ವಿಮಾನ ಹಾರಾಟ ವೇಳೆ ಪೈಲಟ್ಗೆ ಹೃದಯಾಘಾತ, ಬಾಂಗ್ಲಾ ವಿಮಾನ ತುರ್ತು ಭೂಸ್ಪರ್ಶ
ನಾಗ್ಪುರ, ಆಗಸ್ಟ್ 27: ಢಾಕಾದಿಂದ ಮಸ್ಕಟ್ಗೆ ತೆರಳುತ್ತಿದ್ದ ವಿಮಾನದಲ್ಲಿ ಪೈಲಟ್ಗೆ ಹೃದಯಾಘಾತ ಸಂಭವಿಸಿದ ಪರಿಣಾಮ ವಿಮಾನವನ್ನು ಕೂಡಲೇ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿಸಲಾಯಿತು.
ಬೋಯಿಂಗ್ ವಿಮಾನದಲ್ಲಿ ಈ ಸಂದರ್ಭ 126 ಮಂದಿ ಪ್ರಯಾಣಿಕರಿದ್ದರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಾಲಕ ಹೃದಯಾಘಾತಕ್ಕೀಡಾದಾಗ ವಿಮಾನ ಭಾರತದ ಮೇಲೆ ಹಾರುತ್ತಿತ್ತು. ಈ ಸಂದರ್ಭ ಅದೇ ವಿಮಾನದ ಮತ್ತೊಬ್ಬ ವಿಮಾನ ಚಾಲಕ ಕೋಲ್ಕತಾದ ವಿಮಾನ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಪರಿಸ್ಥಿತಿ ವಿವರಿಸಿ ಸಹಾಯ ಯಾಚಿಸಿದ್ದ.
ಢಾಕಾದಿಂದ ಮಸ್ಕಟ್ ಗೆ ತೆರಳುತ್ತಿದ್ದ ಬಾಂಗ್ಲಾದೇಶದ ಬಿಮಾನ್ ಸಂಸ್ಥೆಯ ವಿಮಾನ ಆಕಾಶದಲ್ಲಿ ಹಾರುತ್ತಿದ್ದಾಗಲೇ ವಿಮಾನ ಚಾಲಕ ಹೃದಯಾಘಾತಕ್ಕೀಡಾದ ಘಟನೆ ನಡೆದಿದೆ.
ಕೊರೊನಾ ಕಾರಣದಿಂದ ಮುಚ್ಚಿದ್ದ ಬಿಮಾನ್ ವಿಮಾನಯಾನ ಸಂಸ್ಥೆ ಇತ್ತೀಚಿಗಷ್ಟೆ ಭಾರತ ಸೇರಿದಂತೆ ಕೆಲ ರಾಷ್ಟ್ರಗಳಿಗೆ ವಿಮಾನ ಹಾರಾಟ ಪುನರಾರಂಭಿಸಿತ್ತು.
ಪೈಲಟ್ನನ್ನು ನಾಗ್ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಆತನ ಆರೋಗ್ಯ ಸ್ಥಿತಿ ನಿಯಂತ್ರಣದಲ್ಲಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಒಡನೆಯೇ ಸಹ ಪೈಲಟ್ ಮನವಿಗೆ ಸ್ಪಂದಿಸಿದ ಕೋಲ್ಕತಾದ ವಿಮಾನ ನಿಯಂತ್ರಣ ಕೊಠಡಿಯ ಸಿಬ್ಬಂದಿ ವಿಮಾನವನ್ನು ಹತ್ತಿರದ ನಾಗ್ಪುರದಲ್ಲಿ ಇಳಿಸುವಂತೆ ಸೂಚನೆ ನೀಡಿದ್ದರು. ಅದರಂತೆ ವಿಮಾನ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಿತ್ತು.
ಲ್ಯಾಂಡ್ ಆದ ಬೆನ್ನಲ್ಲೇ ತಕ್ಷಣವೇ ಹೃದಯಾಘಾತಕ್ಕೊಳಗಾದ ಪೈಲೆಟನ್ನು ಆಸ್ಪತ್ರೆ ದಾಖಲಿಸಲಾಗಿದೆ. ಕ್ಯಾಪ್ಟನ್ ಆರೋಗ್ಯ ಮಾಹಿತಿ ಹೊರಬಿದ್ದಿಲ್ಲ. ಇತ್ತ ಬಾಂಗ್ಲಾದೇಶ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ.
ಕೊರೊನಾ ವೈರಸ್ ಕಾರಣ ಅಂತಾರಾಷ್ಟ್ರೀಯ ವಿಮಾನ ಸೇವೆಯನ್ನು ಭಾರತ ಹಾಗೂ ಬಾಂಗ್ಲಾದೇಶ ಸ್ಥಗಿತಗೊಳಿಸಿದೆ. ಇದರ ನಡುವೆ ತುರ್ತು ಕಾರಣಕ್ಕಾಗಿ ಬಾಂಗ್ಲಾದೇಶ ವಿಮಾನ ಲ್ಯಾಂಡ್ ಆಗಲು ಅವಕಾಶ ಮಾಡಿಕೊಟ್ಟಿದೆ.
ಬಾಂಗ್ಲಾದೇಶ ಮನವಿಗೆ ಸ್ಪಂದಿಸಿದ ಭಾರತ, ನಾಗ್ಪುರ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಬಾಂಗ್ಲಾದೇಶ ವಿಮಾನ ತುರ್ತು ಭೂಸ್ಪರ್ಶಕ್ಕೆ ಎಲ್ಲಾ ವ್ಯವಸ್ಥೆ ಮಾಡಲಾಗಿತ್ತು. ಪರಿಣಾಮ ಬಾಂಗ್ಲಾದೇಶ ವಿಮಾನ ನಾಗ್ಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ.