ಲೇಖಕ ಟಾಲ್ಸ್ಟಾಯ್ ಭಯೋತ್ಪಾದಕರೇ? ಕೋರ್ಟ್ಗೂ ಅನುಮಾನ!
ಮುಂಬೈ, ಆಗಸ್ಟ್ 29: ತಮ್ಮ ಚಿಂತನಾಶೀಲ ಬರಹಗಳ ಮೂಲಕ ಗಮನ ಸೆಳೆದ, ನೊಬೆಲ್ ಪುರಷ್ಕೃತ ರಷ್ಯಾದ ಖ್ಯಾತ ಲೇಖಕ ಲಿಯೋ ಟಾಲ್ಸ್ಟಾಯ್ ಒಬ್ಬ ಭಯೋತ್ಪಾದಕರೇ? ಹಾಗೊಂದು ಅನುಮಾನ ಪೊಲೀಸರಲ್ಲಿ ಮಾತ್ರವಲ್ಲ, ಬಾಂಬೆ ಹೈಕೋರ್ಟ್ನಲ್ಲಿಯೂ ಉಂಟಾಗಿದೆ.
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಬಂಧಿತರಾಗಿರುವ ವೆರ್ನನ್ ಗೋನ್ಸಲ್ವೆಸ್ ಅವರು ತಮ್ಮ ಮನೆಯಲ್ಲಿ ಲಿಯೋ ಟಾಲ್ಸ್ಟಾಯ್ ಬರೆದ 'ವಾರ್ ಆಂಡ್ ಪೀಸ್' ಪುಸ್ತಕದಂತಹ 'ಆಕ್ಷೇಪಾರ್ಹ ವಸ್ತು'ಗಳನ್ನು ಏಕೆ ಇರಿಸಿಕೊಂಡಿದ್ದರು ಎಂಬ ಬಗ್ಗೆ ವಿವರಣೆ ನೀಡುವಂತೆ ಬಾಂಬೆ ಹೈಕೋರ್ಟ್ ಹೇಳಿದೆ.
ದಲಿತರ ಭೀಮಾ ಕೋರೆಗಾಂವ್ ಕದನದ ಇತಿಹಾಸ
ಗೋನ್ಸಲ್ವೆಸ್ ಮತ್ತು ಇತರೆ ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಾರಂಗ್ ಕೋತ್ವಾಲ್ ಅವರ ಏಕಸದಸ್ಯ ನ್ಯಾಯಪೀಠ, 'ಅಂತಹ ಪುಸ್ತಕ'ಗಳು ಮತ್ತು ಸಿ.ಡಿಗಳು ದೇಶದ ವಿರುದ್ಧವಾದ ಕೆಲವು ವಸ್ತುಗಳನ್ನು ಅವರು ಹೊಂದಿದ್ದಾರೆ ಎನ್ನುವುದನ್ನು ಮೇಲ್ನೋಟಕ್ಕೆ ಸೂಚಿಸುತ್ತದೆ ಎಂಬುದಾಗಿ ಹೇಳಿದ್ದಾರೆ.
ಭೀಮಾ ಕೋರೆಗಾಂವ್ ಪ್ರಕರಣದ ತನಿಖೆ ನಡೆಸುವ ವೇಳೆ ಪುಣೆ ಪೊಲೀಸರು ಒಂದು ವರ್ಷದ ಹಿಂದೆ ಗೋನ್ಸಲ್ವೆಸ್ ನಿವಾಸದ ಮೇಲೆ ದಾಳಿ ನಡೆಸಿದಾಗ ಪುಸ್ತಕವನ್ನು ವಶಪಡಿಸಿಕೊಂಡಿದ್ದರು. ರಷ್ಯಾದ ನೆಪೋಲಿಯೋನಿಕ್ ಯುದ್ಧದ ಕುರಿತಾದ ವಸ್ತುವುಳ್ಳ ಪುಸ್ತಕವು ತಾವು ವಶಪಡಿಸಿಕೊಂಡ ಮಹತ್ವದ ಪುರಾವೆಗಳಲ್ಲಿ ಒಂದು ಎಂದು ಪೊಲೀಸರು ನ್ಯಾಯಾಲಯಕ್ಕೆ ಹೇಳಿದ್ದರು.
