ಬಾಂಬ್ ಬೆದರಿಕೆ: ಸಚಿನ್ ವಾಜೆಗೆ ಏಪ್ರಿಲ್ 23ರವರೆಗೆ ನ್ಯಾಯಾಂಗ ಬಂಧನ
ಮುಂಬೈ, ಏಪ್ರಿಲ್ 9: ಉದ್ಯಮಿ ಮುಕೇಶ್ ಅಂಬಾನಿ ಅವರ ಮನೆಯ ಸಮೀಪ ಸ್ಫೋಟಕ ತುಂಬಿದ್ದ ವಾಹನ ನಿಲ್ಲಿಸಿದ್ದ ಪ್ರಕರಣ ಹಾಗೂ ಉದ್ಯಮಿ ಮನ್ಸುಖ್ ಹಿರೇನ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿನ್ ವಾಜೆಗೆ ಏ.23ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಾರ್ಚ್ 13ರಂದು ಸಚಿನ್ ವಾಜೆಯನ್ನು ಎನ್ಐಎ ವಶಕ್ಕೆ ಪಡೆದುಕೊಂಡಿತ್ತು. ವಿಶೇಷ ನ್ಯಾಯಾಧೀಶರಾದ ಪಿಆರ್ ಸಿತ್ರೆ ಅವರು ವಾಜೆಯನ್ನು ಏ.23ರವರೆಗೆ ನ್ಯಾಯಾಂಗ ಬಂಧನದಲ್ಲಿರಿಸುವಂತೆ ಆದೇಶಿಸಿದ್ದಾರೆ.
ಸಚಿನ್ ವಾಜೆ ಜತೆ ಕಾಣಿಸಿದ್ದ ಮಹಿಳೆ ಯಾರು?: ಎನ್ಐಎಗೂ ಉತ್ತರ ಸಿಗದ ಪ್ರಶ್ನೆ
ಮುಕೇಶ್ ಅಂಬಾನಿ ಮನೆ ಎದುರು ಫೆ.25ರಂದು ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ಈ ವಾಹನ ಉದ್ಯಮಿ ಮನ್ಸುಖ್ ಹಿರೇನ್ ಅವರಿಗೆ ಸೇರಿದ್ದಾಗಿತ್ತು.
ಮಾ.5 ರಂದು ಮನ್ಸುಖ್ ಹಿರೇನ್ ನಿಗೂಢವಾಗಿ ಸಾವನ್ನಪ್ಪಿದ್ದರು. ಈ ಎರಡೂ ಪ್ರಕರಣಗಳಲ್ಲಿ ಸಚಿನ್ ವಾಜೆ ಅವರ ಪಾತ್ರ ಇರುವುದು ಸಾಬೀತುಪಡಿಸಲು ಹಲವು ಸಾಕ್ಷ್ಯಗಳು ಲಭ್ಯವಾಗಿದ್ದವು.
ಹಿರೇನ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ ಸಭೆಯಲ್ಲಿ ಸಚಿನ್ ವಾಜೆ ಅವರು ಕೂಡ ಇದ್ದರು ಎಂಬುದನ್ನು ಎನ್ಐಎ ಮಾಹಿತಿ ಪಡೆದಿತ್ತು. ಈ ಕುರಿತು ಪ್ರತಿಯೊಂದು ವಿವರವನ್ನು ಎನ್ಐಎ ನ್ಯಾಯಾಲಯದ ಮುಂದಿರಿಸಿದೆ. ಇದೀಗ ಕೋರ್ಟ್ ಸಚಿನ್ ವಾಜೆಯವರಿಗೆ ಏ.23ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.