ಭೀತಿ ಹುಟ್ಟಿಸಿದ ದೋಣಿ ಆಸ್ಟ್ರೇಲಿಯಾದದ್ದು: ದೇವೇಂದ್ರ ಫಡ್ನವೀಸ್
ಮುಂಬೈ ಆಗಸ್ಟ್ 18: ಮುಂಬೈನಿಂದ 190 ಕಿಮೀ ದೂರದಲ್ಲಿರುವ ರಾಯಗಢದ ಹರಿಹರೇಶ್ವರ ಬೀಚ್ ಬಳಿ ಮೂರು ಎಕೆ 47 ಹೊತ್ತೊಯ್ಯುತ್ತಿದ್ದ ದೋಣಿಯೊಂದು ಪತ್ತೆಯಾಗಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಈ ದೋಣಿ ಆಸ್ಟ್ರೇಲಿಯದ ದಂಪತಿಗೆ ಸೇರಿದ್ದು, ಇಂಜಿನ್ ತೊಂದರೆಯಿಂದ ಅದನ್ನು ಬಿಟ್ಟು ಹೋಗಲಾಗಿದೆ ಎಂದು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಮೇಲ್ನೋಟಕ್ಕೆ ಯಾವುದೇ ಭಯೋತ್ಪಾದನೆಯ ಉದ್ದೇಶವಿಲ್ಲ. ಆದರೆ ಅದು ಶಸ್ತ್ರಾಸ್ತ್ರಗಳನ್ನು ಏಕೆ ಸಾಗಿಸುತ್ತಿತ್ತು ಎಂಬುದು ಸ್ಪಷ್ಟವಾಗಿಲ್ಲ.
ಹಾನಿಗೊಳಗಾದ ದೋಣಿಯನ್ನು ಮುಂಬೈನಿಂದ 190 ಕಿಮೀ ದೂರದಲ್ಲಿರುವ ರಾಯಗಢದ ಹರಿಹರೇಶ್ವರ ಬೀಚ್ ಬಳಿ ಮೀನುಗಾರರು ಪತ್ತೆ ಮಾಡಿದ್ದಾರೆ. ಅದರಲ್ಲಿ ಮೂರು ಎಕೆ-47 ರೈಫಲ್ಗಳು, ಬುಲೆಟ್ಗಳು ಮತ್ತು ದಾಖಲೆಗಳು ಪತ್ತೆಯಾಗಿವೆ.
ಮಹಾರಾಷ್ಟ್ರದ ಗೃಹ ಇಲಾಖೆಯನ್ನು ನಿರ್ವಹಿಸುತ್ತಿರುವ ದೇವೇಂದ್ರ ಫಡ್ನವಿಸ್, "ದೋಣಿ ಪತ್ತೆಯ ಬಳಿಕ ಇದರ ಹಿಂದೆ ಯಾವುದೇ ಭಯೋತ್ಪಾದನೆಯ ಕೋನ ಇಲ್ಲ. ಆದರೆ ತನಿಖೆ ನಡೆಯುತ್ತಿದೆ. ಸದ್ಯಕ್ಕೆ ನಾವು ಯಾವುದೇ ಕೋನವನ್ನು ತಳ್ಳಿಹಾಕಲು ಸಾಧ್ಯವಿಲ್ಲ. ನಾನು ಪ್ರಾಥಮಿಕ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೇನೆ. ಇದರಿಂದ ಆತಂಕಕ್ಕೆ ಒಳಗಾಗಬೇಕಿಲ್ಲ" ಎಂದಿದ್ದಾರೆ.
"ಅಲ್ಲದೆ ದೋಣಿಯಲ್ಲಿ ಮದ್ದುಗುಂಡುಗಳು ಏಕೆ ಇದ್ದವು ಎಂದು ನಾವು ಈಗ ಹೇಳಲು ಸಾಧ್ಯವಿಲ್ಲ. ಈ ವಿಷಯವನ್ನು ತನಿಖೆ ನಡೆಸಲಾಗುತ್ತಿದೆ. ನಾವು ಕೇಂದ್ರ ಏಜೆನ್ಸಿಗಳೊಂದಿಗೆ ಸಂಪರ್ಕದಲ್ಲಿದ್ದೇವೆ ಮತ್ತು ಅವರು ಈ ಮಾಹಿತಿಯನ್ನು ಖಚಿತಪಡಿಸುತ್ತಾರೆ" ಎಂದು ಫಡ್ನವಿಸ್ ಹೇಳಿದರು.
ಸದ್ಯಕ್ಕೆ ಸ್ಥಳೀಯ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳ ಈ ಬಗ್ಗೆ ತನಿಖೆ ನಡೆಸುತ್ತಿದೆ. ಲೇಡಿ ಹಾನ್ ಎಂದು ಕರೆಯಲ್ಪಡುವ ದೋಣಿಯು ಆಸ್ಟ್ರೇಲಿಯಾದ ಪ್ರಜೆ ಹಾನಾ ಲಾಂಡರ್ಗನ್ ಅವರ ಒಡೆತನದಲ್ಲಿದೆ. ಅವರ ಪತಿ ಜೇಮ್ಸ್ ಹಾರ್ಬರ್ಟ್ ಕ್ಯಾಪ್ಟನ್ ಆಗಿದ್ದಾರೆ ಎಂದು ಫಡ್ನವಿಸ್ ಹೇಳಿದ್ದಾರೆ.
ಜೂನ್ 26 ರಂದು 16 ಮೀಟರ್ ಬೋಟ್ ಮಸ್ಕತ್ ಮೂಲಕ ಯುರೋಪ್ಗೆ ತೆರಳುತ್ತಿದ್ದಾಗ ಎಂಜಿನ್ನಲ್ಲಿ ತೊಂದರೆ ಕಾಣಿಸಿಕೊಂಡಿತು. ಅಂದು ಮಧ್ಯಾಹ್ನ 1 ಗಂಟೆ ಸುಮಾರಿಗೆ ದೋಣಿಯ ಸಿಬ್ಬಂದಿಯನ್ನು ರಕ್ಷಿಸಲಾಯಿತು. ಆದರೆ ದೋಣಿಯನ್ನು ಎಳೆಯಲಾಗದೆ ಕೈಬಿಡಲಾಯಿತು. ಕೊನೆಗೆ ಆ ದೋಣಿ ಹರಿಹರೇಶ್ವರ ತೀರವನ್ನು ತಲುಪಿದೆ. ದೋಣಿ ಪತ್ತೆಯಾದ ಬಳಿಕ ಕರಾವಳಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಕೋಸ್ಟ್ ಗಾರ್ಡ್ ಮತ್ತು ಇತರ ಏಜೆನ್ಸಿಗಳಿಗೆ ಮಾಹಿತಿ ನೀಡಲಾಗಿದೆ. ಘಟನೆಯ ಕುರಿತು ವಿಶೇಷ ತನಿಖೆ ನಡೆಸುವಂತೆ ಮಹಾರಾಷ್ಟ್ರ ಮುಖ್ಯಮಂತ್ರಿಗೆ ಮನವಿ ಮಾಡಿರುವುದಾಗಿ ರಾಯಗಢ ಶಾಸಕಿ ಅದಿತಿ ತಟ್ಕರೆ ಹೇಳಿದ್ದಾರೆ.