ಭ್ರಷ್ಟಾಚಾರ ಆರೋಪ: ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ಗೆ ಸಂಕಷ್ಟ
ಮುಂಬೈ, ಏಪ್ರಿಲ್ 5: ಭ್ರಷ್ಟಾಚಾರ ಆರೋಪ ಪ್ರಕರಣದಲ್ಲಿ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಅವರಿಗೆ ಸಂಕಷ್ಟ ಎದುರಾಗಿದೆ. ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಅವರು ಮಾಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ 15 ದಿನಗಳ ಒಳಗೆ ಪ್ರಾಥಮಿಕ ವರದಿ ಸಲ್ಲಿಸುವಂತೆ ಸಿಬಿಐಗೆ ಬಾಂಬೆ ಹೈಕೋರ್ಟ್ ಸೋಮವಾರ ಸೂಚನೆ ನೀಡಿದೆ.
ಸತ್ಯವನ್ನು ಹೊರತೆಗೆಯಲು ನಿಷ್ಪಕ್ಷಪಾತ ತನಿಖೆಗಾಗಿ ಆದೇಶಿಸುವ ಅಗತ್ಯವಿದೆ ಎಂದು ಡಾ. ಜಯಶ್ರೀ ಪಾಟೀಲ್ ಎಂಬುವವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಈ ಆದೇಶ ನೀಡಿದೆ.
ಸರ್ಕಾರಿ ಅಧಿಕಾರಿಗಳಿಗೆ ಪ್ರತಿ ತಿಂಗಳೂ ಲಂಚ ನೀಡಿದ ದಾಖಲೆಗಳನ್ನು ವಶಪಡಿಸಿಕೊಂಡ ಎನ್ಐಎ
'ಅನಿಲ್ ದೇಶ್ಮುಖ್ ಅವರು ಗೃಹ ಸಚಿವರಾಗಿರುವುದರಿಂದ ಪೊಲೀಸರಿಗೆ ತನಿಖೆ ಅವಕಾಶ ನೀಡಿದರೆ ಇಲ್ಲಿ ಸ್ವತಂತ್ರ ತನಿಖೆ ಸಾಧ್ಯವಾಗುವುದಿಲ್ಲ. ಪ್ರಾಥಮಿಕ ತನಿಖೆ ನಡೆಸುವಂತೆ ಸಿಬಿಐ ನಿರ್ದೇಶಕರಿಗೆ ಅವಕಾಶ ನೀಡಿದರೆ ನ್ಯಾಯದ ಹಿತಾಸಕ್ತಿ ಸಾಧ್ಯವಾಗಲಿದೆ. ಕಾನೂನಿಗೆ ಅನುಗುಣವಾಗಿ ತನಿಖೆ ನಡೆಯಬೇಕು ಮತ್ತು 15 ದಿನಗಳ ಒಳಗೆ ಮುಕ್ತಾಯವಾಗಬೇಕು. ಒಮ್ಮೆ ಪ್ರಾಥಮಿಕ ತನಿಖೆ ಮುಗಿದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ವಿವೇಚನೆಯನ್ನು ಸಿಬಿಐ ನಿರ್ದೇಶಕರಿಗೆ ಬಿಡಲಾಗುತ್ತದೆ' ಎಂದು ನ್ಯಾಯಾಲಯ ಹೇಳಿತು.
ಅನಿಲ್ ದೇಶ್ಮುಖ್ ವಿರುದ್ಧ ಎಫ್ಐಆರ್ ಏಕಿಲ್ಲ?: ಪರಮ್ ಬೀರ್ ಸಿಂಗ್ಗೆ ಕೋರ್ಟ್ ಪ್ರಶ್ನೆ
ಪ್ರತಿ ತಿಂಗಳೂ 100 ಕೋಟಿ ವಸೂಲಿ ಮಾಡಿ ನೀಡುವಂತೆ ಕೆಲವು ಪೊಲೀಸ್ ಅಧಿಕಾರಿಗಳಿಗೆ ಅನಿಲ್ ದೇಶ್ಮುಖ್ ಆದೇಶಿಸಿದ್ದರು ಎಂದು ಪರಮ್ ಬೀರ್ ಸಿಂಗ್ ಆರೋಪಿಸಿದ್ದರು. ಈ ಸಂಬಂಧ ತನಿಖೆ ನಡೆಸುವಂತೆ ಪರಮ್ ಬೀರ್ ಸೇರಿದಂತೆ ಅನೇಕರು ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಜಯಶ್ರೀ ಪಾಟೀಲ್ ಎಂಬುವವರ ಅರ್ಜಿ ವಿಚಾರಣೆ ನಡೆಸಿ ಈ ಆದೇಶ ನೀಡಿದ ನ್ಯಾಯಾಲಯ, ಪರಮ್ ಬೀರ್ ಸಿಂಗ್, ವಕೀಲರಾದ ಘನಶ್ಯಾಮ್ ಉಪಾಧ್ಯಾಯ್ ಮತ್ತು ಮೋಹನ್ ಭಿಡೆ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿತು.