ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನಾ ಘಟಕದಲ್ಲಿ ಸ್ಫೋಟ
ಮುಂಬೈ, ಏಪ್ರಿಲ್ 13: ಕೊರೊನಾವೈರಸ್ ಸೋಂಕು ಹೆಚ್ಚಾಗಿ ಹರಡಿರುವ ರಾಜ್ಯಗಳ ಪೈಕಿ ರೆಡ್ ಅಲರ್ಟ್ ಜೋನ್ ನಲ್ಲಿರುವ ಮಹಾರಾಷ್ಟ್ರದಲ್ಲಿ ಇಂದು ದುರಂತ ಸಂಭವಿಸಿದೆ. ಲಾಕ್ಡೌನ್ ಸಂದರ್ಭದಲ್ಲೂ ಅಗತ್ಯ ವಸ್ತುಗಳ ಉತ್ಪಾದನೆಗೆ ರಾಜ್ಯ ಸರ್ಕಾರ ಒತ್ತು ನೀಡಿದೆ. ಹ್ಯಾಂಡ್ ಸ್ಯಾನಿಟೈಸರ್ ಉತ್ಪಾದನಾ ಘಟಕವೊಂದರಲ್ಲಿ ಸ್ಫೋಟ ಸಂಭವಿಸಿದೆ.
Recommended Video
ಮಹಾರಾಷ್ಟ್ರದ ಪಾಲ್ಘರ್ನ ತಾರಾಪುರ ಪ್ರದೇಶದಲ್ಲಿ ರಾಸಾಯನಿಕ ಕಾರ್ಖಾನೆ ಘಟಕವೊಂದರಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ.
ತಾರಾಪುರ ರಾಸಾಯನಿಕ ವಲಯದಲ್ಲಿರುವ ಸ್ಯಾನಿಟೈಸರ್ ಮತ್ತು ಹ್ಯಾಂಡ್ ವಾಶ್ ಘಟಕದಲ್ಲಿ ಒಟ್ಟು 66 ಕಾರ್ಮಿಕರು ಕಾರ್ಯ ನಿರತರಾಗಿದ್ದಾಗ ಈ ದುರ್ಘಟನೆ ಸಂಭವಿಸಿದೆ.
ಸೋಮವಾರ ಬೆಳಿಗ್ಗೆ 11ಕ್ಕೆ ಹ್ಯಾಂಡ್ ವಾಶ್ ಘಟಕದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ನಂತರ ದೊಡ್ಡ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಮೃತಪಟ್ಟವರನ್ನು ವಿಜಯ್ ಪಾಂಡುರಂಗ್ ಸಾವಂತ್ ಹಾಗೂ ಸಮೀರ್ ಶಹಬುದ್ದೀನ್ ಖ್ವಾಜಾ ಎಂದು ಗುರುತಿಸಲಾಗ್ದೆ. ರುನಾಲ್ ಪ್ರಭಾಕರ್ ಎಂಬುವರಿಗೆ ತೀವ್ರವಾಗಿ ಗಾಯಗಳಾಗಿವೆ ಎಂದು ಪಾಲ್ಘಾರ್ ಜಿಲ್ಲಾಧಿಕಾರಿ ಹೇಳಿದ್ದಾರೆ.
ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸ್ಯಾನಿಟೈಸರ್, ಹ್ಯಾಂಡ್ ವಾಶ್, ಸೋಪು, ಮಾಸ್ಕ್ ಗಳ ಬೇಡಿಕೆ ಹೆಚ್ಚಾಗಿದೆ.
ಸದ್ಯ, ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸೂಕ್ಷ್ಮ ಪ್ರದೇಶ ಅಂದ್ರೆ ಮುಂಬೈ. ಅದರಲ್ಲೂ ಮುಂಬೈನ ಧಾರವಿ ಮತ್ತು ವಾರ್ಲಿ ಕೊಲಿವಾಡ ಪ್ರದೇಶಗಳಲ್ಲಿ ಹೆಚ್ಚು ಸೋಂಕಿತರ ಪತ್ತೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ 1982ಕ್ಕೂ ಅಧಿಕ ಪ್ರಕರಣ ದಾಖಲಾಗಿದೆ. ಮೃತರ ಸಂಖ್ಯೆ 149ಕ್ಕೇರಿದೆ. ಮಹಾರಾಷ್ಟ್ರದಲ್ಲಿ ಏಪ್ರಿಲ್ 30ರ ತನಕ ಲಾಕ್ಡೌನ್ ವಿಸ್ತರಿಸಲಾಗಿದೆ.