವುದೇ ಪ್ರತಿರೋಧಗಳಿಲ್ಲದೆ ಅತ್ಯಾಚಾರ ನಡೆಸುವುದು ತೀರಾ ಅಸಾಧ್ಯ' ಎಂದಿದ್ದಾರೆ.
'ಒಬ್ಬನೇ ವ್ಯಕ್ತಿ ಸಂತ್ರಸ್ತೆಯ ಬಾಯಿಗೆ ಬಟ್ಟೆ ತುರುಕಲು, ಆಕೆಯ ಬಟ್ಟೆಗಳು ಮತ್ತು ತನ್ನ ಬಟ್ಟೆಗಳನ್ನು ಕಳಚಿ, ಯಾವುದೇ ಪ್ರತಿರೋಧಗಳಿಲ್ಲದೆ ಬಲವಂತಹದ ಲೈಂಗಿಕ ಕ್ರಿಯೆ ನಡೆಸುವುದು ತೀರಾ ಅಸಂಭವ. ಸಂತ್ರಸ್ತೆ ಮಾಡಿರುವ ಆರೋಪಗಳಿಗೆ ವೈದ್ಯಕೀಯ ಪುರಾವೆಗಳೂ ಬೆಂಬಲ ನೀಡುವುದಿಲ್ಲ' ಎಂದು ಅವರು ಹೇಳಿದ್ದಾರೆ.
ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ವಿವಾದ ಸೃಷ್ಟಿಸಿದ ಬಾಂಬೆ ಹೈಕೋರ್ಟ್ ತೀರ್ಪು
2013ರ ಜುಲೈ 26ರಂದು ಯಾವತ್ಮಾಲ್ನ ಸಂತ್ರಸ್ತೆಯ ತಾಯಿ ತನ್ನ ನೆರೆ ಮನೆಯ, 26 ವರ್ಷದ ಸೂರಜ್ ಕಾಸರ್ಕರ್ ಎಂಬಾತನ ವಿರುದ್ಧ ದೂರು ನೀಡಿದ್ದರು. ಘಟನೆ ನಡೆದ ಸಂದರ್ಭದಲ್ಲಿ ತನ್ನ ಮಗಳು 15 ವರ್ಷದವಳಾಗಿದ್ದಳು ಎಂದು ತಾಯಿ ತಿಳಿಸಿದ್ದರು. ಆಕೆಯ ದೂರಿನ ಆಧಾರದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿ ಆರೋಪಪಟ್ಟಿ ಸಲ್ಲಿಸಿದ್ದರು. ಮುಂದೆ ಓದಿ.
ಸಾಬೀತಾಗದ ವಯಸ್ಸು
ವಿಚಾರಣೆ ನಡೆಸಿದ್ದ ವಿಶೇಷ ವಿಚಾರಣಾ ನ್ಯಾಯಾಲಯ, ಅತ್ಯಾಚಾರ ಆರೋಪ ಹಾಗೂ ಅಪರಾಧ ಕ್ರಿಯೆಗಳನ್ನು ಪ್ರಾಸಿಕ್ಯೂಷನ್ ಸಾಬೀತುಪಡಿಸಿದರೂ, ಘಟನೆ ನಡೆದ ಸಂದರ್ಭದಲ್ಲಿ ಸಂತ್ರಸ್ತೆ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವಳು ಎಂದು ಸಾಬೀತುಪಡಿಸಿಲ್ಲ ಎಂದು ಹೇಳಿತ್ತು. ಸಂತ್ರಸ್ತೆಯು 18 ವರ್ಷಕ್ಕಿಂತ ಹೆಚ್ಚು ವಯಸ್ಕಳಾಗಿದ್ದು, ಇಬ್ಬರ ಸಮ್ಮತಿಯೊಂದಿಗೆ ಲೈಂಗಿಕ ಕ್ರಿಯೆ ನಡೆದಿದೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದರು.
ಪ್ಯಾಂಟ್ ಜಿಪ್ ತೆರೆಯುವುದು ಪೋಕ್ಸೋ ಅಡಿ 'ಲೈಂಗಿಕ ದೌರ್ಜನ್ಯ'ವಲ್ಲ: ಮತ್ತೊಂದು ವಿವಾದಾತ್ಮಕ ತೀರ್ಪು
ಸಂತ್ರಸ್ತೆ ಹೇಳಿಕೆಯೇನು?
'ರಾತ್ರಿ 9.30ರ ಸಮಯದಲ್ಲಿ ನಾನು ಮನೆಯ ಮಂಚದಲ್ಲಿ ಮಲಗಿದ್ದೆ. ನನ್ನ ತಮ್ಮ ನೆಲದ ಮೇಲೆ ಮಲಗಿದ್ದ. ತಾಯಿ ನೈಸರ್ಗಿಕ ಕರೆ ನಿಮಿತ್ತ ಹೊರ ಹೋಗಿದ್ದರು. ಆರೋಪಿ ಸೂರಜ್ ಮನೆಯೊಳಗೆ ಬಂದಿದ್ದ, ಆತ ಕುಡಿದ ನಶೆಯಲ್ಲಿದ್ದ. ನಾನು ಕೂಗದಂತೆ ಬಾಯಿಯನ್ನು ಮುಚ್ಚಿದ. ತನ್ನ ಬಟ್ಟೆಗಳನ್ನು ತೆಗೆದು ಹಾಕಿದ ಮತ್ತು ನನ್ನ ಬಟ್ಟೆಗಳನ್ನು ಕಳಚಿದ.
ಇದರ ಬಳಿಕ ನನ್ನ ಮೇಲೆ ಅತ್ಯಾಚಾರ ಎಸಗಿ, ತನ್ನ ಬಟ್ಟೆಗಳನ್ನು ಹಿಡಿದುಕೊಂಡು ಪರಾರಿಯಾದ. ನಂತರ ನನ್ನ ಅಮ್ಮ ಮನೆಗೆ ಬಂದಾಗ ನಡೆದ ಘಟನೆಯನ್ನೆಲ್ಲ ವಿವರಿಸಿದೆ. ಇಬ್ಬರೂ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದೆವು' ಎಂದು ಸಂತ್ರಸ್ತೆ ಹೇಳಿದ್ದಾರೆ.
ದೂರಿನಲ್ಲಿ ದಾಖಲಾಗಿರುವಂತೆ ಸಂತ್ರಸ್ತೆ 15 ವರ್ಷದವಳು. ಆದರೆ ಆಕೆಯ ಜನ್ಮದಿನ ಪ್ರಮಾಣಪತ್ರ ಹಾಗೂ ಇತರೆ ದಾಖಲೆಗಳನ್ನು ಪರಿಶೀಲಿಸಿದಾಗ ಆಕೆ 18 ವರ್ಷ ಪ್ರಾಯ ಮೀರಿದ್ದಾಳೆ ಎನ್ನುವುದು ಕಂಡುಬರುತ್ತದೆ ಎಂದು ನ್ಯಾಯಮೂರ್ತಿ ಹೇಳಿದ್ದಾರೆ.
ಗಾಯದ ಕುರುಹು ಇಲ್ಲ
'ಸಂತ್ರಸ್ತೆಯ ಹೇಳಿಕೆಗೂ ದಾಖಲೆಗಳಿಗೂ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ಇದು ಬಲವಂತದ ಲೈಂಗಿಕ ಕ್ರಿಯೆ ಆಗಿದ್ದರೆ ಇಬ್ಬರ ನಡುವೆ ಮಾರಾಮಾರಿಯಾಗಬೇಕಿತ್ತು. ವೈದ್ಯಕೀಯ ವರದಿ ಪ್ರಕಾರ ಇಂತಹ ತಳ್ಳಾಟ, ಘರ್ಷಣೆಯಿಂದ ಯಾವುದೇ ಗಾಯಗಳಾದ ಕುರುಹು ಇಲ್ಲ. ಇಲ್ಲಿ ಪರಸ್ಪರ ಒಪ್ಪಿತ ಲೈಂಗಿಕ ಸಂಬಂಧ ನಡೆದಿರುವಂತೆ ಕಾಣಿಸುತ್ತದೆ. ನನ್ನ ತಾಯಿ ಬಾರದೆ ಹೋಗಿದ್ದರೆ ನಾನು ದೂರು ನೀಡುತ್ತಿರಲಿಲ್ಲ ಎಂದು ಸಂತ್ರಸ್ತೆ ಒಪ್ಪಿಕೊಂಡಿದ್ದಾಳೆ' ಎಂದು ನ್ಯಾ. ಪುಷ್ಪಾ ತಿಳಿಸಿದ್ದಾರೆ.
ಶಿಕ್ಷೆ ನೀಡುವುದು ಅನ್ಯಾಯ
'ಇದು ಬಲವಂತದ ದೈಹಿಕ ಸಂಪರ್ಕವಾಗಿರಲು ಸಾಧ್ಯವಿಲ್ಲ. ಈಗಿನ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಗೆ, ಬಲವಾದ ಪುರಾವೆಗಳು ಅಗತ್ಯವಾಗಿದೆ. ಆರೋಪಿ ವಿರುದ್ಧ ಅಪರಾಧ ಹೊಣೆಗಾರಿಕೆಯನ್ನು ಹೊರಿಸಲು ಸಂತ್ರಸ್ತೆಯ ಹೇಳಿಕೆ ಸಾಕು. ಆದರೆ ಈ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಗಮನಿಸಿದರೆ, ಆರೋಪಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸುವುದು ಅನ್ಯಾಯವಾಗುತ್ತದೆ' ಎಂದ ಅವರು, ವಿಚಾರಣಾ ನ್ಯಾಯಾಲಯ ವಿಧಿಸಿದ್ದ 10 ವರ್ಷ ಶಿಕ್ಷೆಯನ್ನು ವಜಾಗೊಳಿಸಿತು.
ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ: ಬಾಂಬೆ ಹೈಕೋರ್ಟ್ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ತಡೆ