ಶಿವಸೇನೆ ಜತೆ ಬಿಜೆಪಿ ಸೇರಿಯೇ ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆ: ಫಡ್ನವೀಸ್
ಮುಂಬೈ (ಮಹಾರಾಷ್ಟ್ರ), ಅಕ್ಟೋಬರ್ 30: ಬಿಜೆಪಿ ಮತ್ತು ಶಿವಸೇನಾ ಮಧ್ಯೆ ಅಧಿಕಾರ ಹಂಚಿಕೆ ತಿಕ್ಕಾಟದ ಬಗ್ಗೆ ದೇವೇಂದ್ರ ಫಡ್ನವೀಸ್ ಸ್ಪಷ್ಟನೆ ನೀಡಿದ್ದು, ಸದ್ಯದಲ್ಲೇ ಶಿವಸೇನೆ ಜತೆ ಸೇರಿ ಸರ್ಕಾರ ರಚನೆ ಮಾಡುವುದಾಗಿ ಬುಧವಾರ ಹೇಳಿದ್ದಾರೆ. 'ಪರ್ಯಾಯ ಸೂತ್ರಗಳನ್ನು' ಯೋಚಿಸಲಾಗುತ್ತಿದೆ ಎಂಬ ವದಂತಿಯನ್ನು ಅವರು, ಅವೆಲ್ಲ 'ಮನರಂಜನೆ'ಗೆ ಹರಿಬಿಟ್ಟಿರುವ ಸುದ್ದಿ ಎಂದರು.
ಮಹಾರಾಷ್ಟ್ರದಲ್ಲಿ ಯಾವ ದುಷ್ಯಂತ್ ಇಲ್ಲ: ಬಿಜೆಪಿಗೆ ಶಿವಸೇನಾ ಟಾಂಟ್
ಮೈತ್ರಿ ಪಕ್ಷ ಶಿವಸೇನೆಗೆ ಕೂಡ ಮುಖ್ಯಮಂತ್ರಿ ಹುದ್ದೆಯನ್ನು ಕೆಲ ಕಾಲಕ್ಕೆ ಬಿಟ್ಟುಕೊಡಬೇಕು ಎಂಬ ಬೇಡಿಕೆ ಮಧ್ಯೆಯೇ ಫಡ್ನವೀಸ್ ಅವರನ್ನು ಬುಧವಾರದಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆರಿಸಲಾಯಿತು. "ಮಹಾರಾಷ್ಟ್ರದ ಜನರು ಮಹಾ ಮೈತ್ರಿ (ಬಿಜೆಪಿ- ಶಿವಸೇನೆ) ಕೂಟಕ್ಕೆ ಮತ ನೀಡಿದ್ದಾರೆ. ಆದ್ದರಿಂದ ಇದೇ ಮಹಾಮೈತ್ರಿ ಸರ್ಕಾರವನ್ನು ರಚಿಸುತ್ತದೆ" ಎಂದು ಫಡ್ನವೀಸ್ ಹೇಳಿದ್ದಾರೆ.
ಸರ್ಕಾರ ರಚನೆ ವಿಚಾರವಾಗಿ ಸಿಕ್ಕಾಪಟ್ಟೆ ವದಂತಿಗಳು ಹರಿದಾಡುತ್ತಿವೆ, ಅವೆಲ್ಲ ಮನರಂಜನೆ ಥರದವು ಎಂದು ವ್ಯಂಗ್ಯವಾಡಿದ್ದಾರೆ. 1995ರ ನಂತರ 288 ಸದಸ್ಯ ಬಲದ ಮಹಾರಾಷ್ಟ್ರ ವಿಧಾನಸಭೆಯಲ್ಲಿ ಯಾವುದೇ ಪಕ್ಷ 75 ಸ್ಥಾನಕ್ಕಿಂತ ಹೆಚ್ಚು ಪಡೆದಿಲ್ಲ. ಅದರೆ ಬಿಜೆಪಿ 2014ರಲ್ಲಿ ನೂರಾ ಇಪ್ಪತ್ತೆರಡು ಹಾಗೂ ಈ ಬಾರಿ 105 ಸ್ಥಾನಗಳಲ್ಲಿ ಗೆದ್ದಿದೆ ಎಂದು ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ.