ಹೈಕಮಾಂಡ್ ಸೂಚಿಸಿದರೆ ಪಕ್ಷ ಬಿಡಲು ಸಿದ್ಧ: ಶತ್ರುಘ್ನ ಸಿನ್ಹಾ
ಮುಂಬೈ, ಜನವರಿ 22: ಬಿಜೆಪಿಯೊಳಗಿದ್ದೇ ಪಕ್ಷದ ವಿರುದ್ಧ ನಿರಂತರ ಹೇಳಿಕೆಗಳನ್ನು ನೀಡುವ ಮೂಲಕ ಕಠಿಣ ಕ್ರಮದ ಬೆದರಿಕೆ ಎದುರಿಸುತ್ತಿರುವ ಸಂಸದ ಶತ್ರುಘ್ನ ಸಿನ್ಹಾ, ತಮ್ಮ ಅನುಕಂಪ ವಿರೋಧಪಕ್ಷಗಳ ಮೇಲಿದ್ದು, ಹೈಮಾಂಡ್ ಸೂಚಿಸಿದ ದಿನವೇ ಪಕ್ಷ ತ್ಯಜಿಸಲು ಸಿದ್ಧ ಎಂದು ತಿಳಿಸಿದ್ದಾರೆ.
ಪ್ರಧಾನಿ ಹುದ್ದೆಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೂಕ್ತ ಅಭ್ಯರ್ಥಿ ಎಂದೂ ಹೇಳಿದ್ದಾರೆ.
ಮೋದಿ ಸಂದರ್ಶನವನ್ನು ಹೀನಾಮಾನ ಟೀಕಿಸಿದ ಶತ್ರುಘ್ನ ಸಿನ್ಹಾ
'ಟೈಮ್ಸ್ ನೌ ನ್ಯೂಸ್'ಗೆ ನೀಡಿದ ಸಂದರ್ಶನದಲ್ಲಿ ಅವರು, ಪಕ್ಷ ಹಾಗೂ ರಾಜಕಾರಣದ ಕುರಿತು ನಿರ್ಭಿಡೆಯಿಂದ ಮಾತನಾಡಿದ್ದಾರೆ.
'ನಿಮ್ಮ ರಾಜಕೀಯದ ಭವಿಷ್ಯದ ಬಗ್ಗೆ ಅನೇಕ ಅಂತೆಕಂತೆಗಳಿವೆ. ಬಿಜೆಪಿಯೊಂದಿಗಿನ ನಿಮ್ಮ ನಂಟು ಅಂತ್ಯಗೊಳ್ಳಲಿದೆ ಎಂದು ಹೇಳಬಹುದೇ? ಸುಶೀಲ್ ಮೋದಿ ಹಾಗೆ ಅಭಿಪ್ರಾಯ ಪಟ್ಟಿದ್ದಾರಲ್ಲ?' ಎಂಬ ಪ್ರಶ್ನೆಗೆ, 'ಯಾರು ಈ ಮೋದಿ? ನನಗೆ ಬಿಜೆಪಿಯಲ್ಲಿ ಗೊತ್ತಿರುವುದು ಒಂದೇ ಮೋದಿ. ನಿಜವಾದ ಆಕ್ಷನ್ ಹೀರೋ, ನಮ್ಮ ಪ್ರಧಾನಿ, ಗೌರವಾನ್ವಿತ ನರೇಂದ್ರ ಮೋದಿಜಿ. ನನಗೆ ಏನು ಮಾಡಬೇಕೆಂದು ಹೇಳುವ ಈ ಸಣ್ಣಪುಟ್ಟವರೆಲ್ಲ ಯಾರು? ನನ್ನ ಹೆಸರು ಬಳಸುವ ಬದಲು ಪ್ರಚಾರಕ್ಕಾಗಿ ಬೇರೆ ಏನಾದರೂ ಮಾರ್ಗ ಕಂಡುಕೊಳ್ಳುವಂತೆ ಅವರಿಗೆ ದಯವಿಟ್ಟು ತಿಳಿಸಿ. ಪಕ್ಷ ಬಿಡುವ ವಿಚಾರದಲ್ಲಿ ಹೈಕಮಾಂಡ್ ಹೇಳಲಿ. ಆಗಲೇ ನಾನು ಪಕ್ಷ ಬಿಡುವೆ ಎಂದರು.
'ಪ್ರಧಾನಿ ಹುದ್ದೆಗೆ ಖಂಡಿತವಾಗಿಯೂ ಮಮತಾ ಬ್ಯಾನರ್ಜಿ ಅರ್ಹರು. ರಾಜ್ಯಕ್ಕಾಗಿ ಅವರು ಪಟ್ಟ ಶ್ರಮ ಮತ್ತು ತ್ಯಾಗಗಳನ್ನು ನೋಡಿ. ನೆಲಮಟ್ಟದಿಂದ ಬೆಳೆದವರು. ಬಡವರು ಮತ್ತು ಸಾಮಾನ್ಯರಿಗಾಗಿ ಅವರು ಕಾಳಜಿ ಹೊಂದಿದ್ದಾರೆ. ನಮ್ಮ ಪ್ರಧಾನಿಯ ನಿಷ್ಕ್ರಿಯತೆ ಅವರನ್ನು ಜನಸಮೂಹದಿಂದ ದೂರ ಉಳಿಯುವಂತೆ ಮಾಡಿದೆ. ಜನರು ಕೋಪಗೊಂಡಿದ್ದಾರೆ. ಅವರಲ್ಲಿ ಹತಾಶೆಯ ಮನೋಭಾವ ಮೂಡಿದೆ ಎಂದು ಹೇಳಿದರು.