ಪಿಎಂ ಕೇರ್ಸ್ ಫಂಡ್ ವೆಬ್ನಿಂದ ಮೋದಿ ಹೆಸರು, ಭಾವಚಿತ್ರ ತೆಗೆಯಲು ಕೋರ್ಟ್ಗೆ ಪಿಐಎಲ್
ಮುಂಬೈ, ಅಕ್ಟೋಬರ್ 12: ಕೊರೊನಾ ವೈರಸ್ ಸೋಂಕು ಸಂದರ್ಭದಲ್ಲಿ ಆರಂಭವಾದ ಪಿಎಂ ಕೇರ್ಸ್ ನಿಧಿಯ ವೆಬ್ತಾಣದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರು ಹಾಗೂ ಅವರ ಭಾವಚಿತ್ರವನ್ನು ತೆಗೆದು ಹಾಕಲು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದು ಸಲ್ಲಿಕೆಯಾಗಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರವು ಈ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಸೂಚನೆ ನೀಡಿದೆ.
ಬಾಂಬೆ ಹೈಕೋರ್ಟ್ಗೆ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕಾಂಗ್ರೆಸ್ ಸದಸ್ಯ ವಿಕ್ರಾಂತ್ ಚವ್ಹಾಣ್ ಎಂಬುವವರು ಸಲ್ಲಿಕೆ ಮಾಡಿದ್ದಾರೆ. ಪಿಎಂ ಕೇರ್ಸ್ ಫಂಡ್ ವೆಬ್ತಾಣದಿಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರು ಹಾಗೂ ಭಾವಚಿತ್ರವನ್ನು ತೆಗೆದು ಹಾಕಬೇಕು ಎಂದು ಕಾಂಗ್ರೆಸ್ ಸದಸ್ಯ ವಿಕ್ರಾಂತ್ ಚವ್ಹಾಣ್ ಆಗ್ರಹ ಮಾಡಿದ್ದಾರೆ.
PM cares Fund: ಭಾರತ ಸರ್ಕಾರದ ನಿಧಿ ಅಲ್ವಂತೆ, ಹಾಗಾದ್ರೆ ಮತ್ಯಾರದ್ದು.!?
ಇನ್ನು ಪ್ರಧಾನ ಮಂತ್ರಿ ಮಂತ್ರಿ ನರೇಂದ್ರ ಮೋದಿ ಹೆಸರು ಹಾಗೂ ಭಾವಚಿತ್ರ ಮಾತ್ರವಲ್ಲದೇ ಪಿಎಂ ಕೇರ್ಸ್ ಫಂಡ್ ವೆಬ್ತಾಣದಿಂದ ರಾಷ್ಟ್ರ ಲಾಂಛನ, ರಾಷ್ಟ್ರಧ್ವಜದ ಚಿತ್ರಗಳನ್ನೂ ಸಹ ಕೈಬಿಡಬೇಕು. ರಾಷ್ಟ್ರದ ಲಾಂಛನವನ್ನು ಈ ರೀತಿಯಾಗಿ ಬಳಸುವಂತಿಲ್ಲ. ರಾಷ್ಟ್ರದ ಲಾಂಛನದ ಅಸಮರ್ಪಕ ಬಳಕೆಯ ನಿಯಂತ್ರಣ ಕಾಯಿದೆಯ ಉಲ್ಲಂಘನೆಯನ್ನು ಈ ಮೂಲಕ ಮಾಡಲಾಗಿದೆ ಎಂದು ಪಿಐಎಲ್ನಲ್ಲಿ ಕಾಂಗ್ರೆಸ್ ಸದಸ್ಯ ವಿಕ್ರಾಂತ್ ಚವ್ಹಾಣ್ ಆರೋಪ ಮಾಡಿದ್ದಾರೆ.
"ಪ್ರೈಮ್ ಮಿನಿಸ್ಟರ್ಸ್ ಸಿಟಿಜನ್ ಅಸಿಸ್ಟೆನ್ಸ್ ಅಂಡ್ ರಿಲೀಫ್ ಇನ್ ಎಮೆರ್ಜೆನ್ಸಿ ಸಿಚುಯೇಷನ್ಸ್ ಫಂಡ್" ಅಂದರೆ ಪಿಎಂ ಕೇರ್ಸ್ ಫಂಡ್ನಿಂದ ನಿರ್ದಿಷ್ಟವಾಗಿ ಪ್ರೈಮ್ ಮಿನಿಸ್ಟರ್ ಎಂಬ ಎರಡು ಪದವನ್ನು ತೆಗೆದು ಹಾಕಬೇಕು ಎಂದು ಪಿಐಎಲ್ ಮೂಲಕ ಒತ್ತಾಯಿಸಲಾಗಿದೆ.
ಸರ್ಕಾರದ ಯಾವುದೇ ಪಾಲು ಈ ನಿಧಿಯಲ್ಲಿ ಇಲ್ಲ. ಪಿಎಂ ಕೇರ್ಸ್ ನಿಧಿಯು ಒಂದು ಖಾಸಗಿ ಸಂಸ್ಥೆಗಳು ನೀಡುವ ದೇಣಿಗೆಯನ್ನು ಸ್ವೀಕಾರ ಮಾಡುವ ಸಂಸ್ಥೆಯಾಗಿದೆ. ತುರ್ತುಪರಿಸ್ಥಿತಿ, ವಿಪತ್ತಿನ ವೇಳೆ ಪರಿಹಾರ ನೀಡುವ ಸಲುವಾಗಿ ಇದು ಇದೆ. ಹಾಗಿರುವಾಗ ಇದರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೆಸರು ಹಾಗೂ ಅವರ ಭಾವಚಿತ್ರ ಇರುವುದು ಸರಿಯಲ್ಲ ಎಂಬುವುದು ಕಾಂಗ್ರೆಸ್ ಸದಸ್ಯ ವಿಕ್ರಾಂತ್ ಚವ್ಹಾಣ್ ವಾದವಾಗಿದೆ.
ಪಿಎಂ ಕೇರ್ಸ್ ಫಂಡ್ ವಿಚಾರದಲ್ಲಿ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಭಾರೀ ವಾಗ್ವಾದವು ನಡೆದಿದೆ. ವಿರೋಧ ಪಕ್ಷಗಳು ನಿರಂತರವಾಗಿ ಈ ಫಂಡ್ಗೆ ಹರಿದು ಬಂದಿರುವ ಹಣದ ಬಗ್ಗೆ ಲೆಕ್ಕಾಚಾರವನ್ನು ಕೇಂದ್ರ ಸರ್ಕಾರದ ಬಳಿ ಕೇಳಿದೆ. ಪಿಎಂ ಕೇರ್ಸ್ ಫಂಡ್ ನಿಧಿಯ ಬಗ್ಗೆ ಮಾಹಿತಿ ಕೋರಿ ಕಳೆದ ವರ್ಷದಿಂದ ಹಲವಾರು ಮಂದಿ ಬೇಡಿಕೆ ಮುಂದಿಟ್ಟಿದ್ದಾರೆ. ಇದರಂತೆ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿಯೂ ಪಿಎಂ ಕೇರ್ಸ್ ಬಗ್ಗೆ ಮಾಹಿತಿ ನೀಡುವಂತೆ ಇತ್ತೀಚೆಗೆ ಆರ್ಟಿಐ ಅರ್ಜಿಗಳು ಸಲ್ಲಿಕೆಯಾಗಿದೆ. ಆದರೆ ಸರ್ಕಾರ ಮಾತ್ರ "ಇದು ಸರ್ಕಾರದ ಹಣವಲ್ಲ. ಆದ್ದರಿಂದ ಈ ಪಿಎಂ ಕೇರ್ಸ್ ಫಂಡ್ ಬಗ್ಗೆ ಸರ್ಕಾರ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ," ಎಂದು ಹೇಳಿದೆ.
ಈ ಬಗ್ಗೆ ದೆಹಲಿ ಹೈಕೋರ್ಟ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನ ಮಂತ್ರಿ ಕಾರ್ಯಾಲಯದ ಅಧೀನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶ್ರೀವಾಸ್ತವ, "ಭಾರತದ ಕಾನೂನಿನಡಿಯಲ್ಲಿ ಚ್ಯಾರಿಟೇಬಲ್ ಟ್ರಸ್ಟ್ ಆಗಿರುವ ಪಿಎಂ ಕೇರ್ಸ್ ಫಂಡ್ ಭಾರತ ಸರ್ಕಾರದ ಅಧೀನದಲ್ಲಿ ಬರುವ ಸಂಸ್ಥೆಯಲ್ಲ. ಈ ಫಂಡ್ಗೆ ಬರುವ ಹಣವು ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾಗೆ ಸೇರುವುದಿಲ್ಲ," ಎಂದು ಹೇಳಿಕೊಂಡಿದ್ದಾರೆ.
2020 ರಲ್ಲಿ ಮಾರ್ಚ್ 27 ರಂದು ಈ ಪ್ರಧಾನ ಮಂತ್ರಿ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪರಿಹಾರ ನಿಧಿಯನ್ನು (PM cares Fund) ಕೇಂದ್ರ ಸರ್ಕಾರದಿಂದ ಸ್ಥಾಪನೆ ಮಾಡಲಾಗಿದ್ದು, ಈವರೆಗೂ ಕೇಂದ್ರ ಸರ್ಕಾರದ ಫಂಡ್ ಎಂದೇ ನಂಬಲಾಗಿದೆ. ಅದಕ್ಕೆ ಮುಖ್ಯ ಕಾರಣ ಈ ಫಂಡ್ಗೆ ನಿಧಿ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿರುವುದು. ಇದರ ಪ್ರಧಾನ ಕಚೇರಿಯು ಪ್ರಧಾನ ಮಂತ್ರಿ ಕಚೇರಿ ಆಗಿದೆ. ಹಾಗೆಯೇ ಇದರ ಅಧ್ಯಕ್ಷತೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ವಹಿಸಿಕೊಂಡಿದ್ದಾರೆ. ಈ ನಿಧಿಯ ಸದಸ್ಯ ಸ್ಥಾನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಇದ್ದಾರೆ ಎಂದು PM CARES Fund ಮಾಹಿತಿ ತಿಳಿಸಿದೆ.
(ಒನ್ಇಂಡಿಯಾ ಸುದ್ದಿ)