'ನೀವು ಟೈಟಾನಿಕ್ ಸಿನಿಮಾ ನೋಡಿದ್ದೀರಾ?': ಅರ್ಜಿದಾರನಿಗೆ ಬಾಂಬೆ ಕೋರ್ಟ್ ಪ್ರಶ್ನೆ
ಮುಂಬೈ, ಮಾರ್ಚ್ 10: 'ನೀವು ಟೈಟಾನಿಕ್ ಸಿನಿಮಾ ನೋಡಿದ್ದೀರಾ? ನಾನು ಅದರ ಕ್ಯಾಪ್ಟನ್ನಂತೆ' ಎಂದು ಅರ್ಜಿದಾರರಿಗೆ ಬಾಂಬೆ ಹೈಕೋರ್ಟ್ ಹೇಳಿದ ಪ್ರಸಂಗ ಬುಧವಾರ ನಡೆದಿದೆ. ವಕೀಲರು, ನ್ಯಾಯಾಧೀಶರಿಗೆ ಆದ್ಯತೆಯ ಮೇರೆಗೆ ಕೋವಿಡ್ ಲಸಿಕೆಗಳನ್ನು ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ಮುಂದೂಡಿದ ಬಾಂಬೆ ಹೈಕೋರ್ಟ್, ಕೆಲವು ನಿರ್ಧಾರಗಳನ್ನು ಕಾರ್ಯಾಂಗದ ವಿವೇಕಕ್ಕೆ ಬಿಡಬೇಕು ಎಂದಿದೆ.
ನ್ಯಾಯಾಂಗಕ್ಕೆ ಮೊದಲು ಕೋವಿಡ್ ಲಸಿಕೆಗಳನ್ನು ನೀಡಲು ಆದ್ಯತೆ ಕೊಡಬೇಕೆಂಬ ಅರ್ಜಿದಾರರ ಮನವಿ ಅತಿಯಾದ ಸ್ವಾರ್ಥ ಎಂದು ಕೋರ್ಟ್ ಹೇಳಿದೆ.
ಪಾಕಿಸ್ತಾನಕ್ಕೆ ಭಾರತದಿಂದ 45 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆ
ನ್ಯಾಯಾಂಗದ ಸದಸ್ಯರಿಗೆ, ವಕೀಲರಿಗೆ ಮತ್ತು ಅವರ ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಬೇಕು. ಅವರಿಗೆ ಆದ್ಯತೆ ಆಧಾರದಲ್ಲಿ ಕೋವಿಡ್ ಲಸಿಕೆಗಳನ್ನು ನೀಡಬೇಕು ಎಂದು ಮುಂಬೈ ಮೂಲದ ವಕೀಲರ ತಂಡವು ಅರ್ಜಿ ಸಲ್ಲಿಸಿತ್ತು.
ಸಾಂಕ್ರಾಮಿಕದ ಅವಧಿಯುದ್ದಕ್ಕೂ ಹೈಕೋರ್ಟ್ ಕೆಲಸ ನಿರ್ವಹಿಸಿದೆ. ಎಲ್ಲ ವಕೀಲರು, ನ್ಯಾಯಾಧೀಶರು ಮತ್ತು ಸಿಬ್ಬಂದಿ ವೈರಾಣು ಸೋಂಕು ತಗುಲುವ ಅಪಾಯದ ನಡುವೆಯೂ ಕೆಲಸ ಮುಂದುವರಿಸಿದ್ದಾರೆ ಎಂದು ಮುಖ್ಯ ನ್ಯಾಯಮೂರ್ತಿ ದಿಪಾಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿಎಸ್ ಕುಲಕರ್ಣಿ ಅವರ ಪೀಠದ ಮುಂದೆ ಅರ್ಜಿದಾರ ವಕೀಲರಾದ ವೈಷ್ಣವಿ ಘೋಳವೆ ಮತ್ತು ಯೋಗೇಶ್ ಮೊರ್ಬಾಲೆ ಸಲ್ಲಿಸಿದ್ದ ಮನವಿಯಲ್ಲಿ ಹೇಳಿದ್ದರು.
'ಸ್ವಚ್ಛತಾ ಕೆಲಸಗಾರರು, ವಿವಿಧ ಖಾಸಗಿ ಸಂಸ್ಥೆಗಳ ಸಿಬ್ಬಂದಿ ಕೂಡ ಈ ಅವಧಿಯಲ್ಲಿ ಕೆಲಸ ಮಾಡಿದ್ದಾರೆ. ಖಾಸಗಿ ಸಂಘಸಂಸ್ಥೆಗಳ ಪರವಾಗಿ, ಡಬ್ಬಾವಾಲಾಗಳ ಪರವಾಗಿ ಏಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಲ್ಲ? ಆ ಅರ್ಥದಲ್ಲಿ ಎಲ್ಲರೂ ಮುಂಚೂಣಿ ಕೆಲಸಗಾರರೇ' ಎಂದು ನ್ಯಾಯಪೀಠ ಹೇಳಿತು.
ಕೊರೊನಾ ಭಯದಲ್ಲಿ ಪ್ರಯಾಣಿಕರ ಮೇಲೆ ಸರ್ಕಾರದ ನಿರ್ಬಂಧ!
'ನೀವು ಟೈಟಾನಿಕ್ ಸಿನಿಮಾ ನೋಡಿದ್ದೀರಾ? ಆ ಹಡಗಿನ ಕ್ಯಾಪ್ಟನ್ನನ್ನು ನೆನಪಿಸಿಕೊಳ್ಳುತ್ತೀರಾ? ಪ್ರತಿಯೊಬ್ಬರನ್ನೂ ಸ್ಥಳಾಂತರ ಮಾಡುವವರೆಗೂ ಆತ ಅಲ್ಲಿ ಕಾಯಬೇಕಿತ್ತು. ಮೊದಲು ಎಲ್ಲರಿಗೂ ಲಸಿಕೆ ಸಿಗಲಿ. ಬಳಿಕ ನ್ಯಾಯಾಂಗ. ನಾನಿಲ್ಲಿ ಅದರ ಕ್ಯಾಪ್ಟನ್ ಆಗಿದ್ದೇನೆ' ಎಂದು ಮುಖ್ಯ ನ್ಯಾಯಮೂರ್ತಿ ದತ್ತಾ ಹೇಳಿದರು.