ಮುರಿದು ಬಿದ್ದ ಬಿಜೆಪಿ-ಶಿವಸೇನಾ 'ಮಹಾ' ಮೈತ್ರಿ
ಮುಂಬೈ, ಸೆ.25: ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆ ಸೀಟು ಹಂಚಿಕೆಗಾಗಿ ವಾರಗಟ್ಟಲೇ ಕಿತ್ತಾಟ ನಡೆಸಿದ ಬಿಜೆಪಿ -ಶಿವಸೇನಾ ತಮ್ಮ 'ಚುನಾವಣಾ' ಮೈತ್ರಿಯನ್ನು ಮುರಿದುಕೊಂಡಿವೆ. 25 ವರ್ಷಗಳಿಗೂ ಅಧಿಕ ಬಾಂಧವ್ಯವನ್ನು ಕಡಿದುಕೊಳ್ಳಲಾಗಿದೆ, ಇದರಿಂದ ಮೈತ್ರಿ ಉಳಿಸಿಕೊಳ್ಳಲು ಯತ್ನಿಸಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರಿಗೆ ತೀವ್ರ ಮುಖಭಂಗವಾಗಿದೆ.
ಮೈತ್ರಿ ಮುರಿದುಬಿದ್ದು ಹೋಗಿರುವ ಬಗ್ಗೆ ಬಿಜೆಪಿ ಹಿರಿಯ ನಾಯಕರು ಖಚಿತಪಡಿಸಿದ್ದಾರೆ. ಅದರೆ, ಶಿವಸೇನಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ. ಶಿವಸೇನಾಗೆ 151 ಸೀಟು ನೀಡಲು ಬಿಜೆಪಿಯ ಅನೇಕ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದೇ ಮೈತ್ರಿ ಮುರಿಯಲು ಕಾರಣ ಎನ್ನಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ರಾಜನಾಥ್ ಸಿಂಗ್, ಮಾತುಕತೆ ಇನ್ನೂ ಜಾರಿಯಲ್ಲಿದೆ. ಈಗಲೇ ಏನು ಹೇಳಲಾರೆ ಎಂದಿದ್ದಾರೆ.
ಮಂಗಳವಾರ ಬಿಕ್ಕಟ್ಟು ಇತ್ಯರ್ಥವಾಗಿ ಮಹಾರಾಷ್ಟ್ರದ 288 ವಿಧಾನಸಭಾ ಕ್ಷೇತ್ರಗಳಲ್ಲಿ 151 ಕ್ಷೇತ್ರಗಳಲ್ಲಿ ಶಿವಸೇನಾ ಮತ್ತು ಬಿಜೆಪಿ 130 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ. ಉಳಿದ ಸ್ಥಾನಗಳನ್ನು ಮಿಕ್ಕ ಮಿತ್ರ ಪಕ್ಷಗಳಿಗೆ ಹಂಚಲಾಗುತ್ತಿದೆ. ಎಲ್ಲವೂ ಪ್ರಧಾನಿ ನರೇಂದ್ರ ಮೋದಿ ಅವರ ಅಣತಿಯಂತೆ ನಡೆದಿದೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಘೋಷಿಸಿದ್ದರು. ಈ ಬಗ್ಗೆ ಗುರುವಾರ ಅಧಿಕೃತ ಹೇಳಿಕೆ ಪ್ರಕಟಿಸಬೇಕಿತ್ತು. ಆದರೆ, ತಡರಾತ್ರಿ ವೇಳೆಗೆ ಅಮಿತ್ ಶಾ ಅವರು ಮುಂಬೈ ಭೇಟಿಯನ್ನು ರದ್ದುಗೊಳಿಸಿದರು.[ನಾನೇ ಸಿಎಂ ಎಂದ ಉದ್ದವ್]
ಯಾವುದೇ ಸೂತ್ರಕ್ಕೆ ಉಭಯ ಪಕ್ಷಗಳು ಒಪ್ಪದಿರುವ ಹಿನ್ನಲೆಯಲ್ಲಿ ಎರಡು ಕಡೆ ನಾಯಕರು ಸ್ವತಂತ್ರವಾಗಿ ಸ್ಪರ್ಧಿಸಲು ಸಿದ್ಧ ಎಂದಿದ್ದಾರೆ.2009ರಲ್ಲಿ ಶಿವಸೇನೆ 169 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿ 44 ಸ್ಥಾನ ಗೆದ್ದಿತ್ತು. ಅದೇ ರೀತಿ ಬಿಜೆಪಿ 119 ಸ್ಥಾನಗಳಲ್ಲಿ ಸ್ಪರ್ಧಿಸಿ 46 ಕ್ಷೇತ್ರಗಳಲ್ಲಿ ವಿಜೇತರಾಗಿದ್ದರು.
ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 23 ಸ್ಥಾನಗಳನ್ನು ಹಾಗೂ ಶಿವಸೇನೆ 18 ಕ್ಷೇತ್ರಗಳಲ್ಲಿ ಗೆದ್ದಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇರುವುದರಿಂದ ಹೆಚ್ಚು ಸ್ಥಾನ ಬೇಕು ಎಂದು ಬಿಜೆಪಿ ಕೋರಿತ್ತು. ಈ ಮೈತ್ರಿ ಅಂತ್ಯಗೊಂಡ ಬೆನ್ನಲ್ಲೇ 15 ವರ್ಷಗಳ ಎನ್ ಸಿಪಿ ಹಾಗೂ ಕಾಂಗ್ರೆಸ್ ದೋಸ್ತಿ ಕೂಡಾ ಅಂತ್ಯಗೊಳ್ಳುವ ಸಾಧ್ಯತೆಯಿದೆ ಎಂಬ ಸುದ್ದಿ ಬಂದಿದೆ.