ಆಕ್ಷೇಪಾರ್ಹ ವಸ್ತುವಿಗೆ ವಿವರಣೆ ನೀಡಿ
'ರಾಜ್ಯ ದಮನ್ ವಿರೋಧಿ', 'ಮಾರ್ಕ್ಸಿಸ್ಟ್ ಆರ್ಕೈವ್ಸ್' ಮತ್ತು 'ಜೈ ಭೀಮಾ ಕಾಮ್ರೇಡ್'ನಂತಹ ಸಿಡಿಗಳು ಹಾಗೂ 'ವಾರ್ ಆಂಡ್ ಪೀಸ್', 'ಅಂಡರ್ಸ್ಟ್ಯಾಂಡಿಂಗ್ ಮಾವೋಯಿಸ್ಟ್ಸ್', ಮತ್ತು 'ಆರ್ಸಿಪಿ ರಿವ್ಯೂ' ಪುಸ್ತಕಗಳು ಮತ್ತು ನ್ಯಾಷನಲ್ ಸ್ಟಡಿ ಸರ್ಕಲ್ ಹೊರಡಿಸಿದ ಸುತ್ತೋಲೆಗಳು ಕೂಡ ಗೋನ್ಸಲ್ವೆಸ್ ಅವರ ಮನೆಯಲ್ಲಿ ಸಿಕ್ಕಿದ್ದವು ಎಂದು ಪೊಲೀಸರು ಪ್ರಸ್ತಾಪಿಸಿದ್ದಾರೆ.
''ರಾಜ್ಯ ದಮನ್ ವಿರೋಧಿ ಎಂಬ ಸಿ.ಡಿಯ ಶೀರ್ಷಿಕೆಯೇ ರಾಜ್ಯದ ವಿರುದ್ಧ ಏನೋ ಇದೆ ಎಂಬುದನ್ನು ತೋರಿಸುತ್ತದೆ. ವಾರ್ ಆಂಡ್ ಪೀಸ್, ಬೇರೊಂದು ದೇಶದ ಯುದ್ಧದ ಕುರಿತಾಗಿದೆ. ನೀವೇಕೆ ವಾರ್ ಆಂಡ್ ಪೀಸ್ನಂತಹ ಪುಸ್ತಕ ಹಾಗೂ ಸಿಡಿಗಳಂತಹ ಆಕ್ಷೇಪಾರ್ಹ ವಸ್ತುಗಳನ್ನು ಇರಿಸಿಕೊಂಡಿದ್ದೀರಿ? ಇದರ ಬಗ್ಗೆ ನ್ಯಾಯಾಲಯಕ್ಕೆ ನೀವು ವಿವರಣೆ ನೀಡಬೇಕು'' ಎಂದು ನ್ಯಾಯಮೂರ್ತಿ ಸೂಚನೆ ನೀಡಿದರು.
ಪುಸ್ತಕ, ಸಿ.ಡಿಗಳೇ ದೊಡ್ಡ ಪುರಾವೆ
ಗೋನ್ಸಲ್ವೆಸ್ ಅವರ ಜಾಮೀನಿಗೆ ವಿರೋಧ ವ್ಯಕ್ತಪಡಿಸಿದ ಪೊಲೀಸರ ಪರ ವಕೀಲ ಅರುಣಾ ಪೈ, ಅವರ ಮನೆಯಿಂದ ವಶಪಡಿಸಿಕೊಳ್ಳಲಾದ ಕಂಪ್ಯೂಟರ್ ಅಥವಾ ಹಾರ್ಡ್ಡಿಸ್ಕ್ಗಳಲ್ಲಿ ಯಾವುದೇ ಪುರಾವೆ ಸಿಕ್ಕಿಲ್ಲ. ಆದರೆ, ಆಕ್ಷೇಪಾರ್ಹ ಶೀರ್ಷಿಕೆಗಳುಳ್ಳ ಪುಸ್ತಕ ಮತ್ತು ಸಿ.ಡಿಗಳಂತಹ ವಸ್ತುಗಳು ಅತಿ ದೊಡ್ಡ ಪುರಾವೆಗಳಾಗಿವೆ ಎಂದು ಹೇಳಿದರು.
ಮಾವೋವಾದಿ ನಂಟು; ಒಂದು ಸಾಕ್ಷ್ಯವಾದರೂ ಕೋರ್ಟ್ ಮುಂದಿಡಿ ಎಂದ ಸುಪ್ರೀಂ
ನಿಷೇಧಿಕ ಮಾವೋ ಗುಂಪಿಗೆ ಸೇರಿಲ್ಲ
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಗೋನ್ಸಲ್ವೆಸ್ ಪರ ವಕೀಲ ಮಿಹಿರ್ ದೇಸಾಯಿ, ಅಂತಹ ಪುಸ್ತಕ ಮತ್ತು ಸಿ.ಡಿಗಳನ್ನು ಇರಿಸಿಕೊಂಡ ಮಾತ್ರಕ್ಕೆ ಗೋನ್ಸಲ್ವೆಸ್ ಅವರು ಭಯೋತ್ಪಾದಕರಾಗುವುದಿಲ್ಲ. ಅವರು ಯಾವುದೇ ನಿಷೇಧಿತ ಮಾವೋವಾದಿ ಗುಂಪಿಗೆ ಸೇರಿಲ್ಲ ಎಂದು ವಾದಿಸಿದರು.
ಪುಸ್ತಕ ಇದ್ದ ಮಾತ್ರಕ್ಕೆ ಭಯೋತ್ಪಾದಕರಾಗೊಲ್ಲ
ಅಂತಹ ವಸ್ತುಗಳನ್ನು ಇರಿಸಿಕೊಂಡ ಮಾತ್ರಕ್ಕೆ ಯಾರೂ ಭಯೋತ್ಪಾದಕರಾಗುವುದಿಲ್ಲ ಎಂಬುದನ್ನು ಒಪ್ಪಿಕೊಂಡ ನ್ಯಾಯಮೂರ್ತಿ ಕೋತ್ವಾಲ್, ಆದರೆ ಅಂತಹ ವಸ್ತುಗಳನ್ನು ಮನೆಯಲ್ಲಿ ಇರಿಸಿಕೊಂಡಿದ್ದಕ್ಕೆ ಅವರು ವಿವರಣೆ ನೀಡಬೇಕು ಎಂದು ಹೇಳಿದರು.
ಜತೆಗೆ, ಪುಣೆ ಪೊಲೀಸರೂ ಕೂಡ ತಾವು ಕಂಡ ಪುಸ್ತಕ ಮತ್ತು ಸಿ.ಡಿಗಳ ಬಗ್ಗೆ ವಿವರಣೆ ನೀಡಬೇಕು ಎಂದು ನ್ಯಾಯಮೂರ್ತಿ ಸೂಚಿಸಿದರು. ಈ ಪ್ರಕರಣದಲ್ಲಿ ಗೋನ್ಸಲ್ವೆಸ್ ಅವರಿಗೆ ನಂಟು ಇದೆ ಎನ್ನುವುದಕ್ಕೆ ಸಿಡಿ, ಪುಸ್ತಕ ಹಾಗೂ ಪಾಂಪ್ಲೆಟ್ಗಳ ಬಗ್ಗೆ ವಿವರಣೆ ನೀಡಲು ಪೊಲೀಸರು ವಿಫಲರಾಗಿದ್ದಾರೆ. ಆಕ್ಷೇಪಾರ್ಹ ಶೀರ್ಷಿಕೆ ಇದೆ ಎಂಬುದಷ್ಟೇ ಸಾಲದು. ನೀವು ಸಿ.ಡಿಗಳನ್ನು ಪರೀಕ್ಷಿಸಿದ್ದೀರಾ? ಅದು ಖಾಲಿ ಇದ್ದರೆ ಏನು? ಎಂದು ಪ್ರಶ್ನಿಸಿದರು.