ಅಧಿಕಾರ ಕಳೆದುಕೊಂಡಿದ್ದಕ್ಕೆ ಬಿಜೆಪಿಗೆ ಶಿವಸೇನಾ ಬಗ್ಗೆ ಹೊಟ್ಟೆಯುರಿ: ಆದಿತ್ಯ ಠಾಕ್ರೆ
ಮುಂಬೈ, ಡಿಸೆಂಬರ್ 28: ಮಹಾರಾಷ್ಟ್ರದಲ್ಲಿ ಬಿಜೆಪಿ ಈಗ ಅಧಿಕಾರ ಕಳೆದುಕೊಂಡಿರುವುದಕ್ಕೆ ಶಿವಸೇನಾ ಬಗ್ಗೆ ಹೊಟ್ಟೆಯುರಿಪಡುತ್ತಿದೆ ಎಂದು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಲೇವಡಿ ಮಾಡಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, 'ಅವರೀಗ ಅಧಿಕಾರ ಕಳೆದುಕೊಂಡಿರುವುದರಿಂದ ದುಃಖಿತರಾಗಿದ್ದಾರೆ. ಅವರು 'ಬರ್ನಲ್' ಬಳಸಲಿ ಎಂದು ನಾನು ಸಲಹೆ ನೀಡುವುದಿಲ್ಲ. ಅವರ ನೋವು ನಮಗೆ ಅರ್ಥವಾಗುತ್ತದೆ. ಆದರೆ ಜನರು ನಮ್ಮನ್ನು ನಂಬಿರುವುದರಿಂದ ನಾವು ನಮ್ಮ ಕೆಲಸದ ಮೇಲೆ ಗಮನ ಕೊಡುತ್ತೇವೆ. ಸಾಲ ಮನ್ನಾ, 10 ರೂ.ಗೆ ಆಹಾರ ಅಥವಾ ಜನರಿಗೆ ವಸತಿ ಸೌಲಭ್ಯ ಒದಗಿಸುವ ನಮ್ಮ ಭರವಸೆಗಳನ್ನು ಈಡೇರಿಸಲು ಆರಂಭಿಸಿದ್ದೇವೆ' ಎಂದು ಹೇಳಿದರು.
ಫಡ್ನವಿಸ್ ಸರ್ಕಾರದ ಇನ್ನೊಂದು ಆದೇಶವನ್ನು ತಲೆಕೆಳಗಾಗಿಸಿದ ಉದ್ಧವ್
'ಮಹಾ ವಿಕಾಸ್ ಅಘಾಡಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸುವುದನ್ನು ಮುಂದುವರಿಸಲಿದೆ. ನಾವು ಅಂತಹ ಟ್ರಾಲ್ಗಳನ್ನು ಮಾಡುವುದು ಬೇಡ. ಅವರು (ಬಿಜೆಪಿ) ಅಧಿಕಾರದಲ್ಲಿ ಇರುವುದರಿಂದ ಬೇಕಿದ್ದರೆ ನಮ್ಮನ್ನು ಟ್ರಾಲ್ ಮಾಡಿಕೊಂಡಿರಲಿ. ಟ್ರಾಲಿಂಹ್ ಮೂಲಕವಾದರೂ ಅವರು ಬಿಜಿಯಾಗಿರಲಿ. ಅವರು ಇಂಟರ್ನೆಟ್ ಸ್ಥಗಿತಗೊಳಿಸದ ಸ್ಥಳಗಳಿಂದ ನಮ್ಮನ್ನು ಟ್ರಾಲ್ ಮಾಡುತ್ತಿದ್ದಾರೆ. ಅವರು ತಮ್ಮ ಮೊಬೈಲ್ ಫೋನ್ಗಳನ್ನು ಬಳಸುವುದಕ್ಕೆ ಬಿಡುವುದು ಒಳ್ಳೆಯದು. ಅವರು ಅದನ್ನು ಮುಂದುವರಿಸಲಿ. ಅವರಿಗೆ ಅಧಿಕಾರವಿಲ್ಲ. ಹೀಗಾಗಿ ನಮ್ಮ ಮೇಲೆ ಅವರಿಗೆ ಹೊಟ್ಟೆ ಕಿಚ್ಚು' ಎಂದು ವ್ಯಂಗ್ಯವಾಡಿದರು.
ವಡಾಲದಲ್ಲಿ ವ್ಯಕ್ತಿಯೊಬ್ಬನ ಮೇಲೆ ಶಿವಸೇನಾ ಕಾರ್ಯಕರ್ತರು ಅಮಾನುಷವಾಗಿ ವರ್ತಿಸಿದ ಘಟನೆಗೆ ಪ್ರತಿಕ್ರಿಯಿಸಿದ ಅವರು, 'ಈ ಟ್ರಾಲರ್ಗಳು ಕೇವಲ ಶಿವಸೇನಾವನ್ನು ಟ್ರಾಲ್ ಮಾಡುವುದಿಲ್ಲ, ಮಹಿಳೆಯರು ಮತ್ತು ಪತ್ರಕರ್ತೆಯರನ್ನು ಕೂಡ ಟ್ರಾಲ್ ಮಾಡುತ್ತಾರೆ. ಯಾರಾದರೂ ಟ್ರಾಲ್ನಲ್ಲಿಯೇ ಮುಳುಗಿದ್ದರೆ ಬೇರೆಯವರಿಗೆ ಕೋಪ ಬರುವುದು ಸಹಜ. ಆದರೆ ಹಾಗೆ ಸಿಟ್ಟಿಗೇಳಬೇಡಿ ಎಂದು ಜನರಲ್ಲಿ ಮನವಿ ಮಾಡುತ್ತೇನೆ. ಏಕೆಂದರೆ ಜನರು ಅಧಿಕಾರ ಕಳೆದುಕೊಂಡಿದ್ದಾರೆ. ಹಾಗಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ' ಎಂದು ಟೀಕಿಸಿದರು.