ಹಳೆಯ ಮರಗಳ ಉಳಿವಿಗಾಗಿ 'ಸರ್ಜನ್' ನೇಮಕ ಮಾಡಿದ ಬಿಎಂಸಿ
ಮುಂಬೈ, ಜೂನ್ 21: ಬೃಹನ್ ಮುಂಬೈ ಮಹಾನಗರ ಪಾಲಿಕೆಯು ಹಳೆಯ ಮರಗಳ ಉಳಿವಿಗಾಗಿ 'ಸರ್ಜನ್' ನೇಮಕ ಮಾಡಿದೆ.
ಮುಂಬೈನ ಹಳೆಯ ಮರಗಳನ್ನು ಬೀಳತಂದೆ ರಕ್ಷಿಸಲು ಶಸ್ತ್ರಚಿಕಿತ್ಸಕರನ್ನು ನೇಮಕ ಮಾಡಿದೆ. ಇವರುಗಳು ಮರದಲ್ಲಿ ಉತ್ಪತ್ತಿಯಾಗುವ ಶಿಲೀಂಧ್ರ ಸೋಂಕು, ಕೊಳೆಯುವುದು ಅಥವಾ ಇನ್ಯಾವುದೇ ದುರ್ಬಲತೆಯನ್ನು ಪತ್ತೆ ಹಚ್ಚಿ ಅವುಗಳಿಗೆ ಚಿಕಿತ್ಸೆ ನೀಡಲಿದ್ದಾರೆ.
ಯೋಜನೆಯ ಭಾಗವಾಗಿ ಮುಂಬೈನ ಮಲಬಾರ್, ಟಾರ್ಡಿಯೋ ಹಾಗೂ ಪೆಡ್ಡಾರ್ ರಸ್ತೆಯಂತಹ ಸ್ಥಳಗಳನ್ನು ಒಳಗೊಂಡಿರುವ ಬಿಎಂಸಿಯ ಡಿ ವಾರ್ಡ್ನ್ನು ವೈಭವ್ ರಾಜೆ ನೋಡಿಕೊಳ್ಳಲಿದ್ದಾರೆ.
ಆರ್ಬಾರಿಸ್ಟ್ ಅಥವಾ ಆರ್ಬೋರಿಕಲ್ಚರಿಸ್ಟ್ಗಳೆಂದು ಕರೆಯಲ್ಪಡುವ ಈ ಮಂದಿ ಹಳೆಯ ಮರಗಳ ಅಧ್ಯಯನ ನಡೆಸಿ ಅವುಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುತ್ತಾರೆ.
''ಪ್ರವಾಹ ಉಂಟಾದಾಗ ಅಥವಾ ಬಾರಿ ಮಳೆಯಾದಾಗ ಅಥವಾ ಇನ್ಯಾವುದೇ ಕಾರಣಗಳಿಗೆ ಮರ ಬೀಳುವ ಸಾಧ್ಯತೆ ಇರುತ್ತದೆ. ಕೊಳೆಯುವ ರೆಂಬೆಗಳು, ಶಿಲೀಂಧ್ರ ಸೋಂಕು ಅಥವಾ ಸಡಿಲವಾದ ಬೇರುಗಳ ಕಾರಣಗಳಿಂದ ಮರಗಳು ಬೀಳಬಹುದು ಇಂಥ ವಿಷಯಗಳು ಹೊರಗಿನಿಂದ ಗೊತ್ತಾಗುವುದಿಲ್ಲ.
ಇದರಿಂದಾಗುವ ಅಪಘಾತಗಳನ್ನು ತಗ್ಗಿಸಿ, ಇಂಥ ಮರಗಳು ಬೀಳುವುದನ್ನು ತಪ್ಪಿಸಲೆಂದು ಮುಂಚೂಣಿಯಾಗಿಯೇ ಈ ಮರಗಳ ನೆರವಿಗೆ ಬರಲೆಂದು ನನ್ನನ್ನು ನೇಮಿಸಲಾಗಿದೆ'' ಎಂದು ವೈಭವ್ ರಾಜೆ ಹೇಳಿದ್ದಾರೆ.
''ದೇಶೀಯ ಮರಗಳನ್ನು ಹೆಚ್ಚಾಗಿ ಉತ್ತೇಜಿಸುವ ಮೂಲಕ ಮಣ್ಣಿನ ಸವೆತದಿಂದ ನಗರವನ್ನು ಕಾಪಾಡಲು ಬಿಎಂಸಿ ಮುಂದಾಗಿದೆ'' ಎಂದು ನಗರದ ಮೇಯರ್ ಕಿಶೋರಿ ಪಡ್ನೇಕರ್ ತಿಳಿಸಿದ್ದಾರೆ.