ವರವರ ರಾವ್ ಜಾಮೀನು ಅರ್ಜಿ ತಿರಸ್ಕೃತ: ಖಾಸಗಿ ವೈದ್ಯರಿಂದ ತಪಾಸಣೆಗೆ ಸೂಚನೆ
ಮುಂಬೈ, ನವೆಂಬರ್ 12: ಎಲ್ಗರ್ ಪರಿಷದ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ತೆಲುಗು ಕವಿ ವರವರ ರಾವ್ ಅವರ ಜಾಮೀನು ಅರ್ಜಿಯನ್ನು ಬಾಂಬೆ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ನವೆಂಬರ್ 17ರಂದು ಮುಂದಿನ ವಿಚಾರಣೆಯನ್ನು ಅದು ಕೈಗೆತ್ತಿಕೊಳ್ಳಲಿದೆ.
81 ವರ್ಷದ ವರವರ ರಾವ್ ಅವರ ವೈದ್ಯಕೀಯ ಪರೀಕ್ಷೆಯನ್ನು ವಿಡಿಯೋ ಸಂಪರ್ಕದ ಮೂಲಕ ಮುಂಬೈನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ತಂಡ ನಡೆಸುವಂತೆ ಹೈಕೋರ್ಟ್ ಸೂಚಿಸಿದೆ. ಅವರು ನವಿ ಮುಂಬೈನ ತಲೋಜಾ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ.
ಕವಿ, ಹೋರಾಟಗಾರ ವರವರ ರಾವ್ಗೆ ಕೊರೊನಾ ಸೋಂಕು
ವರವರ ರಾವ್ ಅವರನ್ನು ಉತ್ತಮ ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ವರ್ಗಾಯಿಸುವಂತೆ, ಅವರ ಆರೋಗ್ಯದ ಕುರಿತು ಸ್ವತಂತ್ರ ವೈದ್ಯಕೀಯ ಮಂಡಳಿ ತಪಾಸಣೆ ನಡೆಸುವಂತೆ ಮತ್ತು ಅವರಿಗೆ ಜಾಮೀನು ಮಂಜೂರು ಮಾಡುವಂತೆ ಅವರ ಪತ್ನಿ ಹೇಮಲತಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎ.ಕೆ. ಮೆನನ್ ವಿಚಾರಣೆ ನಡೆಸಿದರು.
ರಾವ್ ಪರ ವಕೀಲರಾದ ಇಂದಿರಾ ಜೈಸಿಂಗ್, ಅವರ ಆರೋಗ್ಯ ಕ್ಷೀಣಿಸುತ್ತಿದೆ ಮತ್ತು ಅವರು ಜೈಲಿನಲ್ಲಿಯೇ ಕೊನೆಯುಸಿರು ಎಳೆಯುವ ಅಪಾಯಕಾರಿ ಸ್ಥಿತಿ ಉಂಟಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾವ್ ಅವರು ಡೆಮೆಂಷಿಯಾದಿಂದ ಬಳಲುತ್ತಿದ್ದು, ಆಗಸ್ಟ್ನಿಂದ ಜೈಲಿನ ಆಸ್ಪತ್ರೆಯಲ್ಲಿ ಹಾಸಿಗೆ ಹಿಡಿದಿದ್ದಾರೆ. ಅವರು ಡೈಪರ್ ಬಳಸುವ ಸ್ಥಿತಿ ಇದೆ. ಒಂದು ವೇಳೆ ಅವರು ಜೈಲಿನಲ್ಲಿಯೇ ಮೃತಪಟ್ಟರೆ ಅದು ವಶದಲ್ಲಿಯೇ ಸಾವು ಎಂದಾಗಲಿದೆ ಎಂದ ಜೈಸಿಂಗ್, ರಾವ್ ಬಂಧನವು 21ನೇ ವಿಧಿಯಡಿ ವಾಸಿಸುವ ಹಕ್ಕನ್ನು ಉಲ್ಲಂಘಿಸಿದೆ ಎಂದರು.
ಜೈಲಿನಲ್ಲಿರುವ ರಾವ್ ಅವರನ್ನು ನಾನಾವತಿ ಆಸ್ಪತ್ರೆಯ ವೈದ್ಯರ ತಂಡ ತಪಾಸಣೆ ನಡೆಸುವಂತೆ ಹೈಕೋರ್ಟ್ ಆರಂಭದಲ್ಲಿ ಸಲಹೆ ನೀಡಿತ್ತು. ಆದರೆ ಇದಕ್ಕೆ ಎನ್ಐಎ ವಿರೋಧ ವ್ಯಕ್ತಪಡಿಸಿತು. ಕೈದಿಗಳು ತಮ್ಮ ವೈದ್ಯರನ್ನು ಆಯ್ಕೆ ಮಾಡಲು ಸಾಧ್ಯವಿಲ್ಲ. ಅದಕ್ಕೆ ಅವಕಾಶ ನೀಡುವುದು ತಪ್ಪು ಸಂದೇಶ ನೀಡುತ್ತದೆ. ನಾಳೆ ಪ್ರತಿ ಕೈದಿಗಳೂ ನಾನಾವತಿ ಆಸ್ಪತ್ರೆಗೆ ವರ್ಗಾಯಿಸುವಂತೆ ಕೋರುತ್ತಾರೆ. ಅಲ್ಲದೆ, ನಮ್ಮ ಸರ್ಕಾರಿ ವೈದ್ಯರು ಮತ್ತು ಆಸ್ಪತ್ರೆಗಳನ್ನು ಕಡೆಗಣಿಸಬಾರದು ಎಂದು ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ವಾದಿಸಿದರು.