ಮಹಾರಾಷ್ಟ್ರ: ಪರಿಷತ್ ಚುನಾವಣೆಯಲ್ಲೂ ಬಿಜೆಪಿಗೆ ಮುಖಭಂಗ
ಮುಂಬೈ, ಡಿಸೆಂಬರ್ 4: ಮಹಾರಾಷ್ಟ್ರ ಚುನಾವಣೆಯಲ್ಲಿ ಬಿಜೆಪಿ ಮತ್ತೊಂದು ಹಿನ್ನಡೆ ಅನುಭವಿಸಿದೆ. ಈ ವಾರದ ಆರಂಭದಲ್ಲಿ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ನಡೆದಿದ್ದ ಚುನಾವಣೆಯಲ್ಲಿ ಬಿಜೆಪಿ ಕೇವಲ ಒಂದು ಕ್ಷೇತ್ರದಲ್ಲಿ ಜಯಗಳಿಸಿದೆ. ಆಡಳಿತಾರೂಢ ಶಿವಸೇನಾ-ಎನ್ಸಿಪಿ-ಕಾಂಗ್ರೆಸ್ ಮೈತ್ರಿಕೂಟ ನಾಲ್ಕು ಸ್ಥಾನಗಳನ್ನು ಗೆದ್ದಿದ್ದರೆ, ಇನ್ನೊಂದು ಸ್ಥಾನ ಪಕ್ಷೇತರ ಅಭ್ಯರ್ಥಿಯ ಪಾಲಾಗಿದೆ.
ಈ ಚುನಾವಣೆಯಲ್ಲಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಶಿವಸೇನಾ ಒಂದೂ ಸ್ಥಾನದಲ್ಲಿ ಗೆಲುವು ಕಂಡಿಲ್ಲ. ಅಮರಾವತಿಯಲ್ಲಿ ಸ್ಪರ್ಧಿಸಿದ್ದ ಶಿವಸೇನಾದ ಏಕೈಕ ಅಭ್ಯರ್ಥಿ ಸೋಲುಂಡಿದ್ದಾರೆ. ಆದರೆ, ಶಿವಸೇನಾದ ಮಿತ್ರಪಕ್ಷಗಳು ನಾಲ್ಕು ಸ್ಥಾನಗಳಲ್ಲಿ ಗೆಲುವಿನ ನಗೆ ಬೀರಿವೆ.
ಜಾತಿವಾರು ಆಧಾರಿತ ಪ್ರದೇಶಗಳಿಗೆ ಮರುನಾಮಕರಣ: ಮಹಾರಾಷ್ಟ್ರ ಮಹತ್ವದ ನಿರ್ಧಾರ
ಬಿಜೆಪಿ ತನ್ನ ಪ್ರಾಬಲ್ಯವಿರುವ ಕ್ಷೇತ್ರಗಳನ್ನು ಕಳೆದುಕೊಂಡಿದೆ. ಪದವೀಧರ ಕ್ಷೇತ್ರಗಳಲ್ಲಿ ಅದು ಸೋಲು ಅನುಭವಿಸಿದೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಮತ್ತು ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ತಂದೆ ಗಂಗಾಧರ ರಾವ್ ಫಡ್ನವೀಸ್ ಪ್ರತಿನಿಧಿಸಿದ್ದ ಪಕ್ಷದ ಪ್ರಬಲ ನೆಲೆಯಾದ ನಾಗಪುರದ ಕ್ಷೇತ್ರದಲ್ಲಿಯೂ ಸೋಲಿನ ಕಹಿ ಅನುಭವಿಸಿದೆ. ನಿತಿನ್ ಗಡ್ಕರಿ ಅವರು 1989ರಲ್ಲಿ ಮೊದಲ ಬಾರಿಗೆ ಇಲ್ಲಿಗೆಲುವು ಕಂಡಿದ್ದರು. 2014ರ ಲೋಕಸಭೆ ಚುನಾವಣೆಯಲ್ಲಿ ಸಂಸತ್ಗೆ ಆಯ್ಕೆಯಾಗುವ ಮುನ್ನ ನಾಲ್ಕು ಬಾರಿ ಜಯಗಳಿಸಿದ್ದರು.
ದೇವೇಂದ್ರ ಫಡ್ನವೀಸ್, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್ ಪಾಟೀಲ್ ಸೇರಿದಂತೆ ಅನೇಕ ಮುಖಂಡರು ತೀವ್ರ ಪ್ರಚಾರ ನಡೆಸಿದ್ದ ಪುಣೆಯಲ್ಲಿ ಆಡಳಿತ ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.
'ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆಯ ಫಲಿತಾಂಶ ನಾವು ನಿರೀಕ್ಷಿಸಿದ ಮಟ್ಟಕ್ಕೆ ಇಲ್ಲ. ಇನ್ನಷ್ಟು ಸ್ಥಾನಗಳಲ್ಲಿ ಗೆಲ್ಲುವ ನಿರೀಕ್ಷೆ ಹೊಂದಿದ್ದೆವು. ಆದರೆ ಒಂದರಲ್ಲಿ ಮಾತ್ರ ಗೆದ್ದಿದ್ದೇವೆ. ಮೂರು ಪಕ್ಷಗಳ ಸಂಯೋಜಿತ ಶಕ್ತಿಯನ್ನು ತಪ್ಪಾಗಿ ಲೆಕ್ಕ ಹಾಕಿದ್ದೆವು' ಎಂದು ಫಡ್ನವೀಸ್ ಹೇಳಿದ್ದಾರೆ.
ದಕ್ಷಿಣ ಚಿತ್ರೋದ್ಯಮಕ್ಕೂ ಹೋಗ್ತೀರಾ? ಮುಂಬೈಗೆ ಮಾತ್ರವೇ?: ಯೋಗಿಗೆ ಶಿವಸೇನಾ ಪ್ರಶ್ನೆ
ಶರದ್ ಪವಾರ್ ಅವರ ಎನ್ಸಿಪಿ ಔರಂಗಾಬಾದ್ ಮತ್ತು ಪುಣೆ ಪದವೀಧರ ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಎನ್ಸಿಪಿ ಮತ್ತು ಕಾಂಗ್ರೆಸ್ ತಲಾ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದರೆ ಶಿವಸೇನಾ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸಿತ್ತು. ಬಿಜೆಪಿ ನಾಲ್ಕು ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಇನ್ನೊಂದು ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿಗೆ ಬೆಂಬಲ ನೀಡಿತ್ತು